ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್ ಆರಂಭದಲ್ಲಿ ಸ್ಥಗಿತಗೊಳಿಸಲಾಗಿದ್ದ ಕಟ್ಟಡ ನಕ್ಷೆ ಪರವಾನಗಿ ಹಾಗೂ ಇತರ ಶುಲ್ಕ ವಿಧಿಸುವಿಕೆ ಪ್ರಕ್ರಿಯೆಯು ನಾಳೆಯಿಂದ(ಡಿ.13) ಪುನಃ ಜಾರಿಗೆ ಬರಲಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ಇದೇ ಗುರುವಾರದಂದು ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಗಿ ಶುಲ್ಕ, ನೆಲಬಾಡಿಗೆ ಶುಲ್ಕ, ನಕ್ಷೆ ಮಂಜೂರಾತಿ ಶುಲ್ಕ, ಪ್ರಾರಂಭಿಕ ಪ್ರಮಾಣಪತ್ರ ಹಾಗೂ ಸ್ವಾಧಿನಾನುಭವ ಪ್ರಮಾಣಪತ್ರ ಸೇರಿದಂತೆ ನಾನಾ ಶುಲ್ಕಗಳನ್ನು ಸಂಬಂಧಿಸಿದ ಸ್ವತ್ತಿನ ಚಾಲ್ತಿ ಮಾರ್ಗಸೂಚಿ ದರಗಳಿಗೆ ಅನುಗುಣವಾಗಿ ಪಾವತಿಸಿಕೊಳ್ಳುವಂತೆ ಕಚೇರಿ ಆದೇಶ ಹೊರಡಿಸಿದ್ದಾರೆ.
2015ರ ಸೆಪ್ಟೆಂಬರ್ ನಲ್ಲಿ ವಿಧಿಸಿದ ಮಾರ್ಗಸೂಚಿ ದರದ ಶೇಕಡವಾರು ಪ್ರಮಾಣದ ಲೆಕ್ಕಚಾರವನ್ನೇ ಮುಂದುವರೆಸಲು ಆದೇಶದಲ್ಲಿ ತಿಳಿಸಲಾಗಿದೆ. ಕಟ್ಟಡ ಪರವಾನಗಿ ಶುಲ್ಕ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಚದರ ಮೀಟರ್ ಒಂದಕ್ಕೆ ನಿಗಧಿಪಡಿಸಿದ ಹಾಲಿ ಮಾರ್ಗಸೂಚಿದರವನ್ನು ಪರಿಗಣಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ತಮ್ಮ ಕಚೇರಿ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ನಕ್ಷೆ ಮಂಜೂರಾತಿ ಹಂತದಲ್ಲಿ ಕಟ್ಟಡದ ಒಟ್ಟು ನಿರ್ಮಾಣ ವಿಸ್ತೀರ್ಣವನ್ನು ಮಾರ್ಗಸೂಚಿ ದರದ ಶೇಕಡವಾರು ಪ್ರಮಾಣದ ಲೆಕ್ಕವನ್ನು ಪರಿಗಣಿಸಿ, ವಸತಿ ಕಟ್ಟಡ, ವಸತಿಯೇತರ ಅಥವಾ ವಾಣಿಜ್ಯ ಕಟ್ಟಡಗಳ ಪರಿಶೀಲನಾ ಶುಲ್ಕ, ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಡ ಸಾಮಗ್ರಿಗಳನ್ನು ಹಾಕಲು ನೆಲಬಾಡಿಗೆ, ಲೈಸೆನ್ಸ್ ಶುಲ್ಕ, ಪ್ರಾರಂಭಿಕ ಪ್ರಮಾಣಪತ್ರ ಶುಲ್ಕಗಳನ್ನು ವಿಧಿಸುವಂತೆ ಮುಖ್ಯ ಆಯುಕ್ತರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

“ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿ ಆದೇಶದಂತೆ, ಸೋಮವಾರದಿಂದ ಕಟ್ಟಡ ಪರವಾನಗಿ ಶುಲ್ಕ ಪರಿಷ್ಕರಣೆಯನ್ನು ಜಾರಿಗೆ ತರಲಾಗುವುದು. ಆಗಸ್ಟ್ ಪ್ರಾರಂಭದಿಂದ ಕಟ್ಟಡ ನಕ್ಷೆ ಮಂಜೂರಾತಿ ಸ್ಥಗಿತಗೊಳಿಸಲಾಗಿದ್ದು, ಪುನಃ ಪ್ರಾರಂಭ ಮಾಡಲಾಗುತ್ತದೆ” ಎಂದು ಬಿಬಿಎಂಪಿ ನಗರ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ರಘು ‘ಬೆಂಗಳೂರು ವೈರ್’ ಗೆ ತಿಳಿಸಿದ್ದಾರೆ.
ಭೂಮಾಲೀಕರಿಂದ, ರಿಯಲ್ ಎಸ್ಟೇಟ್ ಡೆವಲಪರ್ ಗಳಿಂದ ನೆಲಬಾಡಿಗೆ, ಪರವಾನಗಿ ಶುಲ್ಕ, ಭದ್ರತಾ ಶುಲ್ಕ, ಭದ್ರತಾ ಠೇವಣಿ ಸೇರಿದಂತೆ ಇತರ ಶುಲ್ಕಗಳನ್ನು ಸಂಗ್ರಹಿಸಲು ಬಿಬಿಎಂಪಿ ಬೈಲಾಗಳಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಆ ಬಳಿಕ ಕಟ್ಟಡ ಯೋಜನೆಗಳಿಗೆ ಮಂಜೂರಾತಿ ನೀಡುವುದನ್ನು ಪಾಲಿಕೆಯು ನಿಲ್ಲಿಸಿತ್ತು. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ ಪಾಲನೆಗೆ ಸಂಬಂಧಿಸಿದಂತೆ ಎದುರಾಗಿದ್ದ ಕೆಲವು ತಾಂತ್ರಿಕ ಸಮಸ್ಯೆಗಳ ಹಿನ್ನೆಯಲ್ಲಿ ಆಗಸ್ಟ್ ಆರಂಭದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾನ್ ಸಾಂಕ್ಷನ್ ಮಾಡುವುದನ್ನು ಬಿಬಿಎಂಪಿ ಟೌನ್ ಪ್ಲಾನಿಂಗ್ ವಿಭಾಗ ಸ್ಥಗಿತಗೊಳಿಸಿತ್ತು.
ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತಂದಿದ್ದ ರಾಜ್ಯ ಸರ್ಕಾರ :

ವಿಧಾನಸೌಧದ ಸಾಂದರ್ಭಿಕ ಚಿತ್ರ
ನವೆಂಬರ್ ನಲ್ಲಿ ರಾಜ್ಯ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಕೆಎಂಸಿ ಕಾಯ್ದೆ ಹಾಗೂ ಬಿಬಿಎಂಪಿ ಕಾಯ್ದೆ 2020ಕ್ಕೆ ತಿದ್ದುಪಡಿ ತಂದಿತ್ತು. ಇದರಿಂದಾಗಿ ಬಿಬಿಎಂಪಿಯು ಕಟ್ಟಡ ಪರವಾನಗಿ ಶುಲ್ಕ ಸೇರಿದಂತೆ ನಾನಾ ಶುಲ್ಕ ವಿಧಿಸಲು ಅನುವು ಮಾಡಿಕೊಟ್ಟಿತ್ತು. ಸರ್ಕಾರದ ಸುಗ್ರೀವಾಜ್ಞೆಯಿಂದಾಗಿ ಈಗಾಗಲೇ ಭೂಮಾಲೀಕರು, ರಿಯಲ್ ಎಸ್ಟೇಟ್ ಡೆವಲಪರ್ ಹಾಗೂ ಮತ್ತಿತರರಿಂದ ಶುಲ್ಕ, ದಂಡ ಶುಲ್ಕ ಮಾತ್ತದ ರೂಪದಲ್ಲಿ ಬಿಬಿಎಂಪಿಯು ಸಂಗ್ರಹಿಸಿದ 2,000 ಕೋಟಿ ರೂಪಾಯಿ ಮೊತ್ತವನ್ನು ವಾಪಸ್ ಮಾಡುವ ತೂಗುಗತ್ತಿಯಿಂದ ತಪ್ಪಿಸಿಕೊಂಡಂತಾಗಿದೆ.
ಬಿಬಿಎಂಪಿ ಆಯುಕ್ತರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಗೆ, ಕಟ್ಟಡ ಪರವಾನಗಿ ಶುಲ್ಕ, ನೆಲಬಾಡಿಗೆ ಮತ್ತಿತರ ದರ ನಿಗಧಿ ಕುರಿತಂತೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರು. ನಗರಾಭಿವೃದ್ಧಿ ಇಲಾಖೆಯು, ಬಿಬಿಎಂಪಿ ಮುಖ್ಯ ಆಯುಕ್ತರು ಕೆಎಂಸಿ ಕಾಯ್ದೆ ಹಾಗೂ ಹೊಸ ಬಿಬಿಎಂಪಿ ಕಾಯ್ದೆಯಂತೆ, ಶುಲ್ಕ ದರ ನಿಗಧಿ, ದಂಡ ವಿಧಿಸುವಿಕೆ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರದಲ್ಲಿ ಆದೇಶ ಹೊರಡಿಸಲು ಅಧಿಕಾರ ಹೊಂದಿರುವುದಾಗಿ ಕಾಯ್ದೆಗೆ ತಿದ್ದುಪಡಿ ತಂದಿತ್ತು.
ಅಪಾರ್ಟ್ ಮೆಂಟ್ ಬಿಲ್ಡರ್ ಬಿಟ್ಟು ಹೋದ ಬಾಕಿ ಶುಲ್ಕ ಕಟ್ಟುವ ಹೊರೆ ಯಾರ ಮೇಲೆ? :
ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯಿಂದಾಗಿ ಹೊಸ ಕಟ್ಟಡಗಳ ನಕ್ಷೆ ಮಂಜೂರಾತಿ ಮತ್ತಿತರ ಕಾರ್ಯಗಳಿಗಿದ್ದ ತೊಡಕು ಸದ್ಯದ ಮಟ್ಟಿಗೆ ನಿವಾರಣೆಯಾಗಿದೆ ನಿಜ. ಆದರೆ ಕೆಲವು ಬಿಲ್ಡರ್ ಗಳು ಪಾಲಿಕೆ ಕಟ್ಟಡ ಮಂಜೂರಾತಿ ಶುಲ್ಕ ನಿಗಧಿಯನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿ ಈಗಾಗಲೇ ಕಟ್ಟಡ ನಕ್ಷೆ ಮಂಜೂರಾತಿ, ಪರಿಷ್ಕೃತ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ ಮತ್ತು ಸ್ವಾಧಿನಾನುಭವ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ. ಆದರೆ ಪಾಲಿಕೆಗೆ ನಿಗಧಿತ ಕಟ್ಟಡ ಪರವಾನಗಿ ಶುಲ್ಕ ಪಾವತಿಸದೆ ಅಪಾರ್ಟ್ ಮೆಂಟ್ ಗಳನ್ನು ಗ್ರಾಹಕರಿಗೆ ಮಾರಿ ಹೊರ ನಡೆದಿರುವ ಪ್ರಕರಣದಲ್ಲಿ ಪಾಲಿಕೆಗೆ ಬಾಕಿ ಶುಲ್ಕ ನೀಡುವುದು ಯಾರು ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಈ ಹಂತದಲ್ಲಿ ಬಿಬಿಎಂಪಿ ನಗರ ಯೋಜನಾ ವಿಭಾಗದ ಅಧಿಕಾರಿಗಳು ಒಂದೊಮ್ಮೆ ಬಾಕಿ ಶುಲ್ಕ ಕಟ್ಟುವಂತೆ ಅಪಾರ್ಟ್ ಮೆಂಟ್ ಕೊಂಡ ಗ್ರಾಹಕರಿಗೆ ನೋಟಿಸ್ ನೀಡಿದರೆ ಸಾಲ- ಸೋಲ ಮಾಡಿ ಮನೆ ಕೊಂಡ ಸಾಮಾನ್ಯ ಜನರಿಗೆ ಲಕ್ಷಾಂತರ ರೂಪಾಯಿ ಹಣ ಕಟ್ಟುವ ಹೊರೆ ಬೀಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಮಾರ್ಗಸೂಚಿ ದರದ ಆಧಾರದ ಬದಲು ಏಕರೂಪದ ಶುಲ್ಕ ವ್ಯವಸ್ಥೆ ಜಾರಿ ತಂದರೆ ಉತ್ತಮ :
ಬೆಂಗಳೂರಿನ ನಾಗರೀಕ ಕ್ಷೇಮಾಭಿವೃದ್ಧಿ ಸಂಘಗಳು, ಪ್ರಜ್ಞಾವಂತ ನಾಗರೀಕರು, ಬಿಬಿಎಂಪಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗಧಿಪಡಿಸಿದ ಮಾರ್ಗಸೂಚಿ ದರದ ಆಧಾರದ ಮೇಲೆ ಕಟ್ಟಡ ಪರವಾನಗಿ ಶುಲ್ಕ ವಿಧಿಸುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದಿನೇ ದಿನೇ ದುಬಾರಿಯಾಗುತ್ತಿರುವ ಕಟ್ಟಡ ಸಾಮಗ್ರಿಗಳಿಂದಾಗಿ ಮನೆ ಕಟ್ಟಲು ಪರಿಪಾಡಲು ಪಡುತ್ತಿರುವ ಸಾಮಾನ್ಯ ನಾಗರೀಕರಿಗೆ ಕಟ್ಟಡ ಪರವಾನಗಿ ಶುಲ್ಕವೇ ಲಕ್ಷಗಟ್ಟಲೆ ಬಂದಲ್ಲಿ ಸ್ವಂತ ಸೂರು ಹೊಂದುವುದಾದರೂ ಹೇಗೆ? ಉದಾಹರಣೆಗೆ ರಾಜಾಜಿನಗರದಲ್ಲಿ 30*40 ನಿವೇಶನದಲ್ಲಿ ಕಟ್ಟಡ ಕಟ್ಟಲು, ಬಿಬಿಎಂಪಿಗೆ ಕಟ್ಟಡ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದರೆ, ಆತ ಕಡಿಮೆಯೆಂದರೂ 3 ರಿಂದ 4 ಲಕ್ಷ ರೂ. ಶುಲ್ಕ ಪಾವತಿಸಬೇಕು. ಇದರ ಬದಲು ನಗರದಾದ್ಯಂತ 30*40 ವಿಸ್ತೀರ್ಣದ ನಿವೇಶನದ ತನಕ ವೈಯುಕ್ತಿಕ ಮನೆ ಅಥವಾ ಕಟ್ಟಡ ಕಟ್ಟುವವರಿಗೆ ಸರ್ಕಾರ ಅಥವಾ ಬಿಬಿಎಂಪಿಯು ಏಕರೂಪದ ಶುಲ್ಕ ವ್ಯವಸ್ಥೆಯನ್ನು ಜಾರಿಗೆ ತಂದರೆ ಲಕ್ಷಾಂತರ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಹಾಗಾಗಿ ಈ ವ್ಯವಸ್ಥೆ ಜಾರಿಗೆ ತರುವಂತೆ ಅಭಿಪ್ರಾಯ ವ್ಯಕ್ತವಾಗಿದೆ.

























