ಬೆಂಗಳೂರು,ಜೂ.23 www.bengaluruwire.com: ನಾಡಪ್ರಭು ಕೆಂಪೇಗೌಡರ ದಿನಾಚರಣೆ ಪ್ರಯುಕ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ನಗರ ಪಾಲಿಕೆಗಳು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಬರೋಬ್ಬರಿ 15 ಲಕ್ಷ ಸ್ಥಳೀಯ ತಳಿಗಳ ಸಸಿಗಳನ್ನು ನೆಡುವ ಬೃಹತ್ ‘ಹಸಿರು ಅಭಿಯಾನ’ ಆಯೋಜಿಸಲಾಗಿದೆ.
’ಬೆಂಗಳೂರು ನಗರ ಪುನಶ್ಚೇತನ ಮಿಷನ್ 2026-30’ರ ಅಂಗವಾಗಿ ಜೂನ್ 27 ರಂದು ನಡೆಯುತ್ತಿರುವ ಈ ವಿಶ್ವದಾಖಲೆಯ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಸಂಬಂಧ ಜಿಬಿಎ ಮುಖ್ಯ ಕಚೇರಿಯಲ್ಲಿ ಸೋಮವಾರ ಮಹತ್ವದ ಪೂರ್ವಭಾವಿ ಸಭೆ ನಡೆಸಿ ಅಧಿಕಾರಿಗಳಿಗೆ ಸಮರ್ಪಕ ಮೇಲ್ವಿಚಾರಣೆ ಹಾಗೂ ಸಮನ್ವಯ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ವಿವಿಧ ವಲಯಗಳಲ್ಲಿ ಹಸಿರೀಕರಣ:
ನಗರದ ಹಸಿರು ವಿಸ್ತರಣೆಗೆ ಈ ಅಭಿಯಾನ ಮಹತ್ವದ ಕೊಡುಗೆ ನೀಡಲಿದೆ. ಡಾ. ಶಿವರಾಮ ಕಾರಂತ ಬಡಾವಣೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಕೆರೆ ದಂಡೆಗಳು, ರಾಜಕಾಲುವೆಗಳ ಇಕ್ಕೆಲಗಳು ಹಾಗೂ ವಿವಿಧ ಉದ್ಯಾನವನಗಳಲ್ಲಿ ಸಸಿಗಳನ್ನು ನೆಡಲಾಗುವುದು. ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್ ಪಿ. ಅವರ ಪ್ರಕಾರ, ಒಟ್ಟು 243 ಎಕರೆ ಪ್ರದೇಶವನ್ನು 49 ವಲಯಗಳಾಗಿ ಹಾಗೂ 314 ಸಸಿ ನೆಡುವ ಸ್ಥಳಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ವಲಯದ ಉಸ್ತುವಾರಿಗೆ ಒಬ್ಬ ವಲಯ ಕಮಾಂಡರ್ ಉಪಸ್ಥಿತರಿರುತ್ತಾರೆ.

ಮೂಲಸೌಕರ್ಯ ಮತ್ತು ಸುಗಮ ಸಾರಿಗೆ ವ್ಯವಸ್ಥೆ:
ಅಭಿಯಾನದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮೆಟ್ರೋ ನಿಲ್ದಾಣಗಳಿಂದ ಸಸಿ ನೆಡುವ ಸ್ಥಳಗಳವರೆಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಸುಗಮ ಸಂಚಾರಕ್ಕಾಗಿ ಮೆಟ್ರೋ ರೈಲುಗಳ ಸಂಚಾರ ಆವೃತ್ತಿ (frequency) ಹೆಚ್ಚಳ ಮಾಡಲಾಗುವುದು. ಜತೆಗೆ, ಪಾಲ್ಗೊಳ್ಳುವವರಿಗೆ ಆಹಾರ, ಪೋರ್ಟಬಲ್ ಶೌಚಾಲಯ, ವಾಹನ ನಿಲುಗಡೆ, ಸಮರ್ಪಕ ಬೆಳಕು ಹಾಗೂ ಆರೋಗ್ಯ ತುರ್ತು ಪರಿಸ್ಥಿತಿಗಾಗಿ ವೈದ್ಯರು ಮತ್ತು ನರ್ಸ್ ಗಳ ತಂಡ ಸ್ಥಳದಲ್ಲಿ ಹಾಜರಿರಲಿದೆ.
ಗೌರವ ಪ್ರಮಾಣಪತ್ರ ಹಾಗೂ ಪದಕ ಪ್ರದಾನ:
ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಅಧಿಕೃತ ಡಿಜಿಟಲ್ ಪ್ರಮಾಣಪತ್ರ ಹಾಗೂ ‘ಹಸಿರು ಬೆಂಗಳೂರು ರೂವಾರಿಗಳು’ ಎಂಬ ವಿಶೇಷ ಗೌರವ ಸಿಗಲಿದೆ. ವಿಶ್ವದಾಖಲೆ ಅಭಿಯಾನದಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ನೀಡಿ ಗೌರವಿಸಲಾಗುತ್ತದೆ.
ಕೆಂಪೇಗೌಡರ ದಿನಾಚರಣೆ ಪ್ರಯುಕ್ತ ಮ್ಯಾರಥಾನ್:
ಇದೇ ದಿನ (ಜೂನ್ 27) ಬೆಳಗ್ಗೆ 6 ಗಂಟೆಗೆ ಎಂಎಆರ್ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ 10K ಮತ್ತು 5K ಮ್ಯಾರಥಾನ್ ಕೂಡ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ನೋಂದಣಿ ಮತ್ತು ಸಹಾಯವಾಣಿ ಮಾಹಿತಿ:
ಮ್ಯಾರಾಥಾನ್ ನೋಂದಣಿಗೆ ಭೇಟಿ ನೀಡಿ: https://mysamay.in/e/kempegowdarun
ಸಸಿ ನೆಡುವ ಅಭಿಯಾನದ ಬಗ್ಗೆ ಮಾಹಿತಿ ಹಾಗೂ ನೋಂದಣಿಗೆ: https://greenbengalurubybda.in/
ಹೆಚ್ಚಿನ ಮಾಹಿತಿಗಾಗಿ 24×7 ಸಹಾಯವಾಣಿ ಸಂಖ್ಯೆ: 94831 66622 ಸಂಪರ್ಕಿಸಬಹುದು.
ಸೋಮವಾರ ನಡೆದ ಸಭೆಯಲ್ಲಿ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್, ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್ ಪಿ., ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಕೆ.ಎನ್. ರಮೇಶ್, ಡಾ. ರಾಜೇಂದ್ರ ಕೆ.ವಿ., ಬಿಎಸ್ ಡಬ್ಲ್ಯುಎಂಎಲ್ ಸಿಇಒ ಕರೀಗೌಡ, ವಿಶೇಷ ಆಯುಕ್ತ ವೆಂಕಟಾಚಲಪತಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



















