ಬೆಂಗಳೂರು, ಜೂ.20 www.bengaluruwire.com: ದಿನೇ ದಿನೇ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳು ಹಾಗೂ ಆನ್ಲೈನ್ ವಂಚನೆಗಳಿಗೆ ಬ್ರೇಕ್ ಹಾಕಲು ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಪೊಲೀಸ್ ವೈರ್ಲೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಅಲ್ಲಿನ ಅತ್ಯಾಧುನಿಕ ವ್ಯವಸ್ಥೆಗಳನ್ನು ಪರಿಶೀಲಿಸಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ಸೈಬರ್ ವಂಚನೆಗೆ ಒಳಗಾದ ಹಣವನ್ನು ಬ್ಯಾಂಕ್ಗಳಲ್ಲಿ ತಕ್ಷಣವೇ ಫ್ರೀಜ್ ಮಾಡುವ (Lien Mark) ಪ್ರಕ್ರಿಯೆಯಲ್ಲಿ ಕರ್ನಾಟಕ ಪೊಲೀಸರು ದೇಶದಲ್ಲೇ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಸಾರ್ವಜನಿಕರು ಕಷ್ಟಪಟ್ಟು ದುಡಿದ ಹಣವನ್ನು ಉಳಿಸಲು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳು ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿವೆ.
ವಂಚಕರ ಬ್ಯಾಂಕ್ ಖಾತೆಗಳ ಬ್ಲಾಕ್: ಸಾರ್ವಜನಿಕರ ಹಣ ರಕ್ಷಣೆಯಲ್ಲಿ ಸಾಧನೆ:

ಆನ್ಲೈನ್ ಮೂಲಕ ವಂಚನೆಗೊಳಗಾದ ಸಾರ್ವಜನಿಕರ ಹಣವನ್ನು ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿ ಬ್ಯಾಂಕುಗಳಲ್ಲೇ ತಡೆಹಿಡಿಯುವಲ್ಲಿ (Lien Marked Amount) ಕರ್ನಾಟಕ ಪೊಲೀಸ್ ಇಲಾಖೆ ಭಾರಿ ಯಶಸ್ಸು ಕಂಡಿದೆ.
ರಾಷ್ಟ್ರಮಟ್ಟದ ಸಾಧನೆ: ಮಹಾರಾಷ್ಟ್ರದಲ್ಲಿ ವರದಿಯಾದ ₹3,203 ಕೋಟಿ ವಂಚನೆಯಲ್ಲಿ ₹548 ಕೋಟಿ (17%) ಮೊತ್ತವನ್ನು ಬ್ಲಾಕ್ ಮಾಡಿದ್ದರೆ, ಕರ್ನಾಟಕದಲ್ಲಿ ವರದಿಯಾದ ₹2,640 ಕೋಟಿಯಲ್ಲಿ ₹436 ಕೋಟಿ (17%) ಹಣವನ್ನು ಯಶಸ್ವಿಯಾಗಿ ಫ್ರೀಜ್ ಮಾಡಲಾಗಿದೆ.
2026ರ ಭರ್ಜರಿ ಕಾರ್ಯಾಚರಣೆ: 2026ರ ಮೊದಲ 5 ತಿಂಗಳಲ್ಲೇ (ಜನವರಿಯಿಂದ ಮೇ ವರೆಗೆ) ಸೈಬರ್ ಸಹಾಯವಾಣಿಗೆ ಬರೋಬ್ಬರಿ 10,33,352 ಕರೆಗಳು ಬಂದಿದ್ದು, 90,225 ದೂರುಗಳು ದಾಖಲಾಗಿವೆ. ಈ ಅವಧಿಯಲ್ಲಿ ₹807 ಕೋಟಿಯಷ್ಟು ವಂಚನೆಯಾಗಿದ್ದು, ಪೊಲೀಸರ ತಕ್ಷಣದ ಕಾರ್ಯಾಚರಣೆಯಿಂದಾಗಿ ಈಗಾಗಲೇ ₹216 ಕೋಟಿ (27%) ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಬ್ಲಾಕ್ ಮಾಡಲಾಗಿದೆ.
ತಂತ್ರಜ್ಞಾನದ ಮೊರೆ: ದೂರು ದಾಖಲಾತಿ ಈಗ ಇನ್ನಷ್ಟು ಸುಲಭ:
ಸಾರ್ವಜನಿಕರಿಗೆ ದೂರು ನೀಡಲು ಸುಲಭವಾಗುವಂತೆ ಇಲಾಖೆಯು ಇತ್ತೀಚೆಗೆ ಹಲವು ತಾಂತ್ರಿಕ ಸುಧಾರಣೆಗಳನ್ನು ಪರಿಚಯಿಸಿದೆ.
2025ರಲ್ಲಿ ‘ವೆಬ್-ಆಧಾರಿತ ಕಂಪ್ಲೇಂಟ್ ಬಾಟ್’ ಮತ್ತು 2026 ರಲ್ಲಿ ‘ವಾಟ್ಸಾಪ್ ಕಂಪ್ಲೇಂಟ್ ಬಾಟ್’ (WhatsApp Complaint Bot) ಪರಿಚಯಿಸಿದ ಬಳಿಕ ದೂರು ನೀಡುವವರ ಸಂಖ್ಯೆ ಹೆಚ್ಚಾಗಿದೆ.
ಕರೆಗಳನ್ನು ವಿಂಗಡಿಸಲು ಮತ್ತು ಸ್ವಯಂಚಾಲಿತವಾಗಿ ನಿರ್ವಹಿಸಲು ‘IVRS’ ತಂತ್ರಜ್ಞಾನ ಬಳಸಲಾಗುತ್ತಿದೆ.
ಕಾಲ್ ಡ್ರಾಪ್ (Dropped Calls) ಆದರೂ, ದೂರುಗಳನ್ನು ಅಪ್ಲೋಡ್ ಮಾಡಲು ಸಾರ್ವಜನಿಕರಿಗೆ ಸ್ವಯಂಚಾಲಿತ ಬಾಟ್ ಲಿಂಕ್ ಕಳುಹಿಸುವ ವ್ಯವಸ್ಥೆ ಜಾರಿಯಲ್ಲಿದೆ.
ತ್ವರಿತ ಬ್ಯಾಂಕ್ ಖಾತೆ ಬ್ಲಾಕ್ ಮಾಡಲು ವಿಶೇಷ ತಂಡಗಳ ರಚನೆ:
ಸೈಬರ್ ವಂಚನೆಯಾದ ಹಣವನ್ನು ತಕ್ಷಣವೇ ಫ್ರೀಜ್ (Lien Marking) ಮಾಡಲು ಬ್ಯಾಂಕ್ ಫಾಲೋ-ಅಪ್ ಟೀಮ್ ಎಂಬ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.
I4C (Indian Cyber Crime Coordination Centre) ಪ್ಲಾಟ್ಫಾರ್ಮ್ನಲ್ಲಿ ಬ್ಯಾಂಕ್ ವಹಿವಾಟುಗಳನ್ನು ವೇಗವಾಗಿ ನಿರ್ಬಂಧಿಸಲು 51 ಪಿಎಸ್ಐ ಮತ್ತು ಹೆಡ್ ಕಾನ್ಸ್ಟೆಬಲ್ಗಳನ್ನು ನಿಯೋಜಿಸಲಾಗಿದೆ.
ಇಲಾಖೆಯ ವೈರ್ಲೆಸ್ ಸಿಬ್ಬಂದಿಗೆ ಸೈಬರ್ ಅಪರಾಧ ಹಾಗೂ ಸಿಸ್ಟಮ್ ಅಡ್ಮಿನ್ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ.
ಬ್ಯಾಂಕುಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು, ಸಿಸಿಟಿವಿ ದೃಶ್ಯಾವಳಿಗಳ ವಿನಂತಿ ಹಾಗೂ ಬ್ಲಾಕ್ ಆದ ಹಣವನ್ನು ಸಾರ್ವಜನಿಕರಿಗೆ ಮರಳಿ ಕೊಡಿಸಲು ವಿಶೇಷ ಸಂಪರ್ಕ ಅಧಿಕಾರಿಗಳನ್ನು (Liaison Officers) ಬಳಸಿಕೊಳ್ಳಲಾಗುತ್ತಿದೆ.
”ತಂತ್ರಜ್ಞಾನ ಹಾಗೂ ದಕ್ಷ ಅಧಿಕಾರಿಗಳ ಸಮಯೋಚಿತ ಕ್ರಮದಿಂದಾಗಿ ಕರ್ನಾಟಕವು ಸೈಬರ್ ವಂಚಕರ ಜಾಲವನ್ನು ಭೇದಿಸುವಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದ ಪೊಲೀಸರು ಬಳಸುತ್ತಿರುವ ವೈರ್ಲೆಸ್ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತಷ್ಟು ಸದೃಢಗೊಳಿಸುವುದು ನಮ್ಮ ಉದ್ದೇಶ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ನಮ್ಮ ಗ್ಯಾರಂಟಿ ಸರ್ಕಾರ ಬದ್ಧವಾಗಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.



















