ಬೆಂಗಳೂರು, ಜೂ.18 www.bengaluruwire.com: ನಗರದ ಪ್ರಮುಖ ಸಮಸ್ಯೆಗಳಾದ ಕಸದ ವಿಲೇವಾರಿ ಹಾಗೂ ಹದಗೆಟ್ಟ ರಸ್ತೆಗಳಿಗೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈಗಿರುವ ವ್ಯವಸ್ಥೆಯನ್ನೇ ಸಮರ್ಪಕವಾಗಿ ಬಳಸಿಕೊಂಡು ತ್ಯಾಜ್ಯ ನಿರ್ವಹಣೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ವಾರ್ಡ್ ರಸ್ತೆಗಳ ಅಭಿವೃದ್ಧಿಗೆ ₹2000 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಹಾಗೂ ರಸ್ತೆ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಅವರು ಮಹತ್ವದ ಮಾಹಿತಿ ಹಂಚಿಕೊಂಡರು.
ಕಸದ ಸಮಸ್ಯೆ: 3-4 ತಿಂಗಳಲ್ಲಿ ಗೋಚರಿಸಲಿದೆ ಬದಲಾವಣೆ:

ನಗರದಲ್ಲಿ ಕಸದ ಸಮಸ್ಯೆ ನಿವಾರಣೆಗೆ ಹೊಸ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಒಟ್ಟು 33 ಪ್ಯಾಕೇಜ್ಗಳ ಪೈಕಿ 6 ನ್ಯಾಯಾಲಯದಲ್ಲಿವೆ. ಉಳಿದ 27 ಪ್ಯಾಕೇಜ್ಗಳು ಅಂತಿಮ ಹಂತದಲ್ಲಿವೆ. ಹೊಸ ವ್ಯವಸ್ಥೆ ಜಾರಿಗೆ ಬರುವವರೆಗೆ, ಪ್ರಸ್ತುತ ಇರುವ ಸಿಬ್ಬಂದಿ, ಮಾರ್ಷಲ್ಗಳು ಹಾಗೂ ವಾಹನಗಳನ್ನು ಬಳಸಿಕೊಂಡೇ ಕಸದ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ತ್ಯಾಜ್ಯ ನಿರ್ವಹಣೆಯ ಪ್ರಮುಖ ಕ್ರಮಗಳು:
ರಸ್ತೆ ಬದಿ ಕಸ ಎಸೆದರೆ ದಂಡ: ಆಟೋ ಟಿಪ್ಪರ್ಗಳು ಮನೆ-ಮನೆಗೆ ಬಂದರೂ, ರಸ್ತೆ ಬದಿ ಕಸ ಬಿಸಾಡುವವರ ವಿರುದ್ಧ ದಂಡಾತ್ಮಕ ಕ್ರಮ ಜರುಗಿಸಲಾಗುವುದು.
ವಿಂಗಡಿಸಿದ ಕಸ ಕಡ್ಡಾಯ: ಹಸಿ ಮತ್ತು ಒಣ ತ್ಯಾಜ್ಯ ವಿಂಗಡಿಸದೆ ಕಸ ಸಂಗ್ರಹಿಸಿದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ನಿರ್ದಾಕ್ಷಿಣ್ಯ ಕ್ರಮ.
ವಾಹನಗಳಿಗೆ ಜಿಪಿಎಸ್ (GPS) ಕಡ್ಡಾಯ: ಹೊಸ ಟೆಂಡರ್ ಅಡಿ ಕಾರ್ಯನಿರ್ವಹಿಸುವ ಎಲ್ಲ ಕಸದ ವಾಹನಗಳಿಗೆ ಜಿಪಿಎಸ್ ಕಡ್ಡಾಯ. ಜಿಪಿಎಸ್ ಇಲ್ಲದ ವಾಹನಗಳಿಗೆ ಬಿಲ್ ಪಾವತಿ ಮಾಡುವುದಿಲ್ಲ.
ವಿಶೇಷ ಸ್ವಚ್ಛತಾ ಅಭಿಯಾನ: ರಸ್ತೆ ಬದಿ ಬಿದ್ದಿರುವ ತ್ಯಾಜ್ಯ, ಕಟ್ಟಡದ ಅವಶೇಷಗಳು ಹಾಗೂ ಕಳೆ ಗಿಡಗಳನ್ನು ತೆರವುಗೊಳಿಸಲು ಪಾಲಿಕೆ, ಮೆಟ್ರೋ, ರೈಲ್ವೆ ಮತ್ತು ಬಿಡಿಎ ಸಮನ್ವಯದಲ್ಲಿ ವಿಶೇಷ ಅಭಿಯಾನ.
”ಕಸದ ಸಮಸ್ಯೆ ಬಗೆಹರಿಸಲು ಶೇ. 50ರಷ್ಟು ನಾಗರಿಕರ ಸಹಕಾರ ಅತ್ಯಗತ್ಯ. ನಿಮ್ಮ ಮನೆ ಬಳಿ ಕಸದ ವಾಹನ ಬರದಿದ್ದರೆ ನಮಗೆ ತಿಳಿಸಿ, ವಾಹನ ಕಳುಹಿಸುವುದು ನಮ್ಮ ಜವಾಬ್ದಾರಿ. ಆದರೆ ರಸ್ತೆ ಬದಿ ಕಸ ಎಸೆಯಬೇಡಿ.” – ಕೃಷ್ಣ ಬೈರೇಗೌಡ
ವಾರ್ಡ್ ರಸ್ತೆಗಳಿಗೆ ಕಾಯಕಲ್ಪ: ₹2000 ಕೋಟಿ ಬಿಡುಗಡೆ
ಬೆಂಗಳೂರಿನ ರಸ್ತೆಗಳ ಗುಣಮಟ್ಟ ಸುಧಾರಣೆ ಜನರ ಬಹುದೊಡ್ಡ ನಿರೀಕ್ಷೆಯಾಗಿದೆ. ಮುಖ್ಯ ರಸ್ತೆಗಳನ್ನು ಹೊರತುಪಡಿಸಿ, ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಸಂಪೂರ್ಣ ಹದಗೆಟ್ಟಿರುವ ವಾರ್ಡ್ ರಸ್ತೆಗಳ ಡಾಂಬರೀಕರಣಕ್ಕಾಗಿ ₹2000 ಕೋಟಿ ವಿಶೇಷ ಅನುದಾನ ಮೀಸಲಿಡಲಾಗಿದೆ ಎಂದು ಸಚಿವರು ಘೋಷಿಸಿದರು.
ರಸ್ತೆ ಕಾಮಗಾರಿಯ ಮುಖ್ಯಾಂಶಗಳು: ಅಲ್ಪಾವಧಿ ಟೆಂಡರ್: ಹಾಳಾಗಿರುವ ರಸ್ತೆಗಳನ್ನು ಗುರುತಿಸಿ, ಮುಂದಿನ 2 ತಿಂಗಳೊಳಗೆ ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ.
4 ರಿಂದ 6 ತಿಂಗಳಲ್ಲಿ ಪೂರ್ಣ: ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು, ಮಳೆ ಇಲ್ಲದ ಬಿಡುವಿನ ವೇಳೆಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಿ 4-6 ತಿಂಗಳಲ್ಲಿ ಮುಕ್ತಾಯಗೊಳಿಸುವ ಗುರಿ.
ರಸ್ತೆ ಅಗೆಯುವಂತಿಲ್ಲ: ಕಾಮಗಾರಿ ವೇಳೆ ಎಲ್ಲಾ ಇಲಾಖೆಗಳ ಸಮನ್ವಯ (SOP) ಸಾಧಿಸಲಾಗುವುದು. ಪೂರ್ವಾನುಮತಿ ಇಲ್ಲದೆ ರಸ್ತೆ ಅಗೆಯುವಂತಿಲ್ಲ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ, ಖುದ್ದಾಗಿ ನಾನೇ ಪರಿಶೀಲನೆ ನಡೆಸುತ್ತೇನೆ ಎಂದು ಸಚಿವರು ಎಚ್ಚರಿಸಿದ್ದಾರೆ.
ನಗರದ ಸೌಂದರ್ಯ ಕಾಪಾಡಲು ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ನಾಗರಿಕರು ಈ ಪ್ರಯತ್ನಗಳಿಗೆ ಕೈಜೋಡಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.




















