ನವದೆಹಲಿ / ಬೆಂಗಳೂರು, ಜೂ.12 www.bengaluruwire.com: ರಾಜ್ಯದ ಪೊಲೀಸ್ ಇಲಾಖೆಗೆ ಹೈಟೆಕ್ ಸ್ಪರ್ಶ ನೀಡಲು ಮತ್ತು ಭದ್ರತಾ ಮೂಲಸೌಕರ್ಯಗಳನ್ನು ಸಮಗ್ರವಾಗಿ ಸುಧಾರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮಹತ್ವದ ಮನವಿ ಸಲ್ಲಿಸಿದ್ದಾರೆ.
ಬುಧವಾರ (ಜೂನ್ 12) ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಸಿಎಂ, ಹೊಸ ರಿಸರ್ವ್ ಬೆಟಾಲಿಯನ್ಸ್ ಸೃಷ್ಟಿ, ಪೊಲೀಸ್ ತರಬೇತಿ ಕೇಂದ್ರಗಳ ಮೇಲ್ದರ್ಜೀಕರಣ ಸೇರಿದಂತೆ ಒಟ್ಟು 9 ಪ್ರಮುಖ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಿದ್ದಾರೆ.
’ಪ್ರೆಸಿಡೆಂಟ್ಸ್ ಕಲರ್’ ಗೌರವ ಮತ್ತು ಐಆರ್ಬಿ (IRB) ಬೆಟಾಲಿಯನ್ಸ್ ಸ್ಥಾಪನೆ:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅತ್ಯುತ್ತಮ ಸೇವೆಗೆ ರಾಷ್ಟ್ರಪತಿಗಳ ಅತ್ಯುನ್ನತ ಗೌರವವಾದ ‘ಪ್ರೆಸಿಡೆಂಟ್ಸ್ ಕಲರ್’ ಪ್ರಶಸ್ತಿ ನೀಡುವ ಪ್ರಸ್ತಾವನೆ ಮೇ 2024 ರಿಂದ ಕೇಂದ್ರದ ಪರಿಶೀಲನೆಯಲ್ಲಿದ್ದು, ಶೀಘ್ರವೇ ಈ ಪ್ರತಿಷ್ಠಿತ ಗೌರವ ನೀಡಲು ಅನುಮೋದನೆ ನೀಡಬೇಕು ಎಂದು ಸಿಎಂ ಆಗ್ರಹಿಸಿದರು. ಇದರೊಂದಿಗೆ, ವಿಜಯನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ 243.87 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಎರಡು ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (IRB) ಸ್ಥಾಪಿಸಲು ಮಂಜೂರಾತಿ ಕೋರಿದರು.

ಭದ್ರತೆಗೆ ಹೈಟೆಕ್ ಸ್ಪರ್ಶ: ಸಿಸಿಟಿವಿ, ಜೈಲುಗಳ ಆಧುನೀಕರಣ:
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೂಲಸೌಕರ್ಯಗಳ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್: ರಾಜ್ಯದ 4 ಪ್ರಮುಖ ನಗರಗಳಲ್ಲಿ ಸಂವಹನ ಉಪಕರಣಗಳು ಹಾಗೂ ಕಮಾಂಡ್ ಸೆಂಟರ್ ಸ್ಥಾಪನೆಗೆ ಎಎಸ್ಯುಎಂಪಿ (ASUMP) ಯೋಜನೆಯಡಿ 280 ಕೋಟಿ ರೂ. ಮಂಜೂರು ಮಾಡುವಂತೆ ಮನವಿ.
ಸಿಸಿಟಿವಿ ಮೇಲ್ದರ್ಜೀಕರಣ: ಸುಪ್ರೀಂ ಕೋರ್ಟ್ ಸೂಚನೆಯಂತೆ ಪೊಲೀಸ್ ಠಾಣೆಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೆ ಏರಿಸಲು 278.26 ಕೋಟಿ ರೂ.ಗಳ ಅಗತ್ಯವಿದೆ ಎಂದು ತಿಳಿಸಿದರು.
ಕಾರಾಗೃಹಗಳ ಆಧುನೀಕರಣ: 2025-26 ನೇ ಸಾಲಿಗೆ ಜೈಲುಗಳಲ್ಲಿ ಸಿಸಿಟಿವಿ ಮತ್ತು ವಾಕಿ-ಟಾಕಿ ಸೇರಿದಂತೆ ಭದ್ರತಾ ಉಪಕರಣಗಳ ಖರೀದಿಗೆ 20 ಕೋಟಿ ರೂ. ಬಿಡುಗಡೆ ಮಾಡಲು ಕೋರಿಕೆ.
ಸೈಬರ್ ಅಪರಾಧಗಳಿಗೆ ಬ್ರೇಕ್: 360 ಕೋಟಿಯ ‘K4C’ ಘಟಕ:
ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಅತ್ಯಾಧುನಿಕ ಸೈಬರ್ ಭದ್ರತಾ ವ್ಯವಸ್ಥೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸುಮಾರು 360 ಕೋಟಿ ರೂ. ವೆಚ್ಚದಲ್ಲಿ ‘ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್ ಅಂಡ್ ಕೋಆರ್ಡಿನೇಷನ್ ಯುನಿಟ್’ (K4C) ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಶೀಘ್ರದಲ್ಲೇ ಸಲ್ಲಿಸಲಿರುವ ಡಿಪಿಆರ್ (DPR) ಗೆ ಅನುಮೋದನೆ ನೀಡುವಂತೆ ಗೃಹ ಸಚಿವರಿಗೆ ಸಿಎಂ ವಿವರಿಸಿದರು.
ಸಿಎಸ್ಆರ್ ನಿಧಿ ಬಳಕೆ ಮತ್ತು ತರಬೇತಿ ಕೇಂದ್ರಗಳ ಅಭಿವೃದ್ಧಿ:
* ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಪೊಲೀಸ್ ಸಂಬಂಧಿತ ಚಟುವಟಿಕೆಗಳಿಗೆ ಬಳಸಲು ಅನುಕೂಲವಾಗುವಂತೆ ಕಂಪನಿಗಳ ಕಾಯ್ದೆ-2013 ರ ಶೆಡ್ಯೂಲ್ 7ರ ಅಡಿ ಪೊಲೀಸ್ ಚಟುವಟಿಕೆಗಳನ್ನು ಸೇರ್ಪಡೆ ಮಾಡಲು ಪ್ರಸ್ತಾವನೆ.
* ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲು 258.53 ಕೋಟಿ ರೂ.ಗಳ ಅನುದಾನಕ್ಕೆ ಮನವಿ.
* ಮೋಟಾರು ವಾಹನಗಳ ನಿಯಮ-1989 ರ ನಿಯಮ 52-A ಅನುಷ್ಠಾನದ ಗಡುವನ್ನು ಕರ್ನಾಟಕದಲ್ಲಿ ವಿಸ್ತರಿಸುವಂತೆ ಕೇಂದ್ರಕ್ಕೆ ಆಗ್ರಹ.
ಸೈಬರ್ ಭದ್ರತೆಯಿಂದ ಹಿಡಿದು ಮೂಲಸೌಕರ್ಯಗಳ ವರೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಮಂಡಿಸಿರುವ ಈ ಪ್ರಸ್ತಾವನೆಗಳಿಗೆ ಕೇಂದ್ರ ಗೃಹ ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ.


















