ಪ್ರತಿದಿನ ನಾವು ಎಷ್ಟೋ ಜನರನ್ನು ನೋಡುತ್ತೇವೆ. ಆದರೆ ಅವರ ಹಿಂದಿರುವ ಕಷ್ಟಗಳು ನಮಗೆ ತಿಳಿದಿರುವುದಿಲ್ಲ. ದೇಶದ ಬಹುತೇಕ ನಗರಗಳಲ್ಲಿ ಬದುಕು ಕಟ್ಟಿಕೊಳ್ಳಲು ಬರುವ ಇಂತಹ ಅನೇಕರ ಪರಿಸ್ಥಿತಿ ಇದಕ್ಕಿಂತ ಕಳವಳಕಾರಿಯಾಗಿದೆ. ಮನುಷ್ಯತ್ವದ ದೃಷ್ಟಿಯಿಂದಲೂ ನೋಡುವಂತಾಗಬೇಕು. ಆಗ ಅಂತಸ್ತಿನ ಸ್ತರವಿಲ್ಲದೆ ವಾಸ್ತವ ಬದುಕಿನ ಅರಿವು, ಬೇರೆಯವರ ಕಷ್ಟ ಅರ್ಥವಾಗುತ್ತದೆ. ‘ಭೂಮಿಕಾ’ ಎಂಬ ಎಕ್ಸ್ (X) ಬಳಕೆದಾರರೊಬ್ಬರು ಹಂಚಿಕೊಂಡಿರುವ, ಸೆಕ್ಯುರಿಟಿ ಗಾರ್ಡ್ ರಾಮ್ಕಿಶನ್ ಎಂಬುವವರ ಮನ ಕರಗುವ ಘಟನೆಯೊಂದು ಈಗ ಎಲ್ಲೆಡೆ ವೈರಲ್ ಆಗಿದೆ.
ಬೆಳಗಿನ ಜಾವ 2:13 – ಕೇವಲ ಮೂರು ನಿಮಿಷದ ನಿದ್ದೆ:
ಸಿಲ್ವರ್ ಓಕ್ ರೆಸಿಡೆನ್ಸಿಯ ಮುಖ್ಯ ಗೇಟ್ ಬಳಿ ಸೆಕ್ಯುರಿಟಿ ಗಾರ್ಡ್ ರಾಮ್ಕಿಶನ್ ಕುಳಿತಿದ್ದರು. ಎಂಟು ವರ್ಷಗಳ ಸುದೀರ್ಘ ಸೇವೆಯಲ್ಲಿ ಮೊದಲ ಬಾರಿಗೆ ಆಯಾಸದಿಂದ ಅವರ ಕಣ್ಣುಗಳು ಮುಚ್ಚಿದ್ದವು. ಕೇವಲ ಮೂರು ನಿಮಿಷಗಳ ಕಾಲ ಅವರು ನಿದ್ದೆಗೆ ಜಾರಿದ್ದರು. ಸರಿಯಾಗಿ ಅದೇ ಸಮಯಕ್ಕೆ ಸೊಸೈಟಿ ಅಧ್ಯಕ್ಷರ ಮಗ ಕಾರಿನಲ್ಲಿ ಬಂದ. ಗಾರ್ಡ್ ನಿದ್ದೆ ಮಾಡುತ್ತಿರುವುದನ್ನು ನೋಡಿ, ಮೊಬೈಲ್ ತೆಗೆದು ವಿಡಿಯೋ ಮಾಡಲು ಶುರುಮಾಡಿದ.
”ನೋಡಿ, ನಮ್ಮ ರಕ್ಷಣೆ ಮಾಡಬೇಕಾದವನು ನಿದ್ದೆ ಮಾಡಲು ಸಂಬಳ ಪಡೆಯುತ್ತಿದ್ದಾನೆ” ಎಂದು ಹೇಳುತ್ತಾ, ಆ ವಿಡಿಯೋವನ್ನು ಸೊಸೈಟಿಯ ವಾಟ್ಸಾಪ್ (WhatsApp) ಗ್ರೂಪ್ಗೆ ಹಾಕಿದ.

ವಾಟ್ಸಾಪ್ ಗುಂಪಿನಲ್ಲಿ ಆಕ್ರೋಶದ ಮಳೆ:
ಬೆಳಗಾಗುವಷ್ಟರಲ್ಲಿ ವಾಟ್ಸಾಪ್ ಗುಂಪಿನಲ್ಲಿ ಕಾಮೆಂಟ್ಗಳ ಸುರಿಮಳೆಯೇ ಹರಿದಿತ್ತು.
”ಅವನನ್ನು ಕೂಡಲೇ ಕೆಲಸದಿಂದ ತೆಗೆದುಹಾಕಿ.”
”ಇದು ಶುದ್ಧ ನಿರ್ಲಕ್ಷ್ಯ.”
”ಇಂಥವರಿಗೆ ಕೆಲಸ ಕೊಡುವುದು ವೇಸ್ಟ್.”
ಹೀಗೆ 150ಕ್ಕೂ ಹೆಚ್ಚು ಸಂದೇಶಗಳು ಬಂದಿದ್ದವು. ಆದರೆ, ಯಾರೊಬ್ಬರೂ ಆತ ಏಕೆ ನಿದ್ದೆ ಮಾಡಿದ ಎಂದು ಕೇಳುವ ಗೋಜಿಗೆ ಹೋಗಲಿಲ್ಲ.
ಬೆಳಿಗ್ಗೆ 6:05 – ಕಣ್ಣೀರು ತರಿಸುವ ಸತ್ಯ:
ಬೆಳಿಗ್ಗೆ ರಾಮ್ಕಿಶನ್ರನ್ನು ಸೊಸೈಟಿಯ ಕಚೇರಿಗೆ ಕರೆಯಿಸಲಾಯಿತು. “ನಿನಗೆ ಕೆಲಸ ಮಾಡುವ ಆಸಕ್ತಿ ಇದೆಯಾ?” ಎಂದು ಅಧ್ಯಕ್ಷರು ಟೇಬಲ್ ಗುದ್ದಿ ಗದರಿದರು. ರಾಮ್ಕಿಶನ್ ಮೌನವಾಗಿ ತಮ್ಮ ಟೋಪಿ ತೆಗೆದರು. ನಿದ್ದೆಯಿಲ್ಲದೆ ಆಯಾಸದಿಂದ ಅವರ ಕಣ್ಣುಗಳು ಊದಿಕೊಂಡು ಕೆಂಪಾಗಿದ್ದವು.
”ಸರ್, ನಾನು ನಿನ್ನೆ ಮಧ್ಯಾಹ್ನ 2 ಗಂಟೆಯಿಂದಲೇ ಕೆಲಸದಲ್ಲಿದ್ದೇನೆ. ಮತ್ತೊಬ್ಬ ಗಾರ್ಡ್ಗೆ ಹುಷಾರಿಲ್ಲದ ಕಾರಣ, ಏಜೆನ್ಸಿಯವರು ಕೇವಲ 300 ರೂ. ಹೆಚ್ಚುವರಿ ನೀಡಿ ನನ್ನನ್ನೇ ಎರಡು ಪಾಳಿಯಲ್ಲಿ ಕೆಲಸ ಮಾಡಲು ಹೇಳಿದರು. ರಾತ್ರಿ 1 ಗಂಟೆಗೆ ಗೋಡೆ ಹಾರುತ್ತಿದ್ದ ಮೂವರು ಹುಡುಗರನ್ನು ಓಡಿಸಿದೆ. 1:45ಕ್ಕೆ ನಿವಾಸಿಯೊಬ್ಬರ ನಾಯಿಗೆ ಹಾಲು ಬಿಸಿ ಮಾಡಿಕೊಟ್ಟೆ. 2:10ಕ್ಕೆ ಒಂದೆರಡು ನಿಮಿಷ ಕೂರೋಣ ಎಂದು ಕುಳಿತೆ, ಅಷ್ಟರಲ್ಲಿ ಕಣ್ಣು ಮುಚ್ಚಿಹೋಯಿತು.”
ಅವರ ಮಾತು ಕೇಳಿ ಇಡೀ ಕೊಠಡಿ ಸ್ತಬ್ಧವಾಯಿತು. “ನನ್ನ ಸಂಬಳ ತಿಂಗಳಿಗೆ 12,000 ರೂ. ಅದರಲ್ಲಿ 4,000 ರೂ. ಬಾಡಿಗೆ, 2,000 ರೂ. ಹಳ್ಳಿಯಲ್ಲಿರುವ ಅಪ್ಪ-ಅಮ್ಮನಿಗೆ ಕಳುಹಿಸುತ್ತೇನೆ. ಉಳಿದ ಹಣದಲ್ಲಿ ಹೆಂಡತಿ, ಮಕ್ಕಳನ್ನು ಸಾಕಬೇಕು. ನನ್ನ ಮಗ 9ನೇ ತರಗತಿಯಲ್ಲಿದ್ದಾನೆ. ‘ಚೆನ್ನಾಗಿ ಓದು ಮಗನೇ, ಇಲ್ಲದಿದ್ದರೆ ಜೀವನ ಪೂರ್ತಿ ಬೇರೆಯವರ ಗೇಟ್ ಬಳಿ ಹೀಗೆ ನಿದ್ದೆ ಬಿಟ್ಟು ಕಾಯಬೇಕಾಗುತ್ತದೆ’ ಎಂದು ಅವನಿಗೆ ಹೇಳುತ್ತೇನೆ” ಎಂದರು.
ಒಂದು ಕ್ಷಣ ಮೌನವಹಿಸಿದ ಅವರು, “ನೀವು ನನ್ನ ಮೂರು ನಿಮಿಷದ ದೌರ್ಬಲ್ಯವನ್ನು ವಿಡಿಯೋ ಮಾಡಿದ್ರಿ. ಆದರೆ ಎಂಟು ವರ್ಷಗಳಿಂದ ಈ ಸೊಸೈಟಿಯನ್ನು ರಕ್ಷಿಸಲು ನಾನು ಎಚ್ಚರವಾಗಿದ್ದ ಸಾವಿರಾರು ರಾತ್ರಿಗಳನ್ನು ಯಾರೂ ರೆಕಾರ್ಡ್ ಮಾಡಲಿಲ್ಲ. ಮನುಷ್ಯರಿಗೆ ಆಯಾಸವೇ ಆಗಬಾರದು ಎಂದಿದ್ದಿದ್ದರೆ… ದೇವರು ನಮ್ಮನ್ನು ಯಂತ್ರಗಳನ್ನಾಗಿ ಮಾಡುತ್ತಿದ್ದ” ಎಂದರು. ಅಲ್ಲಿದ್ದ ಯಾರೊಬ್ಬರೂ ಅವರ ಕಣ್ಣುಗಳನ್ನು ನೋಡುವ ಸ್ಥಿತಿಯಲ್ಲಿರಲಿಲ್ಲ.
ಬದಲಾದ ವ್ಯವಸ್ಥೆ ಹಾಗೂ ಮನುಷ್ಯತ್ವದ ಗೆಲುವು:
ಅದೇ ದಿನ ಸಂಜೆ ಸೊಸೈಟಿಯ ಬೋರ್ಡ್ ಮೇಲೆ ಹೊಸ ನೋಟಿಸ್ ಅಂಟಿಸಲಾಗಿತ್ತು:
ಪಾಳಿಯೊಂದಕ್ಕೆ ಇಬ್ಬರು ಗಾರ್ಡ್ಗಳ ನೇಮಕ
ಗರಿಷ್ಠ 8 ಗಂಟೆಗಳ ಡ್ಯೂಟಿ
ಗಾರ್ಡ್ಗಳ ಸಂಬಳ ₹18,000 ಕ್ಕೆ ಹೆಚ್ಚಳ
ಓವರ್ಟೈಮ್ಗೆ ಪ್ರತ್ಯೇಕ ಹಣ (ಪ್ರತಿ ಫ್ಲಾಟ್ಗೆ ಹೆಚ್ಚುವರಿ ₹200)
ನೋಟಿಸ್ನ ಕೊನೆಯಲ್ಲಿ ಒಂದು ಸಾಲನ್ನು ಬರೆಯಲಾಗಿತ್ತು: “ನಾವು ಸೆಕ್ಯುರಿಟಿಯನ್ನು ಹಣ ಕೊಟ್ಟು ತರಬಹುದು, ಆದರೆ ಮನುಷ್ಯನ ಜೀವವನ್ನಲ್ಲ.”
ರಾತ್ರಿ 10 ಗಂಟೆ. ಬಹು ದಿನಗಳ ಬಳಿಕ ರಾಮ್ಕಿಶನ್ ಬೇಗನೆ ಮನೆಗೆ ಹೊರಟಿದ್ದರು. ಗೇಟ್ ಬಳಿ ಬಂದಾಗ ಅಧ್ಯಕ್ಷರ ಮಗ ಅವರನ್ನು ತಡೆದ. ಹೆಲ್ಮೆಟ್ ತೆಗೆದು ಮೆಲ್ಲನೆ ಮಾತನಾಡಿದ, “ಅಂಕಲ್… ನಾನು ಆ ವಿಡಿಯೋ ಡಿಲೀಟ್ ಮಾಡಿದ್ದೇನೆ. ಇನ್ಮುಂದೆ ಪ್ರತಿದಿನ ರಾತ್ರಿ ನಿಮ್ಮ ಟೀ ನನ್ನ ಕಡೆಯಿಂದ.” ರಾಮ್ಕಿಶನ್ ಮುಖದಲ್ಲಿ ಒಂದು ಸಣ್ಣ ನಗು ಮೂಡಿತು.
ಹೌದು, ಕೆಲವೊಮ್ಮೆ ಜನ ನಿರ್ಲಕ್ಷ್ಯದಿಂದ ಇರುವುದಿಲ್ಲ, ಅವರು ಕೇವಲ ಸುಸ್ತಾಗಿರುತ್ತಾರೆ ಅಷ್ಟೇ. ಮನುಷ್ಯತ್ವವನ್ನು ಎಚ್ಚರಿಸಲು ಕೆಲವೊಮ್ಮೆ ಇಂಥದ್ದೊಂದು ಪ್ರಾಮಾಣಿಕ ಸಂಭಾಷಣೆ ಬೇಕಾಗುತ್ತದೆ.


















