ಬೆಂಗಳೂರು, ಜೂ.02 www.bengaluruwire.com: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ನಾಳೆ (ಜೂನ್ 3) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಮಾರಂಭವು ಲೋಕಭವನದ ಗ್ಲಾಸ್ ಹೌಸ್ನಲ್ಲಿ ಅಪರಾಹ್ನ 4.05 ಗಂಟೆಗೆ ನಿಗದಿಯಾಗಿದೆ. ದೇಶ ಹಾಗೂ ವಿವಿಧ ರಾಜ್ಯಗಳ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಭೆ ನಡೆಸಿದ್ದು, ಮೊದಲ ಹಂತದಲ್ಲಿ 12 ಶಾಸಕರು ಸಚಿವರಾಗಿ ಪದಗ್ರಹಣ ಮಾಡಲು ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.
ಕಾರ್ಯಕ್ರಮದ ಭದ್ರತೆ ಮತ್ತು ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಟ್ರಾಫಿಕ್ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಬದಲಾವಣೆಗಳನ್ನು ಮಾಡಿದೆ.
ನೂತನ ಸಂಪುಟದ ಮೊದಲ ಪಟ್ಟಿ:

ಮೊದಲ ಹಂತದ ಈ ಕಿರು ಸಂಪುಟಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸಿದ್ದು, ಉಳಿದ ಸ್ಥಾನಗಳನ್ನು ಮುಂದಿನ ದಿನಗಳಲ್ಲಿ ಭರ್ತಿ ಮಾಡಲು ತೀರ್ಮಾನಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಹಿರಿಯ ನಾಯಕರ ನಡುವೆ ಕೇವಲ ಇಬ್ಬರು ಹೊಸಬರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಶಾಸಕರ ಪಟ್ಟಿ ಈ ಕೆಳಗಿನಂತಿದೆ:
ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಡಾ. ಯತೀಂದ್ರ ಸಿದ್ದರಾಮಯ್ಯ, ಯು.ಟಿ. ಖಾದರ್, ಕೆ.ಹೆಚ್. ಮುನಿಯಪ್ಪ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್,
ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ,ಸತೀಶ್ ಜಾರಕಿಹೊಳಿ, ರೂಪಾ ಶಶಿಧರ್.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಅವರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನ ಒಲಿದಿದೆ.
ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮತ್ತು ನಿರ್ಬಂಧ
:
ಜೂನ್ 3ರಂದು ಮಧ್ಯಾಹ್ನ 12:00ರಿಂದ ರಾತ್ರಿ 8:00ರವರೆಗೆ ನಗರದ ಕೇಂದ್ರ ಭಾಗದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.
ಸಂಚಾರ ನಿರ್ಬಂಧಿಸಿರುವ ಪ್ರಮುಖ ರಸ್ತೆಗಳು:
* ಕಬ್ಬನ್ ರಸ್ತೆ (BRV ಜಂಕ್ಷನ್ನಿಂದ CTO ಜಂಕ್ಷನ್ ಹಾಗೂ CTO ವೃತ್ತದಿಂದ ಲೋಕಭವನ)
* ಬಾಳೇಕುಂದ್ರಿ ಜಂಕ್ಷನ್ನಿಂದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಕಡೆಗೆ
* ಕೆ.ಆರ್. ವೃತ್ತದಿಂದ ಕಾಫಿ ಬೋರ್ಡ್ ಜಂಕ್ಷನ್ ಕಡೆಗೆ
ರೇಸ್ ಕೋರ್ಸ್ ರಸ್ತೆ (ಟ್ರೈಲೈಟ್ ಜಂಕ್ಷನ್ನಿಂದ ಸುಬ್ಬಣ್ಣ ಜಂಕ್ಷನ್)
* ಕ್ವೀನ್ಸ್ ಜಂಕ್ಷನ್ನಿಂದ CTO / ಲೋಕಭವನ ಕಡೆಗೆ
ಸೇಂಟ್ ಮಾರ್ಕ್ಸ್ ರಸ್ತೆಯಿಂದ ಕ್ವೀನ್ಸ್ ಜಂಕ್ಷನ್ ಮೂಲಕ CTO ಕಡೆಗೆ
ಪರ್ಯಾಯ ಮಾರ್ಗಗಳು:
ಸಾರ್ವಜನಿಕರು ಸಂಚಾರ ದಟ್ಟಣೆ ತಪ್ಪಿಸಲು ಶಿವಾಜಿನಗರ, ಕನ್ನಿಂಗ್ಹ್ಯಾಮ್ ರಸ್ತೆ, ನೃಪತುಂಗ ರಸ್ತೆ, ಶಿವಾನಂದ ವೃತ್ತ, ಔಟರ್ ರಿಂಗ್ ರಸ್ತೆ ಹಾಗೂ ಹೆಬ್ಬಾಳ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.
ಪಾರ್ಕಿಂಗ್ ಮತ್ತು ಭಾರಿ ವಾಹನಗಳ ನಿಷೇಧ:
ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಲೋಕಭವನ ರಸ್ತೆ, ಕ್ವೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಲ್ಲದೆ, ನಾಳೆ ಮಧ್ಯಾಹ್ನ 12:00ರಿಂದ ರಾತ್ರಿ 10:00ರವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ
:ಕರ್ನಾಟಕ ಸರ್ಕಾರದ ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ, ಸಂಚಾರ ದಟ್ಟಣೆ ಮತ್ತು ಭದ್ರತಾ ದೃಷ್ಟಿಯಿಂದ ಸರ್ಕಾರಿ ನೌಕರರಿಗೆ ರಜೆ ಘೋಷಿಸಲಾಗಿದೆ. ಜೂನ್ 3ರಂದು ಮಧ್ಯಾಹ್ನದ ನಂತರ (ಅಪರಾಹ್ನ) ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ (ಎಂ.ಎಸ್.ಬಿಲ್ಡಿಂಗ್) ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಜೆ ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

















