ಬೆಂಗಳೂರು, ಜೂ.02 www.bengaluruwire.com: ರಾಜ್ಯ ಸರ್ಕಾರಿ ನೌಕರರ 2026-27ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ವರ್ಗಾವಣೆಯ ಗಡುವನ್ನು ವಿಸ್ತರಿಸಿದೆ. ವರ್ಗಾವಣೆ ನಿರೀಕ್ಷೆಯಲ್ಲಿದ್ದ ಸಾವಿರಾರು ನೌಕರರಿಗೆ ಈ ನಿರ್ಧಾರದಿಂದ ಹೆಚ್ಚಿನ ಕಾಲಾವಕಾಶ ದೊರೆತಂತಾಗಿದೆ.
ಹಿಂದಿನ ಗಡುವು ಮುಕ್ತಾಯ:
ಈ ಮೊದಲು ಏ.13 ರಂದು ಹೊರಡಿಸಲಾಗಿದ್ದ ಸರ್ಕಾರಿ ಆದೇಶದ ಮಾರ್ಗಸೂಚಿಗಳ ಅನ್ವಯ, ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಏಪ್ರಿಲ್ 15 ರಿಂದ ಮೇ 31ರೊಳಗೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿತ್ತು. ಆದರೆ, ಪ್ರಸ್ತುತ ಈ ಅವಧಿಯು ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಅವಧಿಯನ್ನು ವಿಸ್ತರಿಸುವುದು ಅವಶ್ಯಕವೆಂದು ಸರ್ಕಾರವು ಪರಿಗಣಿಸಿದೆ.
ಹೊಸ ಗಡುವು ಜೂನ್ 30ರವರೆಗೆ:

ಸರ್ಕಾರಿ ಆದೇಶ ಸಂಖ್ಯೆ (ಸಿಆಸುಇ 4 ಸೇನೌವ 2026) ಅನ್ವಯ, 2026-27ನೇ ಸಾಲಿನಲ್ಲಿ ಕೈಗೊಳ್ಳಲಾಗುವ ಸಾರ್ವತ್ರಿಕ ವರ್ಗಾವಣೆಯ ಅವಧಿಯನ್ನು ಇದೀಗ ಜೂನ್ 30, 2026 ರವರೆಗೆ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸೇವಾ ನಿಯಮಗಳು-3) ಸರ್ಕಾರದ ಉಪ ಕಾರ್ಯದರ್ಶಿ ಎಸ್. ಆರ್. ಶಿವಶಂಕರ್ ಅವರು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ.


















