ಬೆಂಗಳೂರು, ಮೇ.22 www.bengaluruwire.com: ಸಿಲಿಕಾನ್ ಸಿಟಿಯಲ್ಲಿ ಅನಧಿಕೃತ ನಿರ್ಮಾಣಗಳು ಹಾಗೂ ಒತ್ತುವರಿದಾರರ ವಿರುದ್ಧ ಸಮರ ಸಾರಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ನಗರದ ಪ್ರತಿಷ್ಠಿತ ಪ್ರದೇಶಗಳಾದ ದೂಕನಹಳ್ಳಿ, ದೊಮ್ಮಲೂರು ಹಾಗೂ ಕೇಂಬ್ರಿಡ್ಜ್ ಬಡಾವಣೆಗಳಲ್ಲಿ ಗುರುವಾರ, ಬಿಡಿಎ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಬರೋಬ್ಬರಿ 12 ಕೋಟಿ ರೂಪಾಯಿ ಬೆಲೆಬಾಳುವ ಸರ್ಕಾರಿ ಆಸ್ತಿಯನ್ನು ಮರಳಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ವಶಪಡಿಸಿಕೊಂಡ ಆಸ್ತಿಯ ವಿವರ:
ಬಿಡಿಎಗೆ ಸೇರಿದ ಜಾಗದಲ್ಲಿ ತಲೆ ಎತ್ತಿದ್ದ ಅನಧಿಕೃತ ಕಟ್ಟಡಗಳನ್ನು ಇಂದು ಜೆಸಿಬಿಗಳ ಮೂಲಕ ನೆಲಸಮ ಮಾಡಲಾಯಿತು. ಪ್ರಮುಖವಾಗಿ ಈ ಕೆಳಕಂಡ ನಿವೇಶನಗಳನ್ನು ಒತ್ತುವರಿದಾರರಿಂದ ಮುಕ್ತಗೊಳಿಸಲಾಗಿದೆ:

ಕೇಂಬ್ರಿಡ್ಜ್ ಬಡಾವಣೆ: ನಿವೇಶನ ಸಂಖ್ಯೆ 61ರ 40×60 ಅಡಿ ಅಳತೆಯ ಜಾಗ.
ದೂಕನಹಳ್ಳಿ ಗ್ರಾಮ: ನಿವೇಶನ ಸಂಖ್ಯೆ 3746ರ 40×40 ಅಡಿ ಅಳತೆಯ ನಿವೇಶನ.
ದೊಮ್ಮಲೂರು 1ನೇ ಹಂತ: ನಿವೇಶನ ಸಂಖ್ಯೆ 30ರ 20×40 ಅಳತೆಯ ಪ್ರದೇಶ.
ಈ ಮೂರು ಕಡೆಗಳಲ್ಲಿನ ಅನಧಿಕೃತ ನಿರ್ಮಾಣಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಮೂಲಕ ಅಂದಾಜು 12 ಕೋಟಿ ರೂ. ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವು ಯಶಸ್ವಿಯಾಗಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ಪೊಲೀಸ್ ಸರ್ಪಗಾವಲಿನಲ್ಲಿ ಕಾರ್ಯಾಚರಣೆ:
ಈ ಬೃಹತ್ ತೆರವು ಕಾರ್ಯಾಚರಣೆಯನ್ನು ಬಿಡಿಎ ಕಾರ್ಯನಿರತ ಪಡೆಯ (ಟಾಸ್ಕ್ ಫೋರ್ಸ್) ಆರಕ್ಷಕ ಅಧೀಕ್ಷಕರ (ಎಸ್ಪಿ) ನೇತೃತ್ವದಲ್ಲಿ ನಡೆಸಲಾಯಿತು. ಬಿಡಿಎ ಪೂರ್ವ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸ್ಥಳೀಯ ಪೊಲೀಸ್ ಇಲಾಖೆಯ ನೆರವು ಪಡೆಯಲಾಗಿದ್ದು, ಬಿಗಿ ಬಂದೋಬಸ್ತ್ ನಡುವೆ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲೂ ಸರ್ಕಾರಿ ಆಸ್ತಿ ಒತ್ತುವರಿದಾರರ ವಿರುದ್ಧ ಇದೇ ರೀತಿಯ ನಿರ್ದಾಕ್ಷಿಣ್ಯ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.





















