ಬೆಂಗಳೂರು, ಮೇ.18 www.bengaluruwire.com: ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿ, ಅದನ್ನು ಕೇವಲ ಬದುಕಿನ ಅನಿವಾರ್ಯತೆಯನ್ನಾಗಿಸದೆ ಗೌರವಯುತ ಮತ್ತು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕೃಷಿ – ಮಾಧ್ಯಮ ಸಂವಾದ”ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ವೇಳೆ ಕೃಷಿ ಇಲಾಖೆಯ ಕಳೆದ ಮೂರು ವರ್ಷಗಳ ಸಾಧನೆಗಳ ಸುದೀರ್ಘ ಮಾಹಿತಿಯನ್ನು ಹಂಚಿಕೊಂಡ ಸಚಿವರು, ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆಗೆ (Value Addition) ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ಕೃಷಿ ಭಾಗ್ಯ ಮತ್ತು ಡಿಜಿಟಲ್ ಕ್ರಾಂತಿ
ಕಳೆದ 3 ವರ್ಷಗಳಲ್ಲಿ ಸರ್ಕಾರದ ದಕ್ಷ ಆಡಳಿತದಿಂದಾಗಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಇಲಾಖೆಯ ಮಹತ್ವಾಕಾಂಕ್ಷಿ ‘ಕೃಷಿ ಭಾಗ್ಯ’ ಯೋಜನೆಯಡಿ ₹435.05 ಕೋಟಿ ಸಹಾಯಧನದೊಂದಿಗೆ 36,213 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಯಾಂತ್ರೀಕರಣಕ್ಕೆ ವೇಗ ನೀಡಲು ₹173 ಕೋಟಿ ವೆಚ್ಚದಲ್ಲಿ 524 ‘ಹೈಟೆಕ್ ಹಾರ್ವೆಸ್ಟರ್ ಹಬ್’ಗಳನ್ನು ಸ್ಥಾಪಿಸಲಾಗಿದೆ.

ತಂತ್ರಜ್ಞಾನ ಬಳಕೆಯಲ್ಲಿ ಕ್ರಾಂತಿ ಸೃಷ್ಟಿಸಿರುವ ಸರ್ಕಾರ QR Code, FID ಮತ್ತು ‘ಇ-ಸ್ಯಾಪ್’ (e-SAP) ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಪಾರದರ್ಶಕ ಡಿಜಿಟಲ್ ವ್ಯವಸ್ಥೆಯನ್ನು ತಂದಿದೆ ಎಂದು ಸಚಿವರು ವಿವರಿಸಿದರು.
ದೇಶಿ ತಳಿ ಸಂರಕ್ಷಣೆ ಮತ್ತು ಸಾವಯವ ಕೃಷಿ
’ಬೀಜ ಪರಂಪರೆ’ ಕಾರ್ಯಕ್ರಮದ ಮೂಲಕ 2,100 ದೇಶಿ ತಳಿಗಳನ್ನು ಸಂರಕ್ಷಿಸುವ ಮೂಲಕ ಕರ್ನಾಟಕ ಇಡೀ ದೇಶಕ್ಕೇ ಮಾದರಿಯಾಗಿದೆ. ಜೋಯಿಡಾ ಮತ್ತು ಪಾಂಡವಪುರ ತಾಲ್ಲೂಕುಗಳನ್ನು ಸಂಪೂರ್ಣ ಸಾವಯವ ತಾಲ್ಲೂಕುಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಸಿರಿಧಾನ್ಯ ಮೇಳಗಳ ಆಯೋಜನೆಯ ಮೂಲಕ ₹335 ಕೋಟಿಗೂ ಅಧಿಕ ಮೊತ್ತದ ವಾಣಿಜ್ಯ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ.
ಲಕ್ಷಾಂತರ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ, ಯಾಂತ್ರೀಕರಣ ಹಾಗೂ ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕರ್ನಾಟಕಕ್ಕೆ ರಾಷ್ಟ್ರಮಟ್ಟದ ಗೌರವ ಲಭಿಸಿದೆ ಎಂದು ಹೆಮ್ಮೆಯಿಂದ ಹಂಚಿಕೊಂಡರು.
ಆದಾಯ ದುಪ್ಪಟ್ಟು ಹಾಗೂ ನೂತನ ‘ಅಗ್ರಿ ಬಾಟ್’ ತಂತ್ರಜ್ಞಾನ
ಮುಂದಿನ ದಿನಗಳಲ್ಲಿ ‘ಡಿಜಿಟಲ್ ಕೃಷಿ’ ಮೂಲಕ ರೈತರ ಉತ್ಪಾದನಾ ವೆಚ್ಚ ತಗ್ಗಿಸಿ ಆದಾಯ ದುಪ್ಪಟ್ಟುಗೊಳಿಸಲು ಶ್ರಮಿಸಲಾಗುವುದು. ಕಳೆದೆರಡು ವರ್ಷಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳ ಪ್ರಗತಿಪರ ರೈತರ ಮನೆ, ತೋಟಗಳಿಗೆ ಭೇಟಿ ನೀಡಿ ಸುದೀರ್ಘ ವಿಚಾರ ವಿನಿಮಯ ಮಾಡಿದ್ದೇನೆ. ಈ ಸಂವಾದಗಳಿಂದ ಕಲಿತ ಅನೇಕ ಸಂಗತಿಗಳು ನಮ್ಮ ನೂತನ ಕೃಷಿ ನೀತಿ ಹಾಗೂ ಯೋಜನೆಗಳಾಗಿ ರೂಪುಗೊಂಡಿವೆ.
ವಿಶೇಷವೆಂದರೆ, ವೈಜ್ಞಾನಿಕ ಮತ್ತು ಸಾವಯವ ಕೃಷಿ ಮಾಡುತ್ತಿರುವ ಯಾವೊಬ್ಬ ರೈತನೂ ಆರ್ಥಿಕ ತೊಂದರೆಗೆ ಸಿಲುಕಿಲ್ಲ. ಇಂತಹ ಪ್ರಗತಿಪರ ರೈತರು ಪ್ರತಿ ಹಳ್ಳಿಯಲ್ಲೂ ಹೆಚ್ಚಾಗಬೇಕಿದೆ. ಕೃಷಿಯಲ್ಲಿನ ಇಂತಹ ಅತ್ಯುತ್ತಮ ಪದ್ಧತಿಗಳನ್ನು ಪ್ರತಿಯೊಬ್ಬ ರೈತರೂ ಕಲಿತು ಅಳವಡಿಸಿಕೊಳ್ಳುವ ಅಗತ್ಯವಿದ್ದು, ಇದನ್ನು ಇಡೀ ಸಮುದಾಯಕ್ಕೆ ತಲುಪಿಸುವುದು ನಮ್ಮ ಆದ್ಯತೆಯಾಗಿದೆ.
ಇದರ ಜೊತೆ ರೈತರಿಗೆ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಕ್ಷಣ ಮಾತ್ರದಲ್ಲಿ ಪರಿಹಾರ ಹಾಗೂ ಮಾಹಿತಿ ಕಲ್ಪಿಸುವ ದಿಶೆಯಲ್ಲಿ ವಿನೂತನವಾಗಿ ಅಗ್ರಿ ಬಾಟ್ (Agri Bot) ಎನ್ನುವ ತಂತ್ರಜ್ಞಾನವನ್ನು ಶೀಘ್ರದಲ್ಲಿ ಪರಿಚಯಿಸಲಾಗುತ್ತಿದೆ ಎಂದು ಸಚಿವರು ಪ್ರಕಟಿಸಿದರು.
ಕೃಷಿ ಇಲಾಖೆಯ ನಿರ್ದೇಶಕರಾದ ಜಿಟಿ ಪುತ್ರ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್. ಶಿವಪ್ರಕಾಶ್, ಅಧ್ಯಕ್ಷರಾದ ಬಿ ಹೆಚ್ ಹರೀಶ್ ಸಹಿತ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






















