ಚೆನ್ನೈ, ಮೇ.08 www.bengaluruwire.com : ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಸರ್ಕಾರ ರಚನೆಯ ಕುರಿತು ಬಿಕ್ಕಟ್ಟು ಸೃಷ್ಟಿಯಾಗಿದ್ದು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
“ಯಾರೇ ಆಗಲಿ, ಬಹುಮತಕ್ಕೆ ಬೇಕಾದ 118 ಸದಸ್ಯರ ಬೆಂಬಲವಿದೆ ಎಂದು ನನಗೆ ಮನವರಿಕೆ ಮಾಡಿಕೊಟ್ಟರೆ ಮಾತ್ರ ಸರ್ಕಾರ ರಚನೆಗೆ ಅವಕಾಶ ನೀಡಲಾಗುವುದು. ಇದು ಪ್ರಜಾಪ್ರಭುತ್ವದ ನಿಯಮ,” ಎಂದು ಅವರು ಹೇಳಿದ್ದಾರೆ.
ಸಂಖ್ಯೆಯೇ ಅಂತಿಮ – ರಾಜ್ಯಪಾಲರ ಸ್ಪಷ್ಟನೆ:
ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತಕ್ಕೆ 10 ಸದಸ್ಯರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ವಿಜಯ್ ಎರಡು ಬಾರಿ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಪಾಲರು, “ನಾನು ವಿಜಯ್ ಅವರನ್ನು ತಡೆಯಲು ಪ್ರಯತ್ನಿಸುತ್ತಿಲ್ಲ. ಆದರೆ ಸಂಖ್ಯೆ ಇಲ್ಲದೆ ಪ್ರಮಾಣ ವಚನ ಬೋಧಿಸಲು ಸಾಧ್ಯವಿಲ್ಲ. ಅದು ರಾಜ್ಯದ ಜನರಿಗೆ ಮಾಡುವ ಅನ್ಯಾಯ. ಬಹುಮತ ಸಾಬೀತುಪಡಿಸಲು 118 ಸದಸ್ಯರು ಬೇಕು, ಅಷ್ಟು ಸಂಖ್ಯೆ ಟಿವಿಕೆ ಬಳಿ ಇಲ್ಲದಿದ್ದರೆ ಸಂವಿಧಾನಾತ್ಮಕ ಪರ್ಯಾಯಗಳನ್ನು ಹುಡುಕಬೇಕಾಗುತ್ತದೆ,” ಎಂದು ತಿಳಿಸಿದ್ದಾರೆ.

ರಾಜಕೀಯ ಲೆಕ್ಕಾಚಾರ:
ಒಟ್ಟು 243 ಸ್ಥಾನಗಳ ಪೈಕಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿದೆ. ಆದರೆ ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನ ಬಿಡಬೇಕಾಗುತ್ತದೆ, ಆಗ ಸಂಖ್ಯಾಬಲ 107ಕ್ಕೆ ಇಳಿಯಲಿದೆ. ಕಾಂಗ್ರೆಸ್ನ 5 ಸದಸ್ಯರ ಬೆಂಬಲ ಸೇರಿದರೂ ಒಟ್ಟು ಬಲ 113 ಆಗುತ್ತದೆ. ಇನ್ನೂ 5 ಸದಸ್ಯರ ಬೆಂಬಲ ವಿಜಯ್ ಅವರಿಗೆ ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಅವರು ಎಡಪಕ್ಷಗಳು ಹಾಗೂ ವಿಸಿಕೆ (VCK) ಬೆಂಬಲಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಹೆಚ್ಚಿದ ಜನಾಕ್ರೋಶ:
ವಿಜಯ್ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡದ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಟಿವಿಕೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು. ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಪ್ರತಿಕ್ರಿಯಿಸಿ, “ವಿಜಯ್ ಅವರನ್ನು ಕಾಯಿಸುವುದು ಸರಿಯಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುದುರೆ ವ್ಯಾಪಾರದ ಭೀತಿಯ ನಡುವೆಯೂ, ತಮಿಳುನಾಡಿನ ಮುಂದಿನ ರಾಜಕೀಯ ಭವಿಷ್ಯ ಇಂದು ಸಂಜೆ ವೇಳೆಗೆ ನಿರ್ಧಾರವಾಗುವ ಸಾಧ್ಯತೆಯಿದೆ.
ಈ ಮಧ್ಯೆ ಬದ್ಧ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ 50 ವರ್ಷಗಳ ನಂತರ ಒಗ್ಗೂಡಿ ಸರ್ಕಾರ ರಚಿಸಬಹುದು ಮತ್ತು ವಿಜಯ್ ಅವರನ್ನು ಅಧಿಕಾರದಿಂದ ದೂರವಿಡಬಹುದು ಎಂಬ ವದಂತಿ ಇದೆ. ಈ ಯೋಜನೆ ಜಾರಿಗೆ ಬರಬೇಕಾದರೆ, ಎಡಪಂಥೀಯ ಪಕ್ಷಗಳು ಮತ್ತು ವಿಸಿಕೆ ಇದಕ್ಕೆ ಸಹಿ ಹಾಕಬೇಕು. ವಿಜಯ್ ಈಗಾಗಲೇ ಬೆಂಬಲಕ್ಕಾಗಿ ಈ ಪಕ್ಷಗಳನ್ನು ಸಂಪರ್ಕಿಸಿದ್ದಾರೆ ಮತ್ತು ಅವರು ಸಮಯ ಕೇಳಿದ್ದಾರೆ ಎಂದು ತಿಳಿದುಬಂದಿದೆ.
























