ಬೆಂಗಳೂರು, ಏ.27 www.bengaluruwire.com: ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ನವೀಕೃತ ಕಟ್ಟಡ 28 ವರ್ಷಗಳ ಹಳೆಯ ಕಟ್ಟಡವು ನವೀಕರಣಗೊಂಡು ಈಗ ನವವಧುವಿನಂತೆ ಕಂಗೊಳಿಸುತ್ತಿದೆ.
ಈ ನವೀಕೃತ ಕಟ್ಟಡದ ಜೊತೆಗೆ ಹಾಗೂ ಹೊಸದಾಗಿ ನಿರ್ಮಿಸಲಾದ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಲೋಕಾರ್ಪಣೆಗೊಳಿಸಿದರು. 1998ರಲ್ಲಿ ಕೆಎಎಸ್ ಅಧಿಕಾರಿಗಳಿಗೆ ಸಂಶೋಧನೆ ಮತ್ತು ತರಬೇತಿ ನೀಡಲೆಂದು ನಿರ್ಮಿಸಲಾಗಿದ್ದ ಈ ಕೇಂದ್ರವು ಈಗ 28 ವರ್ಷಗಳ ನಂತರ ಸಂಪೂರ್ಣವಾಗಿ ಆಧುನಿಕವಾಗಿ ನವೀಕರಣಗೊಂಡಿದೆ.

ಸಂಘದ ಅಧ್ಯಕ್ಷರಾದ ಬಿ. ಶಿವಸ್ವಾಮಿ ಹಾಗೂ ಕಾರ್ಯದರ್ಶಿ ಸಿ.ಎಲ್. ಶಿವಕುಮಾರ್ ನೇತೃತ್ವದಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆಯ ಮೂಲಕ ಅನುಷ್ಠಾನಗೊಂಡಿರುವ ಈ ಯೋಜನೆಯಲ್ಲಿ ಸಿವಿಲ್ ಕಾಮಗಾರಿಗಾಗಿ ₹998.00 ಲಕ್ಷ ಹಾಗೂ ಪೀಠೋಪಕರಣಗಳಿಗಾಗಿ ₹205.00 ಲಕ್ಷ ವೆಚ್ಚ ಮಾಡಲಾಗಿದೆ. ಹೆಚ್ಚುವರಿ ಎಲೆಕ್ಟ್ರಿಕಲ್ ಮತ್ತು ಸಿವಿಲ್ ಮಾರ್ಪಾಡುಗಳನ್ನೂ ಸೇರಿ ಒಟ್ಟು ₹15.23 ಕೋಟಿ ಅಂದಾಜು ವೆಚ್ಚದಲ್ಲಿ ಈ ಭವ್ಯ ಕಟ್ಟಡ ಸಿದ್ಧಗೊಂಡಿದೆ.
ಕಟ್ಟಡದ ಪ್ರಮುಖ ಆಕರ್ಷಣೆಗಳು:
ಪ್ರವೇಶ ದ್ವಾರ ಮತ್ತು ರಿಸೆಪ್ಷನ್: ಮೆಟ್ಟಿಲುಗಳ ವಿನ್ಯಾಸವನ್ನು ಬದಲಾಯಿಸಿ ಅತ್ಯಾಧುನಿಕ ಸ್ಪರ್ಶ ನೀಡಲಾಗಿದ್ದು, ರಿಸೆಪ್ಷನ್ ಭಾಗವನ್ನು ವಿಶಾಲಗೊಳಿಸಲಾಗಿದೆ.


ಸಭಾಂಗಣಗಳು: ನೆಲ ಮಹಡಿಯಲ್ಲಿರುವ ‘ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ’ವನ್ನು 150 ಆಸನಗಳ ಸಾಮರ್ಥ್ಯದ ಥಿಯೇಟರ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಎರಡನೇ ಮಹಡಿಯಲ್ಲಿ ಬಹುಪಯೋಗಿ ‘ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣ’ವನ್ನು ನಿರ್ಮಿಸಲಾಗಿದೆ. ಅದರ ಪಕ್ಕದಲ್ಲೇ ಐಷಾರಾಮಿ ಲಾಂಜ್ ರೂಪಿಸಲಾಗಿದೆ.

ಶತಮಾನೋತ್ಸವದ ಸ್ಮರಣೆ: ಸಂಘವು 100 ವರ್ಷ ಪೂರೈಸಿರುವ ನೆನಪಿಗಾಗಿ ಲೈಬ್ರರಿ ಒಳಗೊಂಡ ‘Centenary Lounge’ ಅಭಿವೃದ್ಧಿಪಡಿಸಲಾಗಿದೆ.

ವಸತಿ ಮತ್ತು ಭೋಜನ ಶಾಲೆ: ಅತಿಥಿ ಗೃಹಗಳ ಸಂಖ್ಯೆಯನ್ನು 8 ರಿಂದ 19ಕ್ಕೆ ಹೆಚ್ಚಿಸಲಾಗಿದೆ. ಅಧಿಕಾರಿಗಳಿಗಾಗಿ 100 ಆಸನಗಳ ಸಾಮರ್ಥ್ಯದ ಹವಾನಿಯಂತ್ರಿತ ಡೈನಿಂಗ್ ಹಾಲ್ ನಿರ್ಮಿಸಲಾಗಿದೆ.
ಇತರ ಸೌಲಭ್ಯಗಳು: ಕಟ್ಟಡದಲ್ಲಿ 6 ಮಂದಿ ಒಟ್ಟಿಗೆ ಹೋಗಬಹುದಾದ ಸಾಮರ್ಥ್ಯದ ಲಿಫ್ಟ್, ನಿರಂತರ ವಿದ್ಯುತ್ಗಾಗಿ ಡಿಜೆ ಸೆಟ್, ಹಾಗೂ ಟೆರೇಸ್ನಲ್ಲಿ ಜಿಮ್ ಸೌಲಭ್ಯವನ್ನು ಒದಗಿಸಲಾಗಿದೆ. ಚಾಲಕರಿಗಾಗಿ 12 ಹಾಸಿಗೆಗಳ ಡಾರ್ಮಿಟರಿ ವ್ಯವಸ್ಥೆ ಕೂಡ ಇಲ್ಲಿದೆ.





















