ಬೆಂಗಳೂರು, ಏ.28 www.bengaluruwire.com: ನೂರತ್ತು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಚಾರಿತ್ರಿಕ ಸಾಧನೆ ಮಾಡಿದೆ.
2025-26ನೇ ಹಣಕಾಸು ವರ್ಷದಲ್ಲಿ ಸಂಸ್ಥೆಯು ₹2,016 ಕೋಟಿ ವಹಿವಾಟು ನಡೆಸುವ ಮೂಲಕ ಹೊಸ ವಿಕ್ರಮ ಸ್ಥಾಪಿಸಿದೆ. ಅಷ್ಟೇ ಅಲ್ಲದೆ, ₹507 ಕೋಟಿ ಲಾಭ ಗಳಿಸುವ ಮೂಲಕ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಮಾದರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ಮೈಸೂರು ಸ್ಯಾಂಡಲ್ ಸಾಧನೆಯ ಶಿಖರ’ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಅರವಿಂದ್ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ ಮಾತನಾಡಿದರು.
ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಸಾಧನೆ:

“ಸಂಸ್ಥೆಯು ಮೊದಲ ಒಂದು ಸಾವಿರ ಕೋಟಿ ರೂ.ಗಳ ವಹಿವಾಟು ತಲುಪಲು 105 ವರ್ಷಗಳನ್ನು ತೆಗೆದುಕೊಂಡಿತ್ತು. ಆದರೆ, ಅಲ್ಲಿಂದ ಕೇವಲ ನಾಲ್ಕು ವರ್ಷಗಳಲ್ಲಿ 2 ಸಾವಿರ ಕೋಟಿ ರೂ. ಗುರಿಯನ್ನು ತಲುಪಿರುವುದು ಶ್ಲಾಘನೀಯ. 2022-23ರಲ್ಲಿ ₹1,375 ಕೋಟಿ ಇದ್ದ ವಹಿವಾಟು, ಕಳೆದ ಮೂರು ವರ್ಷಗಳಲ್ಲಿ ₹2,016 ಕೋಟಿಗೆ ಏರಿಕೆಯಾಗಿದೆ. ಅಲ್ಪಾವಧಿಯಲ್ಲಿ ₹641 ಕೋಟಿ ಹೆಚ್ಚಳ ದಾಖಲಿಸಿರುವುದು ಸಂಸ್ಥೆಯ ದಕ್ಷತೆಗೆ ಸಾಕ್ಷಿ” ಎಂದು ಸಚಿವರು ವಿವರಿಸಿದರು.

ಹೊಸ ಉತ್ಪನ್ನಗಳು ಮತ್ತು ಉತ್ಪಾದನಾ ಸಾಮರ್ಥ್ಯ:
“ಹಿಂದೆ ಕೇವಲ 34 ಉತ್ಪನ್ನಗಳಿದ್ದವು, ಕಳೆದ ಮೂರು ವರ್ಷಗಳಲ್ಲಿ 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಪ್ರಸ್ತುತ 94 ಉತ್ಪನ್ನಗಳು ಕೆಎಸ್ಡಿಎಲ್ ಪಟ್ಟಿಯಲ್ಲಿವೆ. ಯಾವುದೇ ಹೊಸ ನೇಮಕಾತಿ ಅಥವಾ ಹೆಚ್ಚುವರಿ ಯಂತ್ರೋಪಕರಣಗಳಿಲ್ಲದೆ, ಪರಿಣಾಮಕಾರಿ ಕಾರ್ಯವೈಖರಿಯಿಂದ ಉತ್ಪಾದನಾ ಸಾಮರ್ಥ್ಯವನ್ನು 26 ಸಾವಿರ ಮೆಟ್ರಿಕ್ ಟನ್ನಿಂದ 47 ಸಾವಿರ ಮೆಟ್ರಿಕ್ ಟನ್ಗೆ ಏರಿಸಲಾಗಿದೆ” ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.
ಲಾಭದ ಮೊತ್ತದಲ್ಲಿ ₹157 ಕೋಟಿ ಡಿವಿಡೆಂಡ್ ಹಾಗೂ ಸಿಎಂ ಪರಿಹಾರ ನಿಧಿಗೆ ₹5 ಕೋಟಿ ನೀಡಲಾಗುವುದು ಎಂದರು.
2030ಕ್ಕೆ ₹5 ಸಾವಿರ ಕೋಟಿ ಗುರಿ:
ಆಧುನಿಕ ವ್ಯಾಪಾರ ಮತ್ತು ಇ-ಕಾಮರ್ಸ್ ಮೂಲಕ ಕ್ರಮವಾಗಿ ₹420 ಕೋಟಿ ಹಾಗೂ ₹120 ಕೋಟಿ ವಹಿವಾಟು ನಡೆದಿದೆ. 2028ರ ವೇಳೆಗೆ ₹3 ಸಾವಿರ ಕೋಟಿ ಹಾಗೂ 2030ರ ವೇಳೆಗೆ ₹5 ಸಾವಿರ ಕೋಟಿ ವಹಿವಾಟಿನ ಗುರಿ ಹೊಂದಲಾಗಿದೆ. ಇದಕ್ಕಾಗಿ ವಿಜಯಪುರದಲ್ಲಿ ₹229 ಕೋಟಿ ವೆಚ್ಚದಲ್ಲಿ ನೂತನ ಘಟಕ ಸ್ಥಾಪನೆಯಾಗಲಿದೆ ಎಂದು ಎಂ.ಬಿ. ಪಾಟೀಲ ಮಾಹಿತಿ ನೀಡಿದರು.
ರೈತರಿಗೆ ಶ್ರೀಗಂಧದ ಉತ್ತೇಜನ:
‘ಗ್ರೋ ಮೋರ್ ಸ್ಯಾಂಡಲ್’ ಯೋಜನೆಯಡಿ ಮುಂದಿನ 10 ವರ್ಷಗಳಲ್ಲಿ 10 ಸಾವಿರ ಎಕರೆ ಗಂಧದ ತೋಟ ಬೆಳೆಸುವ ಗುರಿ ಇದೆ. ಪ್ರತಿ ಗಿಡಕ್ಕೆ ₹500 ಪ್ರೋತ್ಸಾಹಧನ ನೀಡಲಾಗುವುದು. ಬೆಂಗಳೂರಿನ ಜಿಕೆವಿಕೆ ಮತ್ತು ವಿಜಯಪುರ ಕೃಷಿ ವಿವಿಯಲ್ಲಿ ಶ್ರೀಗಂಧದ ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷರು ಮತ್ತು ಅಧಿಕಾರಿಗಳ ಮಾತು:
ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಅಪ್ಪಾಜಿ ನಾಡಗೌಡ ಮಾತನಾಡಿ, “ಸಚಿವರ ಸಹಕಾರದಿಂದ ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಿಸಿದ್ದೇವೆ. ಮುಂದೆ ಯುಎಇ ಮಾರುಕಟ್ಟೆಗೂ ಲಗ್ಗೆ ಇಡಲಿದ್ದೇವೆ” ಎಂದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿಕೆಎಂ ಪ್ರಶಾಂತ್ ಮಾತಮಾಡಿ, ಸಂಸ್ಥೆಯ ನೌಕರರಿಗೆ 4.83 ಕೋಟಿ ರೂಪಾಯಿಯನ್ನು ವೇತನ ಒಪ್ಪಂದದ ಮೂಲಕ ನೀಡಲಾಗಿದೆ. 20 ಕೋಟಿ ರೂಪಾಯಿ ಕ್ಯಾಂಪಸ್ ಸಂರಕ್ಷಣೆಗೆ ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಸಂಸ್ಥೆಯ ನೂರಾರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.





















