ಬೆಂಗಳೂರು, ಏ.28 www.bengaluruwire.com: ದೇಶದ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ ಜನಗಣತಿ-2026 ಗಣತಿ ಕಾರ್ಯಕ್ಕೆ ವಿವಿಧ ಸರ್ಕಾರಿ ಇಲಾಖೆಗಳ ನೌಕರರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಿಯೋಜಿಸಿದರೂ ಆ ಕಾರ್ಯಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿರುವುದ ಹಿಂದಿನ ಸತ್ಯ ಬಯಲಾಗಿದೆ.
ಕಳೆದ ವರ್ಷ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಅರ್ಥಾತ್ ಜಾತಿಗಣತಿಯಲ್ಲಿ ಸಮೀಕ್ಷೆದಾರರಾಗಿ ತೊಡಗಿಕೊಂಡ 130 ರಿಂದ 140 ವಿವಿಧ ಇಲಾಖೆಗಳು, ನಿಗಮ, ಮಂಡಳಿಯ 21,186 ಮಂದಿಯ ಬಹುತೇಕರಿಗೆ ಗೌರವ ಧನವನ್ನೇ ಐದು ಬೆಂಗಳೂರು ನಗರ ಪಾಲಿಕೆಗಳು ಸರಿಯಾಗಿ ಪಾವತಿಸಲ್ಲ. ಹೀಗಾಗಿ ಜಿಬಿಎ ವ್ಯಾಪ್ತಿಯಲ್ಲಿ ಈ ಬಾರಿಯ ಜನಗಣತಿ ಕಾರ್ಯಕ್ಕೆ ಬರಲು ಸಾವಿರಾರು ಜನರು ಸರ್ಕಾರಿ ನೌಕರರು ಹಿಂದೇಟು ಹಾಕಲು ಪ್ರಮುಖ ಕಾರಣವಾಗಿದೆ ಎಂದು ಜಿಬಿಎ ಉನ್ನತ ಮೂಲಗಳು ತಿಳಿಸಿವೆ.
ಈ ಬಾರಿ 23,000ಕ್ಕೂ ಹೆಚ್ಚು ಗಣತಿದಾರರು ಮತ್ತು ಸುಮಾರು 2,500 ಮೇಲ್ವಿಚಾರಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. 7-8 ಸಾವಿರ ಸಿಬ್ಬಂದಿಗೆ ವಿವಿಧ ಕಾರಣಗಳಿಗಾಗಿ ವಿನಾಯಿತಿ ನೀಡಲಾಗಿದೆ ಎಂದು ಜಿಬಿಎ ವ್ಯಾಪ್ತಿಯ ಜನಗಣತಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಇತ್ತ ಗೌರವ ಧನವಿಲ್ಲ ಅತ್ತ ಪ್ರತಿ ಮನೆ ಸಮೀಕ್ಷೆ ಹಣವೂ ಇಲ್ಲ:

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ನಿಗಧಿಪಡಿಸಲಾದ ತಲಾ ₹5000 ಗೌರವಧನ ಈತನಕ ಪಾವತಿಯಾಗಿಲ್ಲ. ಇದಲ್ಲದೆ ಒಬ್ಬರಿಂದ ಇಬ್ಬರು ಸದಸ್ಯರಿರುವ ಮನೆ ಸಮೀಕ್ಷೆಗೆ ₹50 ಹಾಗೂ ಮೂರು ಹಾಗೂ ಅದಕ್ಕಿಂತ ಹೆಚ್ಚು ಸದಸ್ಯರಿರುವ ಪ್ರತಿ ಮನೆ ಸಮೀಕ್ಷೆಗೆ ₹100 ನಂತೆ ಒಟ್ಟಾರೆ 19,25,961 ಮನೆಗಳನ್ನು ಸಮೀಕ್ಷೆ ಮಾಡಿದ ಸರ್ಕಾರಿ ನೌಕರರ ಪೈಕಿ ಶೇ.60ರಷ್ಟು ಮಂದಿಗೆ ಮಾತ್ರ ಹಣ ಪಾವತಿಸಲಾಗಿದೆ ಎಂದು ಜಿಬಿಎ ಉನ್ನತ ಮೂಲಗಳು ತಿಳಿಸಿವೆ.
ಗೌರವಧನ ಪಾವತಿಸದ ಎಫೆಕ್ಟ್: ಗಣತಿ ಕಾರ್ಯಕ್ಕೆ ಹಿಂದೇಟು:
ಇತ್ತೀಚೆಗೆ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಬಿಎ ವ್ಯಾಪ್ತಿಯಲ್ಲಿನ ಜನಗಣತಿ ಕಾರ್ಯಕ್ಕೆ ನಿಯೋಜಿಲಾಗಿದ್ದರೂ ಬಹುತೇಕ ಸಿಬ್ಬಂದಿ ಜನಗಣತಿ ಕಾರ್ಯಕ್ಕೆ ನೋಟಿಸ್ ಸೇರಿದಂತೆ ಹಲವು ರೀತಿಯ ಒತ್ತಡಗಳನ್ನು ಮಾಡಿಯೂ ಗಣತಿ ಕಾರ್ಯಕ್ಕರ ಬರಲು ಒಪ್ಪಲಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕೇವಲ 495 ಬಿ ಮತ್ತು ಸಿ ವೃಂದದ ಸಿಬ್ಬಂದಿ ಮಾತ್ರ ಜಿಬಿಎ ವ್ಯಾಪ್ತಿಯಲ್ಲಿನ ಜನಗಣತಿ ಕಾರ್ಯದಲ್ಲಿ ತೊಡಗಿಕೊಂಡರು. ಇದು ಹಿಂದಿನ ಸಮೀಕ್ಷಾ ಕಾರ್ಯದಲ್ಲಿ ಗೌರವಧನ ಸರಿಯಾಗಿ ಪಾವತಿಯಾಗದಿರುವುದರ ಪರಿಣಮ ಎಂದು ವಿಶ್ಲೇಷಿಸಲಾಗುತ್ತಿದೆ.
ಸ್ವಯಂ ಗಣತಿಯಲ್ಲಿ ಜಿಬಿಎ ಪೇಲ್!
ಒಂದೆಡೆ ಸಿಬ್ಬಂದಿ ಕೊರತೆಯಾದರೆ, ಇನ್ನೊಂದೆಡೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಜಿಬಿಎ ಸಂಪೂರ್ಣ ವಿಫಲವಾಗಿದೆ. ಐಟಿ ಸಿಟಿಯಲ್ಲಿ ಆನ್ಲೈನ್ ಮೂಲಕ ಸ್ವಯಂ ಗಣತಿ ಮಾಡಿಕೊಳ್ಳಲು ನೀಡಿದ್ದ ಅವಕಾಶವನ್ನು ಬಳಸಿಕೊಂಡವರು ಕೇವಲ ಶೇ.2 ಕ್ಕಿಂತ ಕಡಿಮೆ. 1.45 ಕೋಟಿ ಜನಸಂಖ್ಯೆಯ ನಗರದಲ್ಲಿ ಈ ನೀರಸ ಪ್ರತಿಕ್ರಿಯೆ ಪಾಲಿಕೆಗಳ ಪ್ರಚಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
2025ರ ಡಿ.12ರಂದೇ 5 ನಗರ ಪಾಲಿಕೆಗಳಿಗೆ ಸಂಪೂರ್ಣ ಅನುದಾನ ಬಿಡುಗಡೆ:
ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಆಯೋಗದಿಂದ 40 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಸಮೀಕ್ಷಾ ಕಾರ್ಯದಲ್ಲಿ 21,186 ಸಮೀಕ್ಷಾದಾರರು ಒಟ್ಟು16,949 ಬ್ಲಾಕ್ ಗಳಲ್ಲಿ 19.25 ಲಕ್ಷ ಮನೆಗಳ ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ ಅವರು ₹23,87,47,200 (₹23.87 ಕೋಟಿ) ಅನುದಾನವನ್ನು 18-11-2025 ರಂದೇ ಜಿಬಿಎಗೆ ಪಾವತಿಸುವಂತೆ ಆದೇಶಿಸಿದ್ದರು. ಅದಾದ ಬಳಿಕ ಜಿಬಿಎ ಮುಖ್ಯ ಲೆಕ್ಕಾಧಿಕಾರಿ ಕಚೇರಿ 12-12-2025 ರಂದು ಐದು ನಗರ ಪಾಲಿಕೆಗಳಿಗೆ ಹಿಂದುಳಿದ ವರ್ಗದ ಆಯೋಗದ ಇಡಿಸಿಎಸ್ (EDCS) ನಲ್ಲಿನ ಸಮೀಕ್ಷಾದಾರರ ವಿವರದಂತೆ ಆಯಾ ಪಾಲಿಕೆಗಳಿಗೆ ಹಣ ಪಾವತಿಸಿದೆ.
ಹಣ ಬಿಡುಗಡೆಯಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದಿಂದ ಹಣ ಪಾವತಿಯಾಗಿದ್ದರೂ ಐದು
ಕಾರ್ಪೊರೇಷನ್ ಗಳು ಇನ್ನೂ ಪೂರ್ತಿಯಾಗಿ ಸಮೀಕ್ಷಾದಾರರಿಗೆ ಹಣ ಪಾವತಿ ಮಾಡಿಲ್ಲ.
ಹಿಂದುಳಿದ ವರ್ಗಗಳ ಆಯೋಗದವರು ಏನಂತಾರೆ?:
ಈ ಬಗ್ಗೆ ಹಿಂದುಳಿದ ವರ್ಗದ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್ ಬೆಂಗಳೂರು ವೈರ್ ಗೆ ಪ್ರತಿಕ್ರಿಯೆ ನೀಡಿದ್ದು, ಆಯೋಗದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಜಿಬಿಎ/ಪಾಲಿಕೆ ಅಧಿಕಾರಿಗಳನ್ನು ಕರೆಸಿ ಸಭೆ ಕರೆದು ಹೇಳಿದಿವಿ. ಸಮೀಕ್ಷೆ ಹಣ ಬಿಡಿಗಡೆ ಮಾಡಿದೆ. ಗೌರವಧನದ ಹಣ ಬಿಡುಗಡೆ ಮಾಡಿ ಅಂತ ಪತ್ರ ಬರೆದಿದ್ದೇವೆ. ಇಷ್ಟಾಗಿಯೂ ಸಂಪೂರ್ಣವಾಗಿ ಹಣ ಪಾವತಿಸಿಲ್ಲ ಅಂದರೆ ಹೇಗೆ?” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಹಿಂದಿನ ಬಿಬಿಎಂಪಿ ಕೇಂದ್ರಾಡಳಿದಿಂದ ಈಗಿನ ಜಿಬಿಎ ಹಾಗೂ 5 ನಗರ ಪಾಲಿಕೆಗಳ ವಿಕೇಂದ್ರಿಕೃತ ವ್ಯವಸ್ಥೆಗೆ ಹೊಂದಿಕೊಳ್ಳಲು ಇನ್ನು ಸಮಯವಕಾಶ ಬೇಕಾಗುತ್ತದೆ. ಹೌದು. ಆದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಂತಹ ಪ್ರಮುಖವಾದ ಕಾರ್ಯದಲ್ಲಿ ಪಾಲ್ಗೊಂಡವರಿಗೆ ಈತನಕ ಗೌರವ ಧನ ಪಾವತಿಯಾಗದಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಸಮೀಕ್ಷಾದಾರರು ಹಿಡಿಶಾಪ ಹಾಕುತ್ತಿದ್ದಾರೆ.





















