ಬೆಂಗಳೂರು, ಏ.19 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ‘ಸುಸ್ಥಿರ ಇಂಧನ: 2047ರ ಭಾರತಕ್ಕಾಗಿ ಒಂದು ಕಾರ್ಯಸೂಚಿ’ ಎಂಬ ಐತಿಹಾಸಿಕ ಅಂತರಾಷ್ಟ್ರೀಯ ಸಮ್ಮೇಳನವು ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಅಂತರರಾಷ್ಟ್ರೀಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸಮಾರೋಪ ಭಾಷಣ ಮಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ಸಾಂಪ್ರದಾಯಿಕ ಮೂಲಗಳಿಂದ ನವೀಕರಿಸಬಹುದಾದ ಮೂಲಗಳಿಗೆ ಇಂಧನ ಪರಿವರ್ತನೆಯು ಮಹತ್ವಾಕಾಂಕ್ಷೆಯಾಗಿ ಉಳಿಯದೇ, ಅನುಷ್ಠಾನಕ್ಕೆ ಸಂಘಟಿತ ಕ್ರಮವಹಿಸಬೇಕಿದೆ ಎಂದರು.
“ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ ಸಮೇಳನ ವೇದಿಕೆಯಾಯಿತು. ಸುಸ್ಥಿರ ಇಂಧನ ಭವಿಷ್ಯವನ್ನು ರೂಪಿಸುವಲ್ಲಿ ಈ ಸಮ್ಮೇಳನದ ನಿರ್ಣಯಗಳು ಪ್ರಮುಖ ಪಾತ್ರ ವಹಿಸುತ್ತವೆ,” ಎಂದು ಅವರು ಹೇಳಿದರು.
“ಈ ಸಮ್ಮೇಳನವು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಅರ್ಥಪೂರ್ಣ ಸಂವಾದಕ್ಕೆ ವೇದಿಕೆ ಕಲ್ಪಿಸಿತು.ಭಾರತದ ಇಂಧನ ಪರಿವರ್ತನೆಗೆ ಸಾಂಸ್ಥಿಕ ಸಹಯೋಗವು ನಿರ್ಣಾಯಕವಾಗಿರುತ್ತದೆ” ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಭಿಪ್ರಾಯಪಟ್ಟರು.

“2047ರ ವೇಳೆಗೆ ಭಾರತದ ಇಂಧನ ಬೇಡಿಕೆ ಸುಮಾರು 4 ಪಟ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ನವೀಕರಿಸಬಹುದಾದ ಇಂಧನದ ಬಳಕೆಗೆ ಒತ್ತು ನೀಡುವುದೇ ಇದಕ್ಕೆ ಇರುವ ಪ್ರಮುಖ ಪರಿಹಾರ. ಇಂಧನ ಭದ್ರತೆಗಾಗಿ ಇಂಧನ ಸಂಗ್ರಹಣಾ ವ್ಯವಸ್ಥೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ನ್ಯಾಯಾಂಗ, ಸರ್ಕಾರ ಮತ್ತು ಉದ್ಯಮಗಳ ನಡುವಿನ ಸಹಕಾರ ಈ ನಿಟ್ಟಿನಲ್ಲಿ ನಿರ್ಣಾಯಕವಾಗುತ್ತದೆ” ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ವಾಸ್ತವತೆಯನ್ನು ಸಮ್ಮೇಳನದಲ್ಲಿ ತೆರದಿಟ್ಟರು.
ಸಮ್ಮೇಳನದ ಕೊನೆಯ ದಿನವಾದ ಇಂದು ಸುಸ್ಥಿರ ಇಂಧನ ಮತ್ತು ಇಂಧನ ನ್ಯಾಯಕ್ಕೆ ಸಂಬಂಧಿಸಿದಂತೆ ‘ಬೆಂಗಳೂರು ಘೋಷಣೆ’ಯನ್ನು (Bengaluru Declaration) ಅಂಗೀಕರಿಸುವ ಮೂಲಕ ಭವಿಷ್ಯದ ಅಭಿವೃದ್ಧಿಗೆ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಯಿತು.
ಕಾಮನ್ವೆಲ್ತ್ ಕಾನೂನು ಶಿಕ್ಷಣ ಸಂಸ್ಥೆ (CLEA), ರಾಜ್ಯ ಸರ್ಕಾರದ ಇಂಧನ ಇಲಾಖೆ, ಬೆಸ್ಕಾಂ ಹಾಗೂ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಸಮಾವೇಶದಲ್ಲಿ ಕಾನೂನು, ತಂತ್ರಜ್ಞಾನ ಮತ್ತು ನೀತಿ ನಿರೂಪಣೆಯ ಸಮನ್ವಯಕ್ಕೆ ಒತ್ತು ನೀಡಲಾಯಿತು.
ಘೋಷಣೆಯ ಪ್ರಮುಖ ಅಂಶಗಳು:
ಸಮ್ಮೇಳನದ ಅಧ್ಯಕ್ಷರಾದ ಪ್ರೊ. (ಡಾ.) ಎಸ್. ಶಿವಕುಮಾರ್ ಅವರು ಪ್ರಕಟಿಸಿದ ಬೆಂಗಳೂರು ಘೋಷಣೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ:
ಇಂಧನ ನ್ಯಾಯ (Energy Justice):
ಇಂಧನವು ಕೇವಲ ಸಂಪನ್ಮೂಲವಲ್ಲ, ಅದು ಆರ್ಥಿಕ ಬೆಳವಣಿಗೆಯ ಬೆನ್ನೆಲುಬು. ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಮತ್ತು ವಿಶ್ವಾಸಾರ್ಹವಾದ ಇಂಧನ ಸಿಗುವಂತಾಗಬೇಕು.
ಕಾನೂನು ಚೌಕಟ್ಟು:
ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲೀಕರಣದ ಸವಾಲುಗಳನ್ನು ಎದುರಿಸಲು ಪಾರದರ್ಶಕ ಹಾಗೂ ಬಲಿಷ್ಠ ಕಾನೂನು ನಿಯಮಗಳ ಅಗತ್ಯವಿದೆ.
ತಂತ್ರಜ್ಞಾನ ಮತ್ತು ಎಐ: ಇಂಧನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಾಗ ಗ್ರಾಹಕರ ಹಿತಾಸಕ್ತಿ ಹಾಗೂ ದತ್ತಾಂಶ ಗೌಪ್ಯತೆಗೆ (Data Privacy) ಆದ್ಯತೆ ನೀಡಲಾಗುವುದು.
ಸಹಕಾರ ಒಕ್ಕೂಟ ವ್ಯವಸ್ಥೆ:
ರಾಷ್ಟ್ರೀಯ ಗುರಿಗಳನ್ನು ತಲುಪಲು ರಾಜ್ಯ ಸರ್ಕಾರಗಳ ಪಾತ್ರ ನಿರ್ಣಾಯಕವಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಹಕಾರ ಇರಬೇಕು.
ಕಾನೂನು ಶಿಕ್ಷಣದ ಮರುಚಿಂತನೆ:
ಬದಲಾಗುತ್ತಿರುವ ಇಂಧನ ಮತ್ತು ಹವಾಮಾನದ ಸವಾಲುಗಳನ್ನು ಎದುರಿಸಲು ವಕೀಲರು ಹಾಗೂ ನ್ಯಾಯಾಧೀಶರಿಗೆ ವಿಶೇಷ ತರಬೇತಿ ಮತ್ತು ಕಾನೂನು ಪಠ್ಯಕ್ರಮದಲ್ಲಿ ಬದಲಾವಣೆ ತರಲು ನಿರ್ಧರಿಸಲಾಯಿತು.
ಕರ್ನಾಟಕದ ಸಾಧನೆಗೆ ಶ್ಲಾಘನೆ:
ಈಗಾಗಲೇ ಸಮ್ಮೇಳನದ ಮೊದಲ ದಿನ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕವು ಒಟ್ಟು 25,700 ಮೆಗಾವ್ಯಾಟ್ಗಿಂತ ಹೆಚ್ಚು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದುವ ಮೂಲಕ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದರು. ಸೌರಶಕ್ತಿ, ಪವನಶಕ್ತಿ ಮತ್ತು ಜಲಶಕ್ತಿಯಲ್ಲಿ ಕರ್ನಾಟಕದ ಈ ಸಾಧನೆಯು ‘ಬೆಂಗಳೂರು ಘೋಷಣೆ’ಯ ಉದ್ದೇಶಗಳಿಗೆ ಬಲ ತುಂಬಿದೆ.
2047ರ ‘ವಿಕಸಿತ ಭಾರತ’ದ ಕನಸನ್ನು ಸಾಕಾರಗೊಳಿಸಲು ಈ ಸಮ್ಮೇಳನದ ನಿರ್ಣಯಗಳು ದಾರಿದೀಪವಾಗಲಿವೆ ಎಂದು ಸಿಎಲ್ ಇಎ ಅಧ್ಯಕ್ಷರಾದ ಪ್ರೊ. ಎಸ್. ಶಿವಕುಮಾರ್ ಅವರು ಆಶಯ ವ್ಯಕ್ತಪಡಿಸಿದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾ. ವಿಕ್ರಮ್ ನಾಥ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ್, ಕೆಪಿಟಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕಕರಾದ ಡಾ.ರಾಮ್ ಪ್ರಸಾತ್ ಮನೋಹರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್ ಮತ್ತು ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು, ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳು, ರಾಜ್ಯ ಹೈಕೋರ್ಟ್ ನ್ಯಾಯಾಧೀಶರುಗಳು ಪಾಲ್ಗೊಂಡು ಸಮ್ಮೇಳನ ಯಶಸ್ವಿಯಾಗಿ ಸಂಪನ್ನಗೊಂಡಿತು.






















