ವಿಶೇಷ ವರದಿ: ಶ್ಯಾಮ್ ಹೆಬ್ಬಾರ್.ಎಸ್
ಬಸವಕಲ್ಯಾಣ, (ಬೀದರ್) ಏ.20 www.bengaluruwire.com: 12ನೇ ಶತಮಾನದಲ್ಲಿ ಸಮಾನತೆ ಮತ್ತು ಶರಣ ಸಾಹಿತ್ಯದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಮೊದಲ ಪರಿಕಲ್ಪನೆ ನೀಡಿದ ಬಸವಣ್ಣನವರ ‘ಅನುಭವ ಮಂಟಪ’ ಕಟ್ಟಡವು ಆಧುನಿಕ ರೂಪದಲ್ಲಿ ಮರುಜನ್ಮ ಪಡೆಯುತ್ತಿದೆ.
ಬಸವಕಲ್ಯಾಣದ ತ್ರಿಪುರಾಂತ ಕೆರೆಯ ದಂಡೆಯ ಮೇಲೆ ಸುಮಾರು 25 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಈ ಭವ್ಯ ಕಟ್ಟಡವು 2027ರ ಬಸವ ಜಯಂತಿಯ ವೇಳೆಗೆ ಲೋಕಾರ್ಪಣೆಯಾಗುವುದು ಬಹುತೇಕ ಖಚಿತವಾಗಿದೆ.
₹750 ಕೋಟಿಗೆ ಏರಿದ ಯೋಜನಾ ವೆಚ್ಚ:
ಆರಂಭದಲ್ಲಿ ಕಡಿಮೆ ಅಂದಾಜಿನಲ್ಲಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯ ವೆಚ್ಚವು ಈಗ ₹750 ಕೋಟಿಗೆ ತಲುಪಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇದುವರೆಗೆ ₹280 ಕೋಟಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಸೂಚನೆ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಈ ಯೋಜನಾ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
“12ನೇ ಶತಮಾನದಲ್ಲಿ ಲೋಕಕ್ಕೆ ಸಮಾನತೆಯನ್ನು ಸಾರಿದ, ಅಂತರ್ಜಾತಿ ವಿವಾಹವನ್ನು ಜಾರಿಗೆ ತಂದ, ಕಲ್ಯಾಣ ಕ್ರಾಂತಿಯನ್ನು ಸಾರಲು ಕಾರಣವಾದ ಅನುಭವ ಮಂಟಪದ ಪರಿಕಲ್ಪನೆಯ ಆಧುನಿಕ ಅನುಭವ ಮಂಟಪದ ಕಾಮಗಾರಿ 2027ರ ಬಸವ ಜಯಂತಿ ಒಳಗೆ ಪೂರ್ಣಗೊಳ್ಳಲಿದೆ” ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಎಂದು ತಿಳಿಸಿದ್ದಾರೆ.

ಕಲ್ಯಾಣ-ಚಾಲುಕ್ಯ ಶೈಲಿಯ ವಾಸ್ತುಶಿಲ್ಪ:
ಗೊ.ರು. ಚನ್ನಬಸಪ್ಪ ಸಮಿತಿಯ ಶಿಫಾರಸ್ಸಿನಂತೆ ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿದೆ:
770 ಸ್ತಂಭಗಳು: 770 ಶರಣರ ನೆನಪಿಗಾಗಿ ಅಷ್ಟೇ ಸಂಖ್ಯೆಯ ಕಲ್ಲಿನ ಕಂಬಗಳನ್ನು ನಿರ್ಮಿಸಲಾಗಿದ್ದು, ಪ್ರತಿ ಕಂಬದ ಮೇಲೆ ಶರಣರ ಹೆಸರು, ವೃತ್ತಿ ಮತ್ತು ಅವರ ವಚನಗಳನ್ನು ಕೆತ್ತಲಾಗಿದೆ.
ಆರು ಅಂತಸ್ತಿನ ಭವನ: ನೆಲಮಹಡಿ ಸೇರಿದಂತೆ ಒಟ್ಟು ಆರು ಅಂತಸ್ತುಗಳ (G+4) ಈ ಕಟ್ಟಡದಲ್ಲಿ ಅತ್ಯಾಧುನಿಕ ಗ್ರಂಥಾಲಯ, ಸಂಶೋಧನಾ ಕೇಂದ್ರ ಮತ್ತು ಯೋಗ ಕೇಂದ್ರಗಳಿವೆ.
ದಾಸೋಹ ಭವನ: ಒಮ್ಮೆಗೆ 1,500 ಜನರು ಕುಳಿತು ಪ್ರಸಾದ ಸ್ವೀಕರಿಸುವಂತಹ ವಿಶಾಲವಾದ ಬೇಸ್ಮೆಂಟ್ ಸಭಾಂಗಣ ಇಲ್ಲಿದೆ.
ಡಿಜಿಟಲ್ ಸ್ಪರ್ಶ: ರೋಬೋಟಿಕ್ಸ್ ತಂತ್ರಜ್ಞಾನ ಮತ್ತು ಡಿಜಿಟಲ್ ಪ್ರದರ್ಶನದ ಮೂಲಕ ಶರಣರ ಜೀವನ ಚರಿತ್ರೆಯನ್ನು ಪ್ರವಾಸಿಗರಿಗೆ ಉಣಬಡಿಸಲಾಗುತ್ತದೆ.
ಬಸವಕಲ್ಯಾಣದಲ್ಲಿ ಪ್ರಸ್ತುತ ಇರುವ ಅನುಭವ ಮಂಟಪವನ್ನು ನಿರ್ಮಿಸಲು ಭಾಲ್ಕಿ ಹೀರೇಮಠದ ಡಾ.ಚೆನ್ನಬಸವ ಪಟ್ಟದ ದೇವರು ಸ್ವಾಮೀಜಿಯವರ ಒತ್ತು ನೀಡಿದ್ದರು. ಅವರ ಶಿಷ್ಯರಲ್ಲಿ ಪ್ರಮುಖರಾಗಿದ್ದ ಮಾಜಿ ಸಚಿವ ದಿವಂಗತ ಡಾ.ಭೀಮಣ್ಣ ಖಂಡ್ರೆಯವರು ಮೊದಲಿಗೆ ಪ್ರಸ್ತುತ ಇರುವ ಅನುಭವ ಮಂಟಪದ ನಿರ್ಮಾಣಕ್ಕೆ ₹25,000 ಇಡಗಂಟನ್ನು ಇಟ್ಟು, ದಾನದ ಮೂಲಕ ಉಳಿದ ಹಣ ಸಂಗ್ರಹಿಸಿ ಅನುಭವ ಮಂಟಪದ ಕಟ್ಟಡವನ್ನು ನಿರ್ಮಿಸಿದ್ದರು. ಆ ಕಟ್ಟಡದಲ್ಲಿ ಶಿವಲಿಂಗ ಕಟ್ಟಲು ಕಾರ್ಮಿಕರು ಹಿಂದೇಟು ಹಾಕಿದಾಗ ಖುದ್ದು ತಾವೇ ಜಲ್ಲಿ, ಮರಳು, ಸಿಮೆಂಟ್ ಹಾಗೂ ಕಬ್ಬಿಣ ಬಳಸಿ ಒಂದೇ ರಾತ್ರಿಯಲ್ಲಿ ಶಿವಲಿಂಗ ನಿರ್ಮಿಸಿ ಅನುಭವ ಮಂಟಪದ ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಿದ್ದರು.
2015ರಲ್ಲಿ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ನೇತೃತ್ವದ ನಿಯೋಗ, ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಬಳಿ ತೆರಳಿ ಆಧುನಿಕ ಅನುಭವ ಮಂಟಪ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಸಮ್ಮತಿ ಸೂಚಿಸಿದ್ದ ಸಿದ್ದರಾಮಯ್ಯ ಅವರು, ಗೊ.ರು.ಚೆನ್ನಬಸಪ್ಪ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿತ್ತು. ಈ ಸಮಿತಿಯು ಆಧುನಿಕ ಅನುಭವ ಮಂಟಪ ರಚನೆ, ಪ್ರಮುಖ ಬಸವಾದಿ ಶರಣರು ಸೇರಿದಂತೆ ಅನುಭವ ಮಂಟಪದ ಕುರಿತಂತೆ ಅಧ್ಯಯನ, ವಾಸ್ತುಶಿಲ್ಪಿಗಳು, ವಚನ ತಜ್ಞರು ಮತ್ತಿತರರೊಂದಿಗೆ ಹಲವು ಬಾರಿ ಸಂವಾದ, ಸಭೆ ನಡೆಸಿ ಅಂತಿಮವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದಾದ ಬಳಿಕ 2021ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಯೋಜನೆಗೆ ಚಾಲನೆ ದೊರೆತಿತ್ತು.
ರಾಜಕೀಯ ಮತ್ತು ಸಾಂಸ್ಕೃತಿಕ ಮಹತ್ವ:
2028ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಲೂ ಈ ಯೋಜನೆ ಮಹತ್ವ ಪಡೆದಿದೆ. 2027ರ ಅಂತ್ಯದ ವೇಳೆಗೆ ಇದನ್ನು ಲೋಕಾರ್ಪಣೆಗೊಳಿಸುವ ಮೂಲಕ ಲಿಂಗಾಯತ ಮತದಾರರ ಒಲವು ಗಳಿಸಲು ಸರ್ಕಾರ ಮುಂದಾಗಿದೆ ಎಂಬ ವಿಶ್ಲೇಷಣೆಗಳೂ ಇವೆ. ಏನೇ ಇರಲಿ, ಭಾಲ್ಕಿಯ ಹೀರೇಮಠ ಡಾ. ಚೆನ್ನಬಸವ ಪಟ್ಟದ ದೇವರು ಮತ್ತು ಡಾ. ಭೀಮಣ್ಣ ಖಂಡ್ರೆ ಅವರ ಕನಸಾಗಿದ್ದ ಈ ಆಧುನಿಕ ಅನುಭವ ಮಂಟಪವು ಲೋಕಾರ್ಪಣೆಯಾಗದ ಬಳಿಕ ವಿಶ್ವದ ಗಮನ ಸೆಳೆಯುವ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.





















