ಬೆಂಗಳೂರು, ಏ.18 www.bengaluruwire: ಸಿಲಿಕಾನ್ ಸಿಟಿಯ ನಾಗರಿಕರು ಹಲವು ವರ್ಷಗಳಿಂದ ಎದುರು ನೋಡುತ್ತಿದ್ದ ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತಷ್ಟು ತಡವಾಗುವುದು ಬಹುತೇಕ ಖಚಿತವಾಗಿದೆ.
ಜನಗಣತಿ ಕಾರ್ಯ ಹಾಗೂ ಸಿಬ್ಬಂದಿ ಕೊರತೆಯ ಕಾರಣಗಳನ್ನು ನೀಡಿರುವ ರಾಜ್ಯ ಸರ್ಕಾರವು, ಈ ಚುನಾವಣೆಗಳನ್ನು ನಡೆಸುವ ಕಾಲಾವಧಿಯನ್ನು ಸೆಪ್ಟೆಂಬರ್ 30, 2026 ರವರೆಗೆ ವಿಸ್ತರಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಕೆ.ಜಿ. ಜಗದೀಶ ಅವರು ಏಪ್ರಿಲ್ 15 ರಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಮುಖ್ಯ ಆಯುಕ್ತರು ನೀಡಿರುವ ವರದಿಯನ್ನಾಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಚುನಾವಣೆ ಮುಂದೂಡಿಕೆಗೆ ಕಾರಣಗಳೇನು?:

ಸರ್ಕಾರದ ಪತ್ರದಲ್ಲಿ ಚುನಾವಣೆ ವಿಳಂಬಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ನೀಡಲಾಗಿದೆ:
1. ಜನಗಣತಿ ಕಾರ್ಯ: 1948ರ ಜನಗಣತಿ ಕಾಯ್ದೆಯಡಿ ಪ್ರಸ್ತುತ ಜನಗಣತಿ ಕಾರ್ಯಾಚರಣೆಗಳು ನಡೆಯುತ್ತಿವೆ. ಇಡೀ ಆಡಳಿತ ಮತ್ತು ಕ್ಷೇತ್ರ ಮಟ್ಟದ ಯಂತ್ರವು ಈ ಶಾಸನಬದ್ಧ ಕೆಲಸದಲ್ಲಿ ತೊಡಗಿಸಿಕೊಂಡಿದೆ.
2. ಮತದಾರರ ಪಟ್ಟಿ ಪರಿಷ್ಕರಣೆ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯವೂ ಏಕಕಾಲದಲ್ಲಿ ನಡೆಯುತ್ತಿದ್ದು, ಇದಕ್ಕೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯ ಅಗತ್ಯವಿದೆ.
3. ಶೈಕ್ಷಣಿಕ ಪರೀಕ್ಷೆಗಳು: ಮೇ ಮತ್ತು ಜೂನ್ ತಿಂಗಳಿನಲ್ಲಿ ಶೈಕ್ಷಣಿಕ ಪರೀಕ್ಷಾ ಕರ್ತವ್ಯಗಳಿಗೆ ಸಿಬ್ಬಂದಿಯನ್ನು ನಿಯೋಜಿಸುವುದರಿಂದ ಚುನಾವಣಾ ಕೆಲಸಗಳಿಗೆ ಮಾನವಶಕ್ತಿಯ ಕೊರತೆ ಎದುರಾಗಲಿದೆ.
ಚುನಾವಣಾ ಕಾಲಾವಧಿ ವಿಸ್ತರಣೆಯ ಅಗತ್ಯತೆ:
ಗ್ರೇಟರ್ ಬೆಂಗಳೂರು ಪ್ರದೇಶದ ಚುನಾವಣಾ ಪೂರ್ವಸಿದ್ಧತೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ಮತದಾರರ ಪಟ್ಟಿಯನ್ನು ದೋಷರಹಿತವಾಗಿ ಸಿದ್ಧಪಡಿಸಲು ಕಾಲಾವಕಾಶದ ಅಗತ್ಯವಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿರುವುದರಿಂದ ಅಂದಿನವರೆಗೆ ಕಾಲಮಿತಿ ವಿಸ್ತರಿಸಲು ಕೋರಲಾಗಿದೆ. ಒಟ್ಟಾರೆಯಾಗಿ, ಬೆಂಗಳೂರಿನ ಜನತೆ ಪಾಲಿಕೆ ಚುನಾವಣೆಗಾಗಿ ಇನ್ನೂ ಕೆಲವು ತಿಂಗಳು ಕಾಯುವುದು ಅನಿವಾರ್ಯವಾಗಿದೆ.






















