ಬೆಂಗಳೂರು, ಏ.13 www.bengaluruwire.com: ಗ್ರಾಮೀಣ ಭಾಗದ ಆಸ್ತಿಗಳ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು ರಾಜ್ಯ ಸರ್ಕಾರ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ.
ತಂತ್ರಾಂಶದಲ್ಲಿದ್ದ ತಾಂತ್ರಿಕ ದೋಷಗಳನ್ನು ನಿವಾರಿಸುವ ಮೂಲಕ ಸಾರ್ವಜನಿಕರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಈವರೆಗೆ ಸ್ವೀಕೃತವಾದ 1,52,863 ಅರ್ಜಿಗಳ ಪೈಕಿ 1,33,803 ಅರ್ಜಿಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಬಾಕಿ ಇರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಂತ್ರಾಂಶದಲ್ಲಿನ ಪ್ರಮುಖ ಸುಧಾರಣೆಗಳು:

ಸಾರ್ವಜನಿಕರು ಸಿಟಿಜನ್ ಇಂಟರ್ಫೇಸ್ ಮೂಲಕ ಅರ್ಜಿ ಸಲ್ಲಿಸುವಾಗ ಎದುರಿಸುತ್ತಿದ್ದ ಸಮಸ್ಯೆಗಳನ್ನು ಮನಗಂಡು ಹಲವು ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ ನಮೂನೆ-11ಬಿ ಖಾತೆಗಳನ್ನು ನಮೂನೆ-11ಎ ಗೆ ಪರಿವರ್ತಿಸಿಕೊಳ್ಳಲು ಈಗ ಗ್ರಾಮ ಪಂಚಾಯತಿ ಹಂತದಲ್ಲೇ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಗ್ರಾಮೀಣ ಭಾಗದ ಬಹುಮಹಡಿ ಕಟ್ಟಡಗಳ (ಅಪಾರ್ಟ್ಮೆಂಟ್) ಖಾತೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಹ ಪಂಚಾಯತಿ ಮಟ್ಟಕ್ಕೆ ವಿಸ್ತರಿಸಲಾಗಿದೆ.
ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಇದ್ದ ಗೊಂದಲಗಳನ್ನು ನಿವಾರಿಸಲು ಗುಂಟೆ ಮತ್ತು ಸೆಂಟ್ಸ್ನಲ್ಲಿರುವ ಅಳತೆಯನ್ನು ಚದರ ಮೀಟರ್ಗೆ ಪರಿವರ್ತಿಸಿ ಅರ್ಜಿ ಸಲ್ಲಿಸುವ ಸೌಲಭ್ಯ ನೀಡಲಾಗಿದೆ. ಇಸಿ (ಋಣಭಾರ ಪ್ರಮಾಣಪತ್ರ) ಅಪ್ಲೋಡ್ ಮಾಡುವಲ್ಲಿ ಹಾಗೂ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳುವಲ್ಲಿ ಉಂಟಾಗುತ್ತಿದ್ದ ಸರ್ವರ್ ಸಮಸ್ಯೆಗಳನ್ನು ಈಗ ಸರಿಪಡಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಮುಂದಿನ ಯೋಜನೆಗಳು:
ಆಸ್ತಿಗಳ ನೋಂದಣಿ ಸಮಯದಲ್ಲಿ ಮುದ್ರಾಂಕ ಇಲಾಖೆಯ ಮಾರ್ಗಸೂಚಿ ದರಗಳನ್ನು ಇ-ಸ್ವತ್ತು ತಂತ್ರಾಂಶದೊಂದಿಗೆ ನೇರವಾಗಿ ಸಂಯೋಜಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ಆಸ್ತಿ ಮೌಲ್ಯಮಾಪನ ಮತ್ತು ತೆರಿಗೆ ಲೆಕ್ಕಾಚಾರ ಸುಲಭವಾಗಲಿದೆ. ಇಂಧನ ಕಂಪನಿಗಳ (Bescom, Mescom ಇತ್ಯಾದಿ) ದತ್ತಾಂಶ ಸಂಯೋಜನೆಯಲ್ಲಿನ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಸಾರ್ವಜನಿಕರು ಸುಲಭವಾಗಿ ಸೇವೆ ಪಡೆಯಬಹುದಾಗಿದೆ.
ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ರಣ್ದೀಪ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ https://eswathu.karnataka.gov.in ಜಾಲತಾಣ ಅಥವಾ ಸಹಾಯವಾಣಿ ಸಂಖ್ಯೆ 9483476000 ಅನ್ನು ಸಂಪರ್ಕಿಸಬಹುದು.























