ಬೆಂಗಳೂರು, ಏ.14 www.bengaluruwire.com: ರಾಜ್ಯದಲ್ಲಿ ಕೈಗಾರಿಕಾ ಕ್ರಾಂತಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ (SHLCC) 67ನೇ ಸಭೆಯಲ್ಲಿ ರಾಜ್ಯಾದ್ಯಂತ ಒಟ್ಟು 18,430.44 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯ ವಿವಿಧ ಯೋಜನೆಗಳಿಗೆ ಸಮಿತಿಯು ಹಸಿರು ನಿಶಾನೆ ತೋರಿಸಿದೆ.
ಈ ಬೃಹತ್ ಹೂಡಿಕೆಯಿಂದಾಗಿ ರಾಜ್ಯದ ಸುಮಾರು 15,032 ಜನರಿಗೆ ನೇರ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸೋಮವಾರ ಗೃಹಕಚೇರಿ ‘ಕೃಷ್ಣಾ’ದಲ್ಲಿ ನಡೆದ ಈ ಪ್ರಮುಖ ಸಭೆಯು ರಾಜ್ಯದ ಆರ್ಥಿಕ ಪ್ರಗತಿಗೆ ಪೂರಕವಾದ ಹಲವು ಪ್ರಸ್ತಾವನೆಗಳನ್ನು ಪುರಸ್ಕರಿಸಿತು.
ಯೋಜನೆಗಳ ವಿವರ:
ಸಭೆಯಲ್ಲಿ ಒಟ್ಟು 17 ಯೋಜನಾ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದ್ದು, ಅವುಗಳ ವಿವರ ಹೀಗಿದೆ:

ಹೊಸ ಪ್ರಸ್ತಾವನೆಗಳು: 14,906.9 ಕೋಟಿ ರೂ. ಮೌಲ್ಯದ 11 ಹೊಸ ಹೂಡಿಕೆ ಯೋಜನೆಗಳು. ಇದರಿಂದ 13,050 ಜನರಿಗೆ ಕೆಲಸ ಸಿಗಲಿದೆ.
ಹೆಚ್ಚುವರಿ ಹೂಡಿಕೆ: ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಸಂಬಂಧಿಸಿದ 3,523.54 ಕೋಟಿ ರೂ.ಗಳ 6 ಹೆಚ್ಚುವರಿ ಪ್ರಸ್ತಾವನೆಗಳು. ಇದರಿಂದ 1,982 ಉದ್ಯೋಗ ಸೃಷ್ಟಿಯಾಗಲಿದೆ.
ಈ ಹೂಡಿಕೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಂಚಿಕೆಯಾಗಲಿದ್ದು, ಪ್ರಾದೇಶಿಕ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಸಂಪುಟದ ಪ್ರಮುಖ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.























