ಬೆಂಗಳೂರು, ಮಾ.26 www.bengaluruwire.com: ರಾಜ್ಯದ ಶಾಲಾ ಮಕ್ಕಳ ಪೋಷಕರಲ್ಲಿ ಮನೆಮಾಡಿದ್ದ ಪ್ರವೇಶಾತಿ ವಯೋಮಿತಿಯ ಆತಂಕಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ.
ಎಲ್ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿ ಪ್ರವೇಶಾತಿಗಾಗಿ ನಿಗದಿಪಡಿಸಲಾಗಿದ್ದ ವಯೋಮಿತಿಯಲ್ಲಿ 60 ದಿನಗಳ ಕಾಲ ಸಡಿಲಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಗುರುವಾರ ವಿಧಾನಸಭೆಯಲ್ಲಿ ತಿಳಿಸಿದರು.
ಗುರುವಾರ ನಡೆದ ಸದನದ ಕಲಾಪದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, “ಅನೇಕ ಪೋಷಕರು ತಮ್ಮ ಮಕ್ಕಳ ಪ್ರವೇಶಾತಿಯಲ್ಲಿ ಕೆಲವು ದಿನಗಳ ವ್ಯತ್ಯಾಸದಿಂದಾಗಿ ಎದುರಿಸುತ್ತಿದ್ದ ತೊಂದರೆಗಳನ್ನು ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1993ರ ನಿಯಮಗಳ ಅನ್ವಯ 60 ದಿನಗಳ ವಿನಾಯಿತಿಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಇಲಾಖೆಯ ತಂತ್ರಾಂಶದಲ್ಲಿಯೂ ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು,” ಎಂದು ಸ್ಪಷ್ಟಪಡಿಸಿದರು.
ಎಲ್ಕೆಜಿ, ಯುಕೆಜಿಗೂ ಬರಲಿದೆ ಕಾನೂನು:

ಪ್ರಸ್ತುತ ಎಲ್ಕೆಜಿ ಮತ್ತು ಯುಕೆಜಿ ಶಿಕ್ಷಣ ಕ್ರಮಕ್ಕೆ ಯಾವುದೇ ಬಲವಾದ ನಿಯಂತ್ರಕ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡಿರುವ ಸರ್ಕಾರ, ಈ ಬಗ್ಗೆ ಹೊಸ ಕಾನೂನು ರೂಪಿಸಲು ಮುಂದಾಗಿದೆ. “ಖಾಸಗಿ ಶಾಲೆಗಳು ತಮಗೆ ಇಷ್ಟ ಬಂದಂತೆ ಮಕ್ಕಳನ್ನು ಸೇರಿಸಿಕೊಳ್ಳುವ ಪದ್ಧತಿಗೆ ಕಡಿವಾಣ ಹಾಕಿ, ಎಲ್ಕೆಜಿ ಮತ್ತು ಯುಕೆಜಿ ಪ್ರವೇಶಾತಿಗೂ ಒಂದು ನಿರ್ದಿಷ್ಟ ವ್ಯವಸ್ಥೆ ತರಲಾಗುವುದು. ಮುಂದಿನ ಅಧಿವೇಶನದಲ್ಲಿ ಈ ಕುರಿತ ಕಾನೂನನ್ನು ಮಂಡಿಸಿ ಜಾರಿಗೆ ತರುತ್ತೇವೆ,” ಎಂದು ಸಚಿವರು ಭರವಸೆ ನೀಡಿದರು.
ಈ ನಿರ್ಧಾರದಿಂದಾಗಿ ಕೆಲವೇ ದಿನಗಳ ವಯಸ್ಸಿನ ವ್ಯತ್ಯಾಸದಿಂದ ಪ್ರವೇಶಾತಿ ವಂಚಿತರಾಗುತ್ತಿದ್ದ ಸಾವಿರಾರು ಮಕ್ಕಳಿಗೆ ಅನುಕೂಲವಾಗಲಿದ್ದು, ಪೋಷಕರ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.























