ಬೆಂಗಳೂರು, ಮಾ.26 www.bengaluruwire.com: “ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ, ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಬೆಂಗಳೂರು ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ನಲ್ಲಿ ಕೇವಲ ಶೇ. 4.11 ರಷ್ಟು ಅನುದಾನ ನೀಡುವ ಮೂಲಕ ನಗರದ ಜನತೆಗೆ ಮಹಾ ವಂಚನೆ ಮಾಡಿದ್ದಾರೆ” ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಅಸ್ತಿತ್ವಕ್ಕೆ ಬಂದು ಆರು ತಿಂಗಳಾಗುವ ಮೊದಲೇ ಬೆಂಗಳೂರಿನ 05 ನಗರ ಪಾಲಿಕೆಗಳು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. 2026-27ರ ಸಾಲಿನ ನಿರ್ವಹಣೆ ಮತ್ತು ಕನಿಷ್ಠ ಅಭಿವೃದ್ಧಿ ಕಾರ್ಯಗಳಿಗಾಗಿ ₹16,000 ಕೋಟಿ ಅನುದಾನದ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ಲಿಖಿತ ಮನವಿ ಸಲ್ಲಿಸಿದ್ದರು. ಆದರೆ, 17ನೇ ಬಾರಿ ಬಜೆಟ್ ಮಂಡಿಸಿರುವ ಸಿಎಂ ಸಿದ್ಧರಾಮಯ್ಯ ಅವರು ಕೇವಲ ₹7,000 ಕೋಟಿ ಘೋಷಿಸಿರುವುದು ನಗರದ ವಿರೋಧಿ ನೀತಿಯಾಗಿದೆ ಎಂದು ರಮೇಶ್ ಕಿಡಿಕಾರಿದ್ದಾರೆ.
ಅಂಕಿ-ಅಂಶಗಳ ಸಮೇತ ಎನ್.ಆರ್. ರಮೇಶ್ ವಾದ:
ನಗರದ ನಿರ್ವಹಣೆಗೆ ಬೇಕಿರುವ ಕನಿಷ್ಠ ವೆಚ್ಚಗಳ ಪಟ್ಟಿಯನ್ನು ಅವರು ಈ ಕೆಳಗಿನಂತೆ ಬಿಡುಗಡೆ ಮಾಡಿದ್ದಾರೆ:

ವೇತನ ಮತ್ತು ಪಿಂಚಣಿ: ಪ್ರಸ್ತುತ ₹1,200 ಕೋಟಿ ವ್ಯಯವಾಗುತ್ತಿದ್ದು, ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕವಾದರೆ ವರ್ಷಕ್ಕೆ ₹3,000 ಕೋಟಿ ಬೇಕು.
ತ್ಯಾಜ್ಯ ವಿಲೇವಾರಿ: ಪ್ರತಿ ವರ್ಷ ಸುಮಾರು ₹700 ಕೋಟಿ.
ಪೌರಕಾರ್ಮಿಕರ ವೇತನ: ವರ್ಷಕ್ಕೆ ₹450 ಕೋಟಿ.
ಮೂಲಸೌಕರ್ಯ ನಿರ್ವಹಣೆ: ರಸ್ತೆ, ಚರಂಡಿ, ಬೀದಿ ದೀಪ, ಕೆರೆ ಮತ್ತು ಉದ್ಯಾನವನಗಳ ನಿರ್ವಹಣೆಗೆ ಕನಿಷ್ಠ ₹10,000 ಕೋಟಿಗೂ ಅಧಿಕ ಅನುದಾನದ ಅವಶ್ಯಕತೆಯಿದೆ.
ಬೆಂಗಳೂರಿನಿಂದ ₹1.70 ಲಕ್ಷ ಕೋಟಿ ಆದಾಯ, ಸಿಗುತ್ತಿರುವುದು ಎಷ್ಟು?:
“ಕಳೆದ ಆರ್ಥಿಕ ವರ್ಷದಲ್ಲಿ ಬೆಂಗಳೂರಿನಿಂದ ಅಬಕಾರಿ, ಜಿಎಸ್ಟಿ, ಇಂಧನ ಮತ್ತು ರಸ್ತೆ ತೆರಿಗೆ ರೂಪದಲ್ಲಿ ಒಟ್ಟು ₹1,70,000 ಕೋಟಿ ಆದಾಯ ರಾಜ್ಯ ಸರ್ಕಾರಕ್ಕೆ ಹರಿದುಬಂದಿದೆ. ಆದರೆ ಸರ್ಕಾರ ಮರಳಿ ನೀಡುತ್ತಿರುವುದು ಕೇವಲ ₹7,000 ಕೋಟಿ ಮಾತ್ರ. ಇದು ನಗರದ ಜನತೆಗೆ ಮಾಡುತ್ತಿರುವ ಅನ್ಯಾಯ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮರುಪರಿಶೀಲನೆಗೆ ಆಗ್ರಹ:
ಬೆಂಗಳೂರು ನಗರವು ಮುಂದಿನ ಆರು ತಿಂಗಳಲ್ಲಿ ಆರ್ಥಿಕವಾಗಿ ‘ದಿವಾಳಿ’ಯಾಗುವುದನ್ನು ತಪ್ಪಿಸಲು ತಕ್ಷಣವೇ ₹16,000 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು. ಈ ಸಂಬಂಧ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ನಗರದ ಜನತೆಯ ಪರವಾಗಿ ಅವರು ಒತ್ತಾಯಿಸಿದ್ದಾರೆ.























