ಬೆಂಗಳೂರು, ಜೂ.04 www.bengaluruwire.com: ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರದ ಕಿರು ಸಚಿವ ಸಂಪುಟದಲ್ಲಿ ಸಚಿವರಾಗಿ ಪದಗ್ರಹಣ ಮಾಡಿದವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಗುರುವಾರ (ಜೂನ್ 04, 2026) ಅಧಿಕೃತವಾಗಿ ಖಾತೆಗಳನ್ನು ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ.
ಈ ಖಾತೆ ಹಂಚಿಕೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನದ ಹೊಗೆಯಾಡಲು ಕಾರಣವಾಗಿದೆ.
ರಾಮಲಿಂಗಾರೆಡ್ಡಿಗೆ ಕೈತಪ್ಪಿದ ನಗರಾಭಿವೃದ್ಧಿ, ರಾಜೀನಾಮೆ ಬೆದರಿಕೆ
ಬೆಂಗಳೂರು ಉಸ್ತುವಾರಿಗಾಗಿ ಕೊನೆಗೂ ಪಟ್ಟು ಹಿಡಿದಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಸ್ಥಾನ ಕೈತಪ್ಪಿದೆ. ಅಧಿಸೂಚನೆಯ ಪ್ರಕಾರ, ಅವರಿಗೆ ಭಾರಿ ಮತ್ತು ಮಧ್ಯಮ ಜಲಸಂಪನ್ಮೂಲ ಇಲಾಖೆಯ (Major & Medium Irrigation) ಜವಾಬ್ದಾರಿಯನ್ನು ನೀಡಲಾಗಿದೆ. ತಮಗೆ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆ ಕೈತಪ್ಪಿದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಅವರು ಈಗಾಗಲೇ ಆಪ್ತರ ಬಳಿ ಪ್ರಕಟಿಸಿದ್ದು, ಸರ್ಕಾರದ ಮುಂದಿನ ನಡೆಯನ್ನು ಕಾದು ನೋಡಬೇಕಿದೆ.

ಕೃಷ್ಣಭೈರೇಗೌಡ ಹೆಗಲಿಗೆ ಬಿದ್ದ ‘ಗ್ರೇಟರ್ ಬೆಂಗಳೂರು’
ರಾಮಲಿಂಗಾರೆಡ್ಡಿ ಅವರ ವಿರೋಧದ ನಡುವೆಯೂ, ಬೆಂಗಳೂರಿನ ಐದು ಹೊಸ ನಗರ ಪಾಲಿಕೆಗಳು (ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಮತ್ತು ಕೇಂದ್ರ), ಬೆಂಗಳೂರು ಜಲಮಂಡಳಿ (BWSSB), ಹಾಗೂ ಬಿಎಂಆರ್ ಸಿಎಲ್ (BMRCL) ಸೇರಿದಂತೆ ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ’ಯ ಬೃಹತ್ ಮತ್ತು ಪ್ರತಿಷ್ಠಿತ ಹೊಣೆಯನ್ನು ಸಚಿವ ಕೃಷ್ಣಭೈರೇಗೌಡರ ಹೆಗಲಿಗೆ ನೀಡಲಾಗಿದೆ. ಇದು ಗ್ರೇಟರ್ ಬೆಂಗಳೂರು ರಚನೆ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಮಹತ್ವದ ಬದಲಾವಣೆಯಾಗಿದೆ.
ಸಂಪುಟದ ಇತರೆ ಪ್ರಮುಖ ಖಾತೆಗಳ ಹಂಚಿಕೆ ವಿವರ:
ಡಿ.ಕೆ.ಶಿವಕುಮಾರ್ (ಮುಖ್ಯಮಂತ್ರಿ): ಹಣಕಾಸು, ಸಚಿವ ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (DPAR), ಗುಪ್ತಚರ ಹಾಗೂ ಹಂಚಿಕೆಯಾಗದ ಇತರ ಎಲ್ಲಾ ಖಾತೆಗಳು.
ಡಾ. ಜಿ. ಪರಮೇಶ್ವರ (ಉಪ ಮುಖ್ಯಮಂತ್ರಿ): ಕಂದಾಯ ಮತ್ತು ಕ್ರೀಡಾ ಇಲಾಖೆ.
ಪ್ರಿಯಾಂಕ್ ಖರ್ಗೆ: ಗೃಹ (ಗುಪ್ತಚರ ವಿಭಾಗ ಹೊರತುಪಡಿಸಿ), ಐಟಿ-ಬಿಟಿ, ಇ-ಆಡಳಿತ.
ಡಾ. ಯತೀಂದ್ರ ಸಿದ್ದರಾಮಯ್ಯ: ನಗರಾಭಿವೃದ್ಧಿ ಇಲಾಖೆ (BDA, BMRDA, ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಗಳನ್ನು ಹೊರತುಪಡಿಸಿ).
ಕೆ.ಜೆ.ಜಾರ್ಜ್: ಇಂಧನ, ಪ್ರವಾಸೋದ್ಯಮ.
ಸತೀಶ್ ಜಾರಕಿಹೊಳಿ: ಲೋಕೋಪಯೋಗಿ (Public Works).
ಒಟ್ಟಾರೆಯಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲಾಟದಲ್ಲಿ ಕೃಷ್ಣಭೈರೇಗೌಡ ಮೇಲುಗೈ ಸಾಧಿಸಿದ್ದು, ಜಲಸಂಪನ್ಮೂಲ ಖಾತೆಗೆ ತೃಪ್ತರಾಗದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಮುಂದಿನ ರಾಜಕೀಯ ತೀರ್ಮಾನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.















