ಬೆಂಗಳೂರು, ಏ.25 www.bengaluruwire.com: ಸಿಲಿಕಾನ್ ಸಿಟಿಯ ಸರ್ವತೋಮುಖ ಅಭಿವೃದ್ಧಿ ಹಾಗೂ ನಾಗರಿಕರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮಹತ್ವದ ಹೆಜ್ಜೆ ಇಟ್ಟಿದೆ.
ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ನಗರದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ‘ತಜ್ಞರ ಸಲಹಾ ಸಮಿತಿ’ಯನ್ನು ರಚಿಸಲು ನಿರ್ಧರಿಸಲಾಗಿದೆ.
ಪಾಲಿಕೆಯ ಆಯವ್ಯಯದಲ್ಲಿ ಘೋಷಿಸಿದಂತೆ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಈ ಸಮಿತಿಯು ರಸ್ತೆ, ಸಂಚಾರ, ತ್ಯಾಜ್ಯ ನಿರ್ವಹಣೆ ಮತ್ತು ದತ್ತಾಂಶ ಆಧಾರಿತ ಯೋಜನೆಗಳ ಕುರಿತು ಪಾಲಿಕೆಗೆ ಮಾರ್ಗದರ್ಶನ ನೀಡಲಿದೆ ಎಂದರು.
ತಜ್ಞರು ನೀಡಿದ ಪ್ರಮುಖ ಪರಿಹಾರೋಪಾಯಗಳು:

ವ್ಯವಸ್ಥಿತ ಸಂವಹನ: ನಗರ ನಿರ್ವಹಣೆಗೆ ದಕ್ಷ ಸಂವಹನ ವ್ಯವಸ್ಥೆ ಮತ್ತು ರಚನಾತ್ಮಕ ಕಾರ್ಯವಿಧಾನ ರೂಪಿಸುವುದು.
ಸಮಗ್ರ ದತ್ತಾಂಶ (Data): ರಸ್ತೆ, ಕೆರೆ, ಉದ್ಯಾನವನ ಹಾಗೂ ಒಳಚರಂಡಿಗಳ ಸಂಪೂರ್ಣ ಡಿಜಿಟಲ್ ದತ್ತಾಂಶ ಸಿದ್ಧಪಡಿಸುವುದು.
ತ್ಯಾಜ್ಯ ನಿರ್ವಹಣೆ: ದಿನಕ್ಕೆ 2-3 ಬಾರಿ ಕಸ ಸಂಗ್ರಹಣೆ, ‘ಕಸ ಕಿಯೋಸ್ಕ್’ ಸ್ಥಾಪನೆ ಮತ್ತು ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಸ್ವಂತ ಸಂಸ್ಕರಣಾ ಘಟಕ ಕಡ್ಡಾಯಗೊಳಿಸುವುದು.
ಮಾನವ ಸಂಪನ್ಮೂಲ: ಪಾಲಿಕೆಯಲ್ಲಿ ಅಗತ್ಯವಿರುವ ಸಿಬ್ಬಂದಿ ನೇಮಕ ಮತ್ತು ಆಂತರಿಕ ಅಧ್ಯಯನಕ್ಕೆ ಒತ್ತು ನೀಡುವುದು.
ಯುವಶಕ್ತಿ ಹಾಗೂ ಕಾರ್ಪೊರೇಟ್ ಸಹಯೋಗಕ್ಕೆ ಮುಂದು:
ಸಭೆಯಲ್ಲಿ ಮಾತನಾಡಿದ ಆಯುಕ್ತ ಕೆ.ಎನ್. ರಮೇಶ್, “ನಗರ ವಿನ್ಯಾಸ ಮತ್ತು ಆರೋಗ್ಯ ಸೇವೆಗಳ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಅವಕಾಶ ನೀಡಲಾಗುವುದು. ಬೋಷ್ (BOSCH) ಮತ್ತು ಆರ್.ವಿ. ಸಂಸ್ಥೆಗಳಂತಹ ಪ್ರತಿಷ್ಠಿತ ಸಂಸ್ಥೆಗಳ ಸಿಎಸ್ಆರ್ (CSR) ನೆರವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸಮಾಲೋಚನಾ ಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ತಜ್ಞ ಪಾರ್ಥಸಾರಥಿ, ನಗರ ವಿನ್ಯಾಸ ತಜ್ಞ ಅಶ್ವಿನ್ ಮಹೇಶ್, ತ್ಯಾಜ್ಯ ನಿರ್ವಹಣಾ ತಜ್ಞೆ ಪದ್ಮಶ್ರೀ, ಎಚ್ಎಸ್ಆರ್ ಲೇಔಟ್ ನಾಗರಿಕ ವೇದಿಕೆಯ ಡಾ. ಶಾಂತಿ ಮತ್ತು ವಾಸ್ತುಶಿಲ್ಪ ತಜ್ಞ ಪ್ರಸನ್ನ ರಾವ್ ಅವರು ಭಾಗವಹಿಸಿ ಅಮೂಲ್ಯ ಸಲಹೆಗಳನ್ನು ನೀಡಿದರು. ಹೆಚ್ಚುವರಿ ಆಯುಕ್ತ ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರ ಬಸವರಾಜ ಕಬಾಡೆ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





















