ಬೆಂಗಳೂರು, ಏ.17 www.bengaluruwire.com: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದ ದಿಕ್ಸೂಚಿಯಾಗಿರುವ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಈಗ ಯಶಸ್ವಿ 40 ವರ್ಷಗಳನ್ನು ಪೂರೈಸಿದೆ.
ಈ ಸಾರ್ಥಕ ಪಯಣದ ಸ್ಮರಣಾರ್ಥವಾಗಿ 2026ರ ಏಪ್ರಿಲ್ 18ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಲೋಕಾಯುಕ್ತದ ಈ ಐತಿಹಾಸಿಕ ಸಂಭ್ರಮಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಅವರು ಚಾಲನೆ ನೀಡಲಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಕರ್ನಾಟಕದ ಲೋಕಾಯುಕ್ತ ಬಿ.ಎಸ್. ಪಾಟೀಲ್ ಹಾಗೂ ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರ ಉಪಸ್ಥಿತಿಯಲ್ಲಿ ಈ ಸಮಾರಂಭ ವೈಭವದಿಂದ ಜರುಗಲಿದೆ.
ಹೊಸ ಪೋರ್ಟಲ್ ಮತ್ತು ಡಿಜಿಟಲ್ ಪಯಣಕ್ಕೆ ಮುನ್ನುಡಿ:ಇದೇ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧದ ಸಮರಕ್ಕೆ ಡಿಜಿಟಲ್ ವೇಗ ನೀಡುವ ನಿಟ್ಟಿನಲ್ಲಿ ಹೊಸ ಪೋರ್ಟಲ್ ಒಂದಕ್ಕೆ ಚಾಲನೆ ದೊರೆಯಲಿದೆ. ಚುನಾಯಿತ ಪ್ರತಿನಿಧಿಗಳ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಪಾರದರ್ಶಕವಾಗಿ ದಾಖಲಿಸಲು ರೂಪಿಸಲಾಗಿರುವ ನೂತನ ಪೋರ್ಟಲ್ ಹಾಗೂ ಆನ್ಲೈನ್ ತನಿಖಾ ಮಾಡ್ಯೂಲ್ ಅನ್ನು ಸಿಜೆಐ ಸೂರ್ಯ ಕಾಂತ್ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಲೋಕಾಯುಕ್ತದ ವಿಶೇಷ ನಿಯತಕಾಲಿಕೆಯನ್ನು ಸಹ ಇದೇ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುವುದು. ಅಲ್ಲದೆ, ಸಂಸ್ಥೆಯನ್ನು ಕಟ್ಟಿದ ಹಿರಿಯ ಮಾಜಿ ಲೋಕಾಯುಕ್ತರು ಹಾಗೂ ಉಪಲೋಕಾಯುಕ್ತರನ್ನು ಗೌರವಿಸಿ ಸನ್ಮಾನಿಸಲಾಗುವುದು.
ವಿಚಾರಗೋಷ್ಠಿ ಮತ್ತು ಜನಜಾಗೃತಿ:ಸಭಾ ಕಾರ್ಯಕ್ರಮದ ಬಳಿಕ ಭ್ರಷ್ಟಾಚಾರ ತಡೆಗಟ್ಟುವಿಕೆ ಮತ್ತು ಆಡಳಿತ ಸುಧಾರಣೆಯ ಕುರಿತು ಗಹನವಾದ ವಿಚಾರಗೋಷ್ಠಿಗಳು ನಡೆಯಲಿವೆ. ನಿವೃತ್ತ ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ್ ಅವರು ‘ಭ್ರಷ್ಟಾಚಾರ ಮತ್ತು ದುರಾಡಳಿತ ವಿರುದ್ಧ ಹೋರಾಟ’ದ ಬಗ್ಗೆ, ಕೆ.ಎನ್. ಫಣೀಂದ್ರ ಅವರು ‘ಲೋಕಾಯುಕ್ತ ಕಾಯ್ದೆಯಡಿ ಕುಂದುಕೊರತೆಗಳ ಪರಿಹಾರ’ದ ಬಗ್ಗೆ ಹಾಗೂ ಬಿ. ವೀರಪ್ಪ ಅವರು ‘ಭ್ರಷ್ಟಾಚಾರ ತಡೆಗಟ್ಟುವುದು ಹೇಗೆ?’ ಎಂಬ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
ನಾಲ್ಕು ದಶಕಗಳ ಅವಿರತ ಸೇವೆ:ಕಳೆದ 40 ವರ್ಷಗಳಲ್ಲಿ ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕ ಸೇವೆಯಲ್ಲಿನ ಸ್ವಜನಪಕ್ಷಪಾತ, ಆಡಳಿತ ದುರುಪಯೋಗ ಮತ್ತು ಲಂಚಗುಳಿತನದ ವಿರುದ್ಧ ದಿಟ್ಟವಾಗಿ ಹೋರಾಡುತ್ತಾ ಬಂದಿದೆ. ಸವಾಲುಗಳು ಎದುರಾದರೂ ಸ್ಥಿತಪ್ರಜ್ಞವಾಗಿ ಜನಸಾಮಾನ್ಯರ ಪರ ನಿಂತಿರುವ ಈ ಸಂಸ್ಥೆಯು, ಧನಾತ್ಮಕ ಚಿಂತನೆ ಮತ್ತು ಪರಿಶ್ರಮದಿಂದ ಭ್ರಷ್ಟಾಚಾರ ಹತ್ತಿಕ್ಕಬಹುದು ಎಂಬ ನಂಬಿಕೆಯನ್ನು ಜನರಲ್ಲಿ ಬಿತ್ತಿದೆ. ಆಮಿಷಗಳಿಗೆ ಒಳಗಾಗದ ಪ್ರಾಮಾಣಿಕ ಅಧಿಕಾರಿಗಳು ಮತ್ತು ಪ್ರಜೆಗಳ ಸಹಕಾರದಿಂದ ಮಾತ್ರ ನ್ಯಾಯವನ್ನು ಉಳಿಸಲು ಸಾಧ್ಯ ಎಂಬ ಎಚ್ಚರಿಕೆಯನ್ನು ಸಂಸ್ಥೆಯು ಈ ಸಂದರ್ಭದಲ್ಲಿ ನೀಡಿದೆ.























