ಬೆಂಗಳೂರು, ಮಾ.25 www.bengaluruwire.com: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಇಂಧನ ಸರಬರಾಜಿನಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಮುಂಗಡ ಹಣ ಪಾವತಿಸಿದರೂ ಪೆಟ್ರೋಲ್ ಮತ್ತು ಡೀಸೆಲ್ ಲೋಡ್ಗಳನ್ನು ನೀಡಲು ತೈಲ ಕಂಪನಿಗಳು (OMC) ವಿಳಂಬ ಮಾಡುತ್ತಿವೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಈ ಕುರಿತು ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ (AKFPT) ರಾಜ್ಯದ ಎಲ್ಲಾ ಜಿಲ್ಲಾ ಸಂಘಗಳಿಗೆ ಎಚ್ಚರಿಕೆ ನೀಡಿದ್ದು, ತಕ್ಷಣವೇ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವಂತೆ ಸೂಚಿಸಿದೆ.
ಏನಿದು ಸಮಸ್ಯೆ?:
ವಿಶ್ವಾಸಾರ್ಹ ಮೂಲಗಳ ಪ್ರಕಾರ, ತೈಲ ಕಂಪನಿಗಳು ತಮ್ಮ ಅಧಿಕಾರಿಗಳಿಗೆ ನಗರ ಮತ್ತು ಗ್ರಾಮೀಣ ಭಾಗದ ಸರಬರಾಜು ಸ್ಥಿತಿಗತಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿವೆ. ಆದರೆ, ವಾಸ್ತವದಲ್ಲಿ ಗ್ರಾಮೀಣ ಭಾಗದ ಡೀಲರ್ಗಳು ಮುಂಗಡವಾಗಿ ಹಣ ಪಾವತಿಸಿದ್ದರೂ ಅವರಿಗೆ ಬರಬೇಕಾದ ಇಂಧನದ ಲೋಡ್ಗಳು ಸಕಾಲಕ್ಕೆ ತಲುಪುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ಬಂಕ್ಗಳು ಖಾಲಿಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ಪ್ಯಾನಿಕ್ ಬೈಯಿಂಗ್ ಭೀತಿ:
“ಒಂದೆಡೆ ಪೂರೈಕೆ ಇಲ್ಲದೆ ಬಂಕ್ಗಳು ಬಂದ್ ಆಗುವ ಭೀತಿ ಎದುರಾದರೆ, ಮತ್ತೊಂದೆಡೆ ಇಂಧನ ಸಿಗುವುದಿಲ್ಲ ಎಂಬ ಆತಂಕದಲ್ಲಿ ಗ್ರಾಹಕರು ಮುಗಿಬಿದ್ದು ಖರೀದಿಸುವ (Panic Buying) ಸಾಧ್ಯತೆ ಇದೆ. ಇದು ಕಾನೂನು ಸುವ್ಯವಸ್ಥೆಗೂ ಧಕ್ಕೆ ತರಬಹುದು,” ಎಂದು ಎಕೆಎಫ್ ಪಿಟಿ ಎಚ್ಚರಿಸಿದೆ. ಕೋವಿಡ್ ಸಮಯದಲ್ಲಿ BPCL ಮತ್ತು HPCL ಕಂಪನಿಗಳು ಇದೇ ರೀತಿ ರೇಷನಿಂಗ್ ಮಾಡಿದ್ದನ್ನು ಒಕ್ಕೂಟ ಸ್ಮರಿಸಿದೆ.
ಎಕೆಎಫ್ ಪಿಟಿ ಯ ಪ್ರಮುಖ ಬೇಡಿಕೆಗಳು:
ತಕ್ಷಣದ ಸರಬರಾಜು: ಮುಂಗಡ ಹಣ ಪಾವತಿಸಿದ ಕೂಡಲೇ ಯಾವುದೇ ವಿಳಂಬವಿಲ್ಲದೆ ಇಂಧನ ಲೋಡ್ ಬಿಡುಗಡೆ ಮಾಡಬೇಕು.
ರಜೆ ದಿನಗಳಲ್ಲೂ ಪೂರೈಕೆ: ಬ್ಯಾಂಕ್ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಸರಬರಾಜು ಸ್ಥಗಿತಗೊಳಿಸಬಾರದು.
ಸಡಿಲಿಕೆ: ರಜೆ ದಿನಗಳಲ್ಲಿ ಇಂಧನ ಪಡೆದ ಹಣವನ್ನು ಮುಂದಿನ ಕೆಲಸದ ದಿನದಂದು ಪಾವತಿಸಲು ಅವಕಾಶ ನೀಡಬೇಕು.
ಸರ್ಕಾರದ ಮಟ್ಟದಲ್ಲಿ ಹೋರಾಟ:
ಈಗಾಗಲೇ ಎಕೆಎಫ್ ಪಿಟಿ ತಂಡವು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಭೇಟಿಗೆ ಸಮಯ ಕೇಳಿದೆ. ಈ ಹಿಂದೆ ಇಂತಹ ಪರಿಸ್ಥಿತಿ ಬಂದಾಗ ಸರ್ಕಾರ ಮಧ್ಯಪ್ರವೇಶಿಸಿ ಟರ್ಮಿನಲ್ಗಳಲ್ಲಿ ತಪಾಸಣೆ ನಡೆಸಿ ಸಮಸ್ಯೆ ಬಗೆಹರಿಸಿತ್ತು. ಈಗಲೂ ಅದೇ ರೀತಿಯ ತುರ್ತು ಕ್ರಮದ ಅಗತ್ಯವಿದೆ ಎಂದು ಒಕ್ಕೂಟ ತಿಳಿಸಿದೆ.
ಜಿಲ್ಲಾ ಸಂಘಗಳಿಗೆ ಕರೆ: “ಗ್ರಾಮೀಣ ಭಾಗದ ಜಿಲ್ಲಾ ಸಂಘಗಳು ವಿಳಂಬ ಮಾಡದೆ ತಕ್ಷಣವೇ ಆಯಾ ಜಿಲ್ಲಾಧಿಕಾರಿಗಳನ್ನು (DC) ಭೇಟಿ ಮಾಡಿ ವಸ್ತುಸ್ಥಿತಿಯನ್ನು ವಿವರಿಸಬೇಕು. ಗ್ರಾಮೀಣ ಜನತೆ ಮತ್ತು ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ,” ಎಂದು ಎಕೆಎಫ್ ಪಿಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.























