ಬೆಂಗಳೂರು, (www.bengaluruwire.com) : ಬೆಂಗಳೂರಿನ ಸ್ಥಳೀಯಾಡಳಿತದ ಶಕ್ತಿಪೀಠ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಆಡಳಿತ ಮತ್ತು ಅಧಿಕಾರ ಚಲಾವಣೆ ಎಂಬುದು ಈಗ ಹಳಿತಪ್ಪಿದ ರೈಲಿನಂತಾಗಿದೆ.
ಬಿಬಿಎಂಪಿ ಕಾಯ್ದೆ-2020 ಅನ್ನು 21 ಡಿಸೆಂಬರ್ 2020ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಯಿತು. ನೂತನ ಕಾಯ್ದೆಯು 1 ಏಪ್ರಿಲ್ 2021ರಿಂದ ಜಾರಿಗೆ ಬಂದಿದೆ. ಹೀಗೆ ಕಾಯ್ದೆ ಜಾರಿಯಾಗಿ ನಾಲ್ಕು ತಿಂಗಳು ಕಳೆದರೂ ಮುಖ್ಯ ಆಯುಕ್ತರ ಹುದ್ದೆ ಬಿಟ್ಟು ಉಳಿದೆಲ್ಲ ಹುದ್ದೆಗಳಿಗೆ ಚೀಫ್ ಕಮಿಷನರ್ ಗೌರವ್ ಗುಪ್ತಾ ಇನ್ನೂ ಅಧಿಕಾರ ಪ್ರತ್ಯಾಯೋಜನೆ (Delegation of Power) ಮಾಡಿಲ್ಲ. ಮಾರ್ಚ್ ತಿಂಗಳಿನಲ್ಲಿ ನಗರಾಭಿವೃದ್ಧಿ ಇಲಾಖೆಯು, ಈಗಾಗಲೇ ಪಾಲಿಕೆಯ ವಿವಿಧ ಇಲಾಖೆಗಳಲ್ಲಿ ವಿಶೇಷ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಆಯುಕ್ತರನ್ನು ಪಾಲಿಕೆ 8 ವಲಯಗಳಿಗೆ ವಲಯ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು.
ಆದರೆ ನೂತನ ಕಾಯ್ದೆ ಏ.1 ರಿಂದ ಜಾರಿಗೆ ಬಂದಿದ್ದು ನಾಲ್ಕು ತಿಂಗಳು ಕಳೆದು ಐದನೇ ತಿಂಗಳು ಆರಂಭವಾದರೂ ವಲಯ ಆಯುಕ್ತರಿಗಾಗಲಿ, ಜಂಟಿ ಆಯುಕ್ತರಿಗಾಗಲಿ ಅಧಿಕಾರ ಹಂಚಿಕೆ ಮಾಡಿಲ್ಲ. ಕೇವಲ ಇವರಷ್ಟೆ ಅಲ್ಲ ಪಾಲಿಕೆಯ ವಿವಿಧ 8 ವಲಯಗಳಲ್ಲಿನ ಆರೋಗ್ಯ, ಕಂದಾಯ, ನಗರ ಯೋಜನೆ, ಅರಣ್ಯ, ತೋಟಗಾರಿಕೆ, ಘನತ್ಯಾಜ್ಯ ವಿಲೇವಾರಿ, ಕೇಂದ್ರ ಯೋಜನೆ, ರಸ್ತೆ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಅಧಿಕಾರಿಗಳು ನೂತನ ಕಾಯ್ದೆಯಂತೆ ಕಾರ್ಯನಿರ್ವಹಿಸಲು ಈತನಕ ಸಾಧ್ಯವಾಗಿಲ್ಲ.
ಕೆಳಹಂತದ ಅಧಿಕಾರಿಗಳಿಗೆ ಅಧಿಕಾರ ಹಂಚಿಕೆ :
ಬಿಬಿಎಂಪಿ ಕಾಯ್ದೆಯ ಸೆಕ್ಷನ್ 64 ರಿಂದ 74 ರ ತನಕ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ವಲಯ ಆಯುಕ್ತರ ಅಧಿಕಾರದ ಕುರಿತಂತೆ ತಿಳಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಮುಖ್ಯ ಆಯುಕ್ತರು ಸೆಕ್ಷನ್ 66ರ ಪ್ರಕಾರ ಪಾಲಿಕೆಯಲ್ಲಿನ ಸಾಮಾನ್ಯ ಅಧಿಕಾರ, ಕರ್ತವ್ಯ ಹಾಗೂ ಪ್ರಕಾರ್ಯದಲ್ಲಿ ಯಾವುದನ್ನಾದರೂ ಪಾಲಿಕೆಯ ಯಾರೇ ತನ್ನ ಅಧೀನ ಅಧಿಕಾರಿಗೆ ವಹಿಕೊಡಬಹುದೆಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿದ್ದರೂ ಈತನಕವೂ ಮುಖ್ಯ ಆಯುಕ್ತರು ತನ್ನ ಕೈಕೆಕಳಗಿನ ಅಧಿಕಾರಿಗಳಿಗೆ ಅಧಿಕಾರವನ್ನು ವಹಿಸಿಕೊಟ್ಟಿಲ್ಲ. ಹೀಗಾಗಿ ಪಾಲಿಕೆಯಲ್ಲಿ ಎಲ್ಲ ವಿಷಯಗಳಿಗೆ ಕೇಂದ್ರ ಕಚೇರಿಯತ್ತ ಅಲೆಯುವಂತಾಗಿದೆ. ಇನ್ನೊಂದೆಡೆ ಪಾಲಿಕೆ ಮುಖ್ಯ ಆಯುಕ್ತರು ಕೋವಿಡ್ ನಿಯಂತ್ರಣ, ರಾಜ್ಯ ಸರ್ಕಾರದ ವಿವಿಧ ಸಭೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಕಾರಣದಿಂದ ದೈನಂದಿನ ಕಚೇರಿಯ ಫೈಲ್ ಗಳನ್ನು ನಿರ್ವಹಣೆ ಮಾಡಲಾಗದಷ್ಟು ಆಡಳಿತದಲ್ಲಿ ಚುರುಕುತನ ಕಡಿಮೆಯಾಗಿದೆ.

ಇನ್ನು ಬಿಬಿಎಂಪಿ ಕಾಯ್ದೆ-2020ರ ಸೆಕ್ಷನ್ 74(ಡಿ) ನಂತೆ ತಮ್ಮ ಸಾಮಾನ್ಯ ಕರ್ತವ್ಯ ಹಾಗೂ ಪ್ರಕಾರ್ಯಗಳನ್ನು ತನ್ನ ಯಾವುದೇ ಅಧೀನ ಪಾಲಿಕೆ ಅಧಿಕಾರಿಗೆ ವಲಯ ಆಯುಕ್ತರು ಅಧಿಕಾರ ಪ್ರತ್ಯಾಯೋಜಿಸಬಹುದು.
“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020 ಜಾರಿಗೆ ಬಂದು ನಾಲ್ಕು ತಿಂಗಳ ಮೇಲಾಗಿದೆ. ಏಪ್ರಿಲ್ 1ರಿಂದ ಕಾಯ್ದೆ ಜಾರಿಗೆ ಬಂದ ಒಂದು ವಾರದ ಒಳಗೆ ನೂತನ ಕಾಯ್ದೆಯಂತೆ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಮುಖ್ಯ ಆಯುಕ್ತರು ಹಾಗೂ ವಲಯ ಆಯುಕ್ತರು ಅಧಿಕಾರವನ್ನು ಹಂಚಿಕೆ ಮಾಡಬೇಕಿತ್ತು. ಆದ್ರೆ ಈತನಕ ಆ ಕಾರ್ಯವು ಆಗದ ಕಾರಣ ಪಾಲಿಕೆ ಅಧಿಕಾರಿಗಳು ಹಾಗೂ ಆ ಮೂಲಕ ಸಾರ್ವಜನಿಕರಿಗೆ ಪರೋಕ್ಷವಾಗಿ ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಬಿಬಿಎಂಪಿಯ ಅಭಿವೃದ್ಧಿಯ ಕೆಲಸಗಳು ನಿಂತ ನೀರಾಗಿ ಅಭಿವೃದ್ಧಿಯು ಮರೀಚಿಕೆಯಾಗಿದೆ.”
– ಮಂಜುನಾಥರೆಡ್ಡಿ, ಬಿಬಿಎಂಪಿ ಮಾಜಿ ಮೇಯರ್
ಅಧಿಕಾರ ಪ್ರತ್ಯಾಯೋಜನೆಯ ಸರ್ಕಸ್ :
ಆದರೂ ಸಹ ಮುಖ್ಯ ಆಯುಕ್ತರಾಗಲಿ, 8 ವಲಯ ಆಯುಕ್ತರಾಗಲಿ ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಇನ್ನೂ ಅಧಿಕಾರ ಹಂಚಿಕೆ ಮಾಡಿಲ್ಲ. ಈ ಕುರಿತಂತೆ ಪ್ರತಿ ಇಲಾಖೆಯಲ್ಲಿನ ಅಧಿಕಾರಿಗಳಿಗೆ ಯಾವ ಹಂತದಲ್ಲಿ, ಯಾವ ಮಟ್ಟದಲ್ಲಿ ಅಧಿಕಾರ ವ್ಯಾಪ್ತಿ ನೀಡಬಹುದು ಎಂಬ ಕುರಿತು ಬಿಬಿಎಂಪಿ ಆಡಳಿತ ಶಾಖೆಯಿಂದ ಕ್ರಮ ಕೈಗೊಳ್ಳಲು ಏಪ್ರಿಲ್ ನಿಂದ ಸರ್ಕಸ್ ಮಾಡಲಾಗುತ್ತಿದೆ. ಡೆಲಿಗೇಷನ್ ಆಫ್ ಪವರ್ ಕುರಿತಂತೆ ಪಾಲಿಕೆಯ ಕಾನೂನು ವಿಭಾಗಕ್ಕೆ ಅಭಿಪ್ರಾಯ ನೀಡುವಂತೆ ಆಡಳಿತ ವಿಭಾಗದಿಂದ ಕಡತವನ್ನು ಕಳುಹಿಸಿದರೆ, ಕಾನೂನು ವಿಭಾಗ “ಪ್ರಸ್ತಾಪಿತ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ ಕರಡು ಪ್ರತಿಯನ್ನು ತಯಾರಿಸಲಾಗಿದ್ದು, ಸದರಿ ಪ್ರತಿಯ ಪುಟ ಸಂಖ್ಯೆ : 20ರಲ್ಲಿ ಕೆಎಂಸಿ ಕಾಯ್ದೆ 1976ರ ಅಡಿಯಲ್ಲಿ ಅಧಿಕಾರಿಗಳನ್ನು ನೀಡುತ್ತಿರುವುದು ಕಂಡುಬಂದಿರುತ್ತದೆ. ಕೆ.ಎಂ.ಸಿ. ಕಾಯ್ದೆ 1976ರ ಕಾಯ್ದೆಯು ಪಾಲಿಕೆಗೆ ಅನ್ವಯವಾಗದೇ ಇದ್ದು, ಪ್ರಸ್ತುತವಾಗಿ ಬೃಹತ್ ಬೆಂಗಳೂರು ಪಾಲಿಕೆಯ ಅಧಿನಿಯಮ 2020ರ ಕಾಯ್ದೆಯು ಜಾರಿಯಲ್ಲಿರುವುದರಿಂದ, ಸದರಿ ಕಾಯ್ದೆಯಂತೆ ಅಧಿಕಾರ ಪ್ರತ್ಯಾಯೋಜನೆ ನೀಡಬೇಕಾಗಿರುತ್ತದೆ.”
“ಉಳಿದಂತೆ ಎಲ್ಲಾ ವಿಷಯಗಳು ಸಂಬಂಧಪಟ್ಟ ವಲಯ ಆಯುಕ್ತರು/ ಜಂಟಿ ಆಯುಕ್ತರು/ ಉಪ ಆಯುಕ್ತರು ಮತ್ತು ಎಲ್ಲಾ ಇಲಾಖೆಯ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ, ಕರಡು ಪ್ರತಿಯನ್ನು ಸಿದ್ಧಪಡಿಸಬೇಕಾಗಿರುತ್ತದೆ. ಕಾನೂನು ವಿಷಯಗಳಿಗೆ ಮತ್ತು ಕಚೇರಿ ಕಾರ್ಯಗಳಿಗೆ ಮಾತ್ರ ಕಾನೂನು ಇಲಾಖೆಯಿಂದ ಸಮ್ಮತಿ ನೀಡಬಹುದಾಗಿರುತ್ತದೆ. ಇತರೇ ವಿಷಯ/ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಪಟ್ಟವರಿಂದಲೇ ಮಾಹಿತಿ/ಅಭಿಪ್ರಾಯ ಪಡೆಯಬಹುದಾಗಿರುತ್ತದೆ.” ಅಂತ ಹೇಳಿ ಅತಿಮುಖ್ಯವಾದ ಕಡತಕ್ಕೆ ತಮ್ಮ ಕಾನೂನು ಅಭಿಪ್ರಾಯ ನೀಡದೆ ಲೀಗಲ್ ಸೆಕ್ಷೆನ್ ನವರು ಮತ್ತೆ ಆಡಳಿತ ಶಾಖೆಗೆ ಫೈಲನ್ನು ಸಾಗುಹಾಕಿದ್ದಾರೆ.

ಬಿಬಿಎಂಪಿ ಕಾನೂನು ಶಾಖೆ ಅಭಿಪ್ರಾಯ ನೀಡಿದ ದಾಖಲೆ
ಕಾನೂನು ವಿಭಾಗದ ಕಾರ್ಯವ್ಯಾಪ್ತಿ ಹೀಗಿದೆ :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020ರ ಸಕ್ಷೆನ್ 99ರಲ್ಲಿ “ಲೀಗಲ್ ಸೆಲ್” ಕಾರ್ಯವ್ಯಾಪ್ತಿಯಲ್ಲಿ ಸ್ಪಷ್ಟವಾಗಿ, ನೂತನ ಕಾಯ್ದೆಯ ಅನ್ವಯಿಸುವಿಕೆ, ನಿಯಮಾವಳಿ, ನಿಯಂತ್ರಣ ಹಾಗೂ ಬೈಲಾ ಹಾಗೂ ಪಾಲಿಕೆಗೆ ಸಂಬಂಧಿಸಿದ ಕಾನೂನು ವಿಷಯಗಳಲ್ಲಿ ಕಾನೂನು ವಿಭಾಗ ಕಾರ್ಯನಿರ್ವಹಿಸುವ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ.
“ವಲಯ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜನೆ ಮಾಡುವ ವಿಷಯ ಚರ್ಚೆಯ ಹಂತದಲ್ಲಿದೆ. ಖಂಡಿತವಾಗಿ ನೂತನ ಕಾಯ್ದೆ-2020 ಆಶಯದಂತೆ ಪಾಲಿಕೆಯು ಸೂಕ್ತ ಕ್ರಮ ಕೈಗೊಳ್ಳಲಿದೆ. ಯಾವಾಗ ಅಧಿಕಾರ ಪ್ರತ್ಯಾಯೋಜನೆ ಕಾರ್ಯವನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಸಮಯ ಮಿತಿ ನಿಗಧಿಪಡಿಸಲಾಗದು.”
– ಗೌರವ್ ಗುಪ್ತಾ, ಬಿಬಿಎಂಪಿ ಮುಖ್ಯ ಆಯುಕ್ತರು
ಈಡೇರದ ಆಡಳಿತ ವಿಕೇಂದ್ರಕರಣ ಆಶಯ :
ಆಡಳಿತ ವಿಕೇಂದ್ರಿಕರಣದ ಆಶಯದಂತೆ ರಚಿಸಲಾಗಿದ್ದ ಹೊಸ ಕಾಯ್ದೆಯ ಅನುಷ್ಠಾನ ಸಮರ್ಪಕವಾಗಿ ಅಸ್ಥಿತ್ವಕ್ಕೆ ಬಂದಿಲ್ಲ. ಇದರ ಪರಿಣಾಮದಿಂದಾಗಿ ಪಾಲಿಕೆ ಒಟ್ಟಾರೆ ದೈನಂದಿನ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅನಧಿಕೃತ ಕಟ್ಟಡವನ್ನು ಬಿಬಿಎಂಪಿ ಎಂಜಿನಿಯರ್ ಗಳು ತೆರವು ಮಾಡೋಕೆ ಅಧಿಕಾರ ಪ್ರತ್ಯಾಯೋಜನೆ ಮಾಡದ ಕಾರಣ ನಿರ್ಧಾರ ಕೈಗೊಳ್ಳಲು, ಸಹಿ ಹಾಕಲು ಹಿಂದೆ ಮುಂದೆ ನೋಡುವಂತಾಗಿದೆ. ಬಿಬಿಎಂಪಿ ಕಾಯ್ದೆ-2020ರಂತೆ ಕಾರ್ಯನಿರ್ವಹಿಸಲು ಇನ್ನೂ ಪಾಲಿಕೆಯಲ್ಲಿ ಅಧಿಕಾರ ಪ್ರತ್ಯೋಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ.
ಇನ್ನೊಂದೆಡೆ ಹೊಸ ಕಾಯ್ದೆಗೆ ಇನ್ನೂ ಕೂಡ ನಿಯಮಾವಳಿ ರೂಪಿಸಿಲ್ಲ. ಆದರೆ ನೂತನ ಬಿಬಿಎಂಪಿ ಕಾಯ್ದೆಯಲ್ಲಿ ಹೊಸ ನಿಯಮಾವಳಿ ರೂಪಿಸುವ ತನಕ ಬಿಬಿಎಂಪಿ ಆಕ್ಟ್ 2020ರ ಸೆಕ್ಷನ್ 375ರಲ್ಲಿ ತಿಳಿಸಿರುವಂತೆ ಕೆಎಂಸಿ ಕಾಯ್ದೆ 1975ರಲ್ಲಿನ ನಿಯಮಗಳು, ಹೊಸ ಕಾಯ್ದೆಯಲ್ಲಿನ ಅಂಶಗಳಿಗೆ ವ್ಯತಿರಿಕ್ತವಾಗದ ರೀತಿಯಲ್ಲಿದ್ದರೆ ಅಂತಹವುಗಳನ್ನು ನೂತನ ನಿಯಮಗಳನ್ನು ರೂಪಿಸಿ ಹಳೆಯ ಕೆಎಂಸಿ ಕಾಯ್ದೆ ರದ್ದುಪಡಿಸುವ ತನಕ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ. ಆದರೆ ಪ್ರಸ್ತುತದಲ್ಲಿ ಬಿಬಿಎಂಪಿ ಆಕ್ಟ್ ಗೆ ಕೆಲವೊಂದು ಅಂಶಗಳು ಕಾಯ್ದೆಯಲ್ಲಿದ್ದರೂ ಅದಿಕ್ಕೆ ವ್ಯತಿರಿಕ್ತವಾಗುವಂತೆ ಕೆಎಂಸಿ ಕಾಯ್ದೆ 1976 ನಿಯಮಾವಳಿಗಳ ಅಡಿಯಲ್ಲಿ ಅಧಿಕಾರ ಚಲಾಯಿಸಲಾಗುತ್ತಿದೆ. ಆ ಮೂಲಕ ನೂತನ ಕಾಯ್ದೆಗೆ ಬೆಲೆಯೇ ಇಲ್ಲದಂತಾಗಿದೆ.
ಉದಾಹರಣೆ- 1)
ಬಿಬಿಎಂಪಿ ಕಾಯ್ದೆಯ 16ನೇ ಅಧ್ಯಾಯದ ಸೆಕ್ಷನ್ 240 ಪ್ರಕಾರ ನಗರದಲ್ಲಿ ಕಟ್ಟಡ ನಕ್ಷೆ ಮಂಜೂರು ಮಾಡುವ ಅಧಿಕಾರ ಇರುವುದು ಆಯಾ ವಲಯದ ಜೋನ್ ಕಮಿಷನರ್ ಗೆ. ಅಥವಾ ಆಯಾ ಜೋನರ್ ಕಮಿಷನರ್ ನೇಮಿಸುವ ಅಧಿಕಾರಿ ಮಾತ್ರ ಕಟ್ಟಡ ನಕ್ಷೆ ಮಂಜೂರಾತಿ ನೀಡಬೇಕಾಗುತ್ತದೆ. ಆದರೆ ಪ್ರಸ್ತುತ ನಗರ ಯೋಜನೆ ವಿಭಾಗದಲ್ಲಿ ವಾರ್ಡ್ ಮಟ್ಟದಿಂದ ವಲಯ ಮಟ್ಟದ ತನಕ ಎಇಯಿಂದ ಸಹಾಯಕ ನಗರ ಯೋಜನಾ ಎಂಜಿಯನಿಯರ್ ತನಕ ಕಟ್ಟಡ ನಿರ್ಮಾಣ, ಹೆಚ್ಚುವರಿ ಕಟ್ಟಡ ನಿರ್ಮಾಣ ಮತ್ತಿತರ ಕಟ್ಟಡ ನಕ್ಷೆಗೆ ಸಂಬಂಧಿಸಿದಂತೆ ಅನುಮತಿ ನೀಡ್ತಿದ್ದಾರೆ ಹಾಗೂ ಕೇಂದ್ರ ಕಚೇರಿಯ ಟೌನ್ ಪ್ಲಾನಿಂಗ್ ಇಲಾಖೆಯಲ್ಲಿ ಉತ್ತರ ಮತ್ತು ದಕ್ಷಿಣ ವಿಭಾಗದ ಜಂಟಿ ನಿರ್ದೇಶಕರು ಪ್ಲಾನ್ ಸಾಂಕ್ಷನ್ ಗೆ ಅನುಮತಿ ನೀಡ್ತಿದ್ದಾರೆ. ಈಗಲೂ ಪ್ಲಾನ್ ಸಾಂಕ್ಷನ್ ಮಾಡ್ತಿದ್ದಾರೆ. ಆದರೆ ಇದು ನೂತನ ಬಿಬಿಎಂಪಿ ಕಾಯ್ದೆ-2020ರ ಪ್ರಕಾರ ಕಾಯ್ದೆಯ ಉಲ್ಲಂಘನೆಯಾಗಿರುತ್ತದೆ.
ಉದಾಹರಣೆ – 2)
ಕಂದಾಯ ಇಲಾಖೆಯಲ್ಲಿ ಈಗಾಗಲೇ 2016-17ರ ವಲಯ ವರ್ಗೀಕರಣ ವಿಚಾರದಲ್ಲಿ ಗೊಂದಲ ಏರ್ಪಟ್ಟು 78 ಸಾವಿರ ಜನರಿಗೆ ದಂಡದೊಂದಿಗೆ ಆಸ್ತಿತೆರಿಗೆ ಕಟ್ಟಲು ಪಾಲಿಕೆ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಕಂದಾಯ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜನೆಯನ್ನೇ ಮಾಡದಿದ್ದಾಗ ಅವರುಗಳು ಸಾರ್ವಜನಿಕರಿಗೆ ಅದು ಹೇಗೆ ನೋಟಿಸ್ ನೀಡಲು ಬರುತ್ತೆ? ಒಂದೊಮ್ಮೆ ಸಾರ್ವಜನಿಕರು ನೋಟಿಸ್ ಜಾರಿ ಮಾಡಿದ ಕಂದಾಯ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಿದರೆ ಬಿಬಿಎಂಪಿಗೆ ಸೋಲಾಗುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ಈತನಕವೂ ಬಿಬಿಎಂಪಿ ಮುಖ್ಯ ಆಯುಕ್ತರಾಗಲಿ, ವಲಯ ಆಯುಕ್ತರಾಗಲಿ ಅಧಿಕಾರವನ್ನು ಪ್ರತ್ಯಾಯೋಜಿಸಿಲ್ಲ.
ಉದಾಹರಣೆ- 3)
ಬಿಬಿಎಂಪಿ ಕಾಯ್ದೆ-2020ರ ಅಧ್ಯಾಯ 12ರಲ್ಲಿನ ಗುತ್ತಿಗೆ ವಿಷಯಕ್ಕೆ ಸಂಬಂಧಿಸಿದಂತೆ ವಲಯ ಮಟ್ಟದಲ್ಲಿ 5 ಕೋಟಿ ರೂಪಾಯಿ ವರೆಗಿನ ಟೆಂಡರ್ ಕರೆಯುವ ಮತ್ತು ಟೆಂಡರ್ ಗುತ್ತಿಗೆ ನೀಡುವ ಅಧಿಕಾರ ವಲಯ ಆಯುಕ್ತರಿಗೆ ಪ್ರದತ್ತವಾಗಿರುತ್ತದೆ. ಆದರೆ ಈಗಲೂ ಬಿಬಿಎಂಪಿ ಕೇಂದ್ರ ಕಚೇರಿಯಿಂದಲೇ 8 ವಲಯಗಳಲ್ಲಿನ ನೂರಾರು ಟೆಂಡರ್ ಗಳ ಫೈಲ್ ಗಳು ಒಪ್ಪಿಗೆಗಾಗಿ ಕಳುಹಿಸಲಾಗುತ್ತಿದೆ. ಎಲ್ಲಾ ಕೆಲಸಗಳಿಗೆ ಮುಖ್ಯ ಆಯುಕ್ತರ ಪರಿಶೀಲನೆ ಹಾಗೂ ಸಹಿ ಅಗತ್ಯವಾಗಿರುವ ಹಿನ್ನಲೆಯಲ್ಲಿ ನೂರಾರು ಫೈಲ್ ಗಳು ಸೂಕ್ತ ಸಮಯದಲ್ಲಿ ವಿಲೇವಾರಿಯಾಗುತ್ತಿಲ್ಲ. ಇನ್ನೊಂದೆಡೆ ಈ ಎಲ್ಲಾ ಕಾರಣದಿಂದಾಗಿ ಮುಖ್ಯ ಆಯುಕ್ತರಿಗೆ ಕಾರ್ಯದೊತ್ತಡ ಹೆಚ್ಚಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಅಧಿಕಾರ ಪ್ರತ್ಯಾಯೋಜನೆ ಆಗದಿದ್ದರೆ ಏನಾಗಲಿದೆ? ಏನಾಗುತ್ತೆ?
- ಕೆ.ಎಂ.ಸಿ.ಕಾಯ್ದೆ 1976 ಅನುಸರಿಸಬೇಕಾ ಅಥವಾ ಬಿಬಿಎಂಪಿ ಕಾಯ್ದೆ-2020 ಅನುಸರಿಸಬೇಕಾ ಎಂಬ ಬಗ್ಗೆ ಅಧಿಕಾರಿ ಮತ್ತು ನೌಕರರಲ್ಲಿ ಗೊಂದಲ ನಿರ್ಮಾಣವಾಗಿದೆ
- ಸುಗಮ ಆಡಳಿತ ನಿರ್ವಹಣೆಯಲ್ಲಿ ತೊಂದರೆ
- ಯಾವ ಅಧಿಕಾರಿ, ನೌಕರ ಏನು ಮಾಡಬೇಕೆಂಬ ಬಗ್ಗೆ ಸ್ಪಷ್ಟತೆಯಿಲ್ಲ
- ಇದರಿಂದಾಗಿ ಪಾಲಿಕೆ ಅಧಿಕಾರಿ, ನೌಕರರು ಸೂಕ್ತ ರೀತಿಯಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗುವ ಸಂಭವ
- ಒಟ್ಟಾರೆ ಇದರ ಪರಿಣಾಮ ಅಧಿಕಾರಿಗಳು, ನೌಕರರು ತಮ್ಮ ಜವಾಬ್ದಾರಿಯಿಂದ ನುಳುಚಿಕೊಳ್ಳುತ್ತಾರೆ
- ಮೇಲಿನ ಎಲ್ಲಾ ಕಾರಣಗಳಿಂದ ಅಂತಿಮವಾಗಿ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಿ, ತೊಂದರೆಗೆ ಸಿಲುಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ
ಸೆಪ್ಟೆಂಬರ್ 2020ರಿಂದ ಬಿಬಿಎಂಪಿಯಲ್ಲಿ ಪಾಲಿಕೆ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದೆ. ಆದರೆ ನೂತನ ಪಾಲಿಕೆ ಕಾಯ್ದೆ-2020 ಜಾರಿಗೆ ಬಂದಿದ್ದರೂ, ಹೊಸ ಕಾಯ್ದೆಯಂತೆ 12 ಸ್ಥಾತಿ ಸಮಿತಿಗಳ ಅಧಿಕಾರ ಹೊಂದಿರುವ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಕೌನ್ಸಿಲ್ ನಿರ್ಣಯ ಕೈಗೊಳ್ಳುತ್ತಿದ್ದಾರೆಯೇ ಅಥವಾ ಕೆ.ಎಂ.ಸಿ.ಕಾಯ್ದೆ 1976ರ ನಿಯಮಾವಳಿಯಂತೆ ನಿರ್ಣಯ ಕೈಗೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಒಟ್ಟಾರೆ ನೂತನ ಕಾಯ್ದೆಗೆ ನಿಯಮಾವಳಿ ರೂಪಿಸುವ, ಅಧಿಕಾರ ಪ್ರತ್ಯಾಯೋಜನೆ ಮಾಡುವ ಹೀಗೆ ಸಾಕಷ್ಟು ಬಾದ್ಯತೆಗಳನ್ನು ಸರ್ಕಾರ ಮತ್ತು ಬಿಬಿಎಂಪಿ ಪೂರೈಸಬೇಕಿದೆ. ಇಲ್ಲವಾದಲ್ಲಿ ಹೊಸ ಕಾಯ್ದೆ ಜಾರಿಗೆ ತಂದರೂ ಪ್ರಯೋಜನವಾಗದಂತಾಗುತ್ತದೆ ಎಂದು ನಾಗರೀಕರು ಅಭಿಪ್ರಾಯಪಟ್ಟಿದ್ದಾರೆ.



















