ಬೆಂಗಳೂರು, ಆ.08 www.bengaluruwire.com: ಸ್ವಚ್ಛ ಹಾಗೂ ಸುರಕ್ಷಿತ ಬೆಂಗಳೂರು ನಿರ್ಮಾಣದ ನಿಟ್ಟಿನಲ್ಲಿ ಜಿಬಿಎ (GBA) ಜೊತೆ ಕೈಜೋಡಿಸಿರುವ ಬೆಸ್ಕಾಂ, ನಗರದ ಜನತೆಗೆ ಸುರಕ್ಷಿತ ನಡಿಗೆಯ ಗ್ಯಾರಂಟಿ ನೀಡಲು ಮುಂದಾಗಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಅವರ ಮುಂದಾಳತ್ವದಲ್ಲಿ ಶನಿವಾರ ಬೃಹತ್ ಕಾರ್ಯಾಚರಣೆ ನಡೆಸಲಾಗಿದ್ದು, ನಗರದ ಹಲವು ಭಾಗಗಳ ಪಾದಚಾರಿ ಮಾರ್ಗಗಳಲ್ಲಿದ್ದ ಸ್ಥಗಿತಗೊಂಡ ಹಾಗೂ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು ಸೇರಿದಂತೆ ವಿವಿಧ ಪರಿಕರಗಳನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.
’ಕ್ಲೀನ್ ಅಪ್ ಬೆಂಗಳೂರು’ ಅಭಿಯಾನದ ಹಿನ್ನೆಲೆ:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಣೆ ಮಾಡಿದ್ದ ‘ಕ್ಲೀನ್ ಅಪ್ ಬೆಂಗಳೂರು’ ತಿಂಗಳ ಅಭಿಯಾನದ ಭಾಗವಾಗಿ ಈ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 1ರಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿ, ನಿರಂತರವಾಗಿ ಮುಂದುವರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಶನಿವಾರ ಬೆಳಗ್ಗೆ 7 ಗಂಟೆಯಿಂದಲೇ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಎಲ್ಲೆಲ್ಲಿ ನಡೆಯಿತು ಕಾರ್ಯಾಚರಣೆ?:
ಯಲಹಂಕದಲ್ಲಿ ಬೆಳಗ್ಗೆ 7 ಗಂಟೆಗೆ ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ ಅವರು ಆಂದೋಲನಕ್ಕೆ ಚಾಲನೆ ನೀಡಿದರು. ಬಳಿಕ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ಪ್ರಮುಖ ಪ್ರದೇಶಗಳಾದ:
ಯಲಹಂಕ, ಸಹಕಾರ ನಗರ, ದಾಸರಹಳ್ಳಿ ಹಾಗೂ ಹೆಬ್ಬಾಳ, ಎಂಎಸ್ಆರ್ ನಗರ, ಹೆಚ್ಬಿಆರ್ ಬಡಾವಣೆ
ಕೃಷ್ಣರಾಜಪುರ, ಚನ್ನಸಂದ್ರ ಮುಖ್ಯರಸ್ತೆ, ವೈಟ್ಫೀಲ್ಡ್, ಬೆಳ್ಳಂದೂರು, ಹೆಚ್ಎಸ್ಆರ್ ಬಡಾವಣೆ, ಜೆಪಿ ನಗರ ಹಾಗೂ ಶಿವಾಜಿ ನಗರ, ಈ ಎಲ್ಲಾ ಪ್ರದೇಶಗಳ ಪಾದಚಾರಿ ಮಾರ್ಗಗಳಲ್ಲಿರುವ ಅನುಪಯುಕ್ತ ವಿದ್ಯುತ್ ಪರಿವರ್ತಕಗಳನ್ನು ಮತ್ತು ಇತರೆ ಪರಿಕರಗಳನ್ನು ತೆರವುಗೊಳಿಸಿದರು.
ಜಾಗೃತಿ ಅಭಿಯಾನ: ಸ್ವಚ್ಛತಾ ಕಾರ್ಯದ ಬಳಿಕ ಆರ್ಎಂಯುಗಳ ಬಳಿ ಕಸ ಎಸೆಯದಂತೆ, ಮೂತ್ರ ವಿಸರ್ಜನೆ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಪತ್ರಗಳನ್ನು ಅಂಟಿಸಲಾಯಿತು. ಜೊತೆಗೆ, ಜಿಒಎಸ್ (GOS) ರಾಡ್ಗಳನ್ನು ನೆಲಮಟ್ಟದಿಂದ ಏಳು ಅಡಿ ಎತ್ತರಿಸುವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಯಿತು.
ಬೆಸ್ಕಾಂ ಕೈಗೊಂಡ ಪ್ರಮುಖ ಕಾಮಗಾರಿಗಳ ಅಂಕಿ-ಅಂಶ (ಆಗಸ್ಟ್ 1 – 8ರ ವರೆಗೆ):
ಅಭಿಯಾನದ ಸಾಧನೆಗಳ ಕುರಿತು ಮಾತನಾಡಿದ ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ, ಕಳೆದ ಒಂದು ವಾರದಲ್ಲಿ ಬೃಹತ್ ಮಟ್ಟದ ಸ್ವಚ್ಛತಾ ಕಾರ್ಯ ನಡೆದಿದೆ ಎಂದು ವಿವರಿಸಿದರು:
ಬೆಸ್ಕಾಮ್ನ ಸ್ವಚ್ಛತಾ ಬೆಂಗಳೂರು ಅಭಿಯಾನವು 356 ಕಂಬಗಳು, 10 ಟ್ರಾನ್ಸ್ಫಾರ್ಮರ್ ಕೇಂದ್ರಗಳು, 199 ಇತರ ಮೂಲಸೌಕರ್ಯ ಕಾರ್ಯಗಳು ಮತ್ತು 323 ಜಿಎಸ್ ಆಪರೇಟಿಂಗ್ ರಾಡ್ಗಳ ಮಾರ್ಪಾಡುಗಳ ಕೆಲಸವನ್ನು ಕೈಗೆತ್ತಿಕೊಂಡಿತು. ಈ ಅಭಿಯಾನವು 1,730 ಡಿಟಿಸಿ ಯಾರ್ಡ್ಗಳು ಮತ್ತು 411 ಆರ್ಎಂಯು ಯಾರ್ಡ್ಗಳು ಮತ್ತು 383 ಸ್ಪನ್ ಪೋಲ್/ಡಿಪಿ ಯಾರ್ಡ್ಗಳ ಶುಚಿಗೊಳಿಸುವಿಕೆಯನ್ನು ಒಳಗೊಂಡಿತ್ತು, ಜೊತೆಗೆ 101 ಫೀಡರ್ ಪಿಲ್ಲರ್ ಬಾಕ್ಸ್ ರಿವೈರಿಂಗ್ ಮತ್ತು ಯಾರ್ಡ್-ಕ್ಲೀನಿಂಗ್ ಕೆಲಸಗಳು ಮತ್ತು 39 ಕಂಬ ರಿವೈರಿಂಗ್ ಮತ್ತು ಯಾರ್ಡ್-ಕ್ಲೀನಿಂಗ್ ಕೆಲಸಗಳನ್ನು ಸಹ ಒಳಗೊಂಡಿತ್ತು.
ಬೆಸ್ಕಾಂ ಎಂಡಿ ಏನಂತಾರೆ?:
”ಬೆಂಗಳೂರು ನಗರವನ್ನು ಸ್ವಚ್ವವಾಗಿಡುವ ಕಾರ್ಯದಲ್ಲಿ ಬೆಸ್ಕಾಂ ಸದಾ ಮುಂಚೂಣಿಯಲ್ಲಿರುತ್ತದೆ. ಇಂಧನ ಸಚಿವರ ಸೂಚನೆ ಮೇರೆಗೆ, ತಾಂತ್ರಿಕ ಪರಿಣಿತರ ಮಾರ್ಗದರ್ಶನದಲ್ಲಿ ಅನುಪಯುಕ್ತ ವಿದ್ಯುತ್ ಸಲಕರಣೆಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುತ್ತಿದ್ದೇವೆ. ಭಾನುವಾರವೂ ಈ ಕಾರ್ಯಾಚರಣೆ ಮುಂದುವರಿಯಲಿದೆ,” ಎಂದು ಡಾ.ಎನ್.ಶಿವಶಂಕರ ತಿಳಿಸಿದ್ದಾರೆ.
ಇಂಧನ ಸಚಿವರ ಭರವಸೆ:
”ಬೆಸ್ಕಾಂ ಕೇವಲ ಜನತೆಗೆ ವಿದ್ಯುತ್ ಒದಗಿಸುವುದಷ್ಟೇ ಅಲ್ಲ, ಅವರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತದೆ. ಪಾದಚಾರಿಗಳ ಸುರಕ್ಷಿತ ಓಡಾಟಕ್ಕೆ ಸೂಕ್ತ ಮಾರ್ಗ ಅಗತ್ಯ. ಈ ತಿಂಗಳ ಅಂತ್ಯದೊಳಗೆ ನಾವು ಜನತೆಗೆ ಸುರಕ್ಷಿತ ಪಾದಚಾರಿ ಮಾರ್ಗ ಹಾಗೂ ಕಸಮುಕ್ತ ವಾತಾವರಣವನ್ನು ಖಂಡಿತವಾಗಿ ನಿರ್ಮಿಸಿಕೊಡಲಿದ್ದೇವೆ.”
– ಕೆ.ಜೆ.ಜಾರ್ಜ್, ಇಂಧನ ಮತ್ತು ಪ್ರವಾಸೋದ್ಯಮ ಸಚಿವ




















