ಬೆಂಗಳೂರು, ಜು.02 www.bengaluruwire.com: ಬೆಂಗಳೂರು ದಕ್ಷಿಣ ತಾಲೂಕಿನ ಮಾಗಡಿ ರಸ್ತೆ ಸಮೀಪದ ಮಾದಾಪಟ್ಟಣ ಬಳಿ ಇರುವ ‘ಕಾವೇರಿ ಕ್ರಷರ್’ ಕಲ್ಲು ಕ್ವಾರಿಯಲ್ಲಿ ಬೃಹತ್ ಬಂಡೆ ಕುಸಿದು 7 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಈ ದುರಂತದಲ್ಲಿ ಐವರು ಗಾಯಗೊಂಡಿದ್ದಾರೆ.
ಈ ಭೀಕರ ದುರಂತದ ಬಳಿಕ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಅಧಿಕೃತ ವರದಿ ಬಂದ ಬಳಿಕ ಕ್ರಮ: ಸಿಎಂ ಡಿ.ಕೆ. ಶಿವಕುಮಾರ್:
ವಿಧಾನಸೌಧದ ಆವರಣದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಕ್ವಾರಿ ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. “ಮಾಗಡಿ ರಸ್ತೆ ಬಳಿಯ ಎರಡು ಕ್ವಾರಿಯಲ್ಲಿ ಕುಸಿತವಾಗಿ 7 ಮಂದಿ ಮೃತಪಟ್ಟಿರುವ ಪ್ರಕರಣದ ಬಗ್ಗೆ ಮೊದಲು ಅಧಿಕೃತ ಮಾಹಿತಿ ಪಡೆಯಲಾಗುವುದು. ವರದಿ ಬಂದ ನಂತರ ಅಗತ್ಯ ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದರು.


“ಪೊಲೀಸ್ ಅಧಿಕಾರಿಗಳು, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈಗಾಗಲೇ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೇಲ್ನೋಟಕ್ಕೆ ಇದು ಸ್ಫೋಟದಿಂದ ಸಂಭವಿಸಿಲ್ಲ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈ ಕ್ವಾರಿಯನ್ನು ಕಾನೂನುಬದ್ಧವಾಗಿ ನಡೆಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬ ವರದಿಯನ್ನು ತರಿಸಿಕೊಳ್ಳಲಾಗುವುದು. ಕ್ವಾರಿ ನಡೆಸುವಾಗ ಅದರದೇ ಆದ ನಿಯಮಗಳಿದ್ದು, ಅವುಗಳ ಪಾಲನೆಯಾಗುತ್ತಿವೆಯೇ ಇಲ್ಲವೇ ಎಂಬುದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.
ಚಿರತೆ ಸಾವಿನ ಪ್ರಕರಣ ಮತ್ತು ಶಾಸಕರ ಆರೋಪ:
ಕಳೆದ ಬಾರಿ ಇದೇ ಕ್ವಾರಿ ಪ್ರದೇಶದಲ್ಲಿ ಸ್ಫೋಟದ ವೇಳೆ ಚಿರತೆಯೊಂದು ಸತ್ತಿತ್ತು. ಆದರೆ, ಈ ಹಿಂದೆ ಯಾವುದೇ ಸೂಕ್ತ ತನಿಖೆ ಮಾಡದೇ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು ಎಂಬ ಸ್ಥಳೀಯ ಶಾಸಕರ ಆರೋಪದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಈ ಬಗ್ಗೆ ಶಾಸಕರು ನಮಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಧಿಕೃತ ವರದಿ ತರಿಸಿಕೊಂಡು ನಂತರ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ” ಎಂದರು.
ಪರಿಹಾರ ಘೋಷಣೆ ಬಗ್ಗೆ ಸಿಎಂ ಪ್ರತಿಕ್ರಿಯೆ:
ಮೃತರ ಕುಟುಂಬಗಳಿಗೆ ಪರಿಹಾರದ ವಿಚಾರವಾಗಿ ಮಾತನಾಡಿದ ಸಿಎಂ, “ಮೊದಲು ಎಷ್ಟು ಜನ ಸತ್ತಿದ್ದಾರೆ ಎಂಬ ನಿಖರ ಮಾಹಿತಿ ಬರಲಿ, ಆನಂತರ ಪರಿಹಾರದ ಬಗ್ಗೆ ತೀರ್ಮಾನ ಮಾಡೋಣ. ತರಾತುರಿಯಲ್ಲಿ ಪರಿಹಾರ ಘೋಷಿಸಿದ ಮಾತ್ರಕ್ಕೆ ಸತ್ತವರು ಮರಳಿ ಬರುವುದಿಲ್ಲ. ಇದಕ್ಕೆಲ್ಲಾ ಅದರದೇ ಆದ ಸರ್ಕಾರಿ ಪ್ರಕ್ರಿಯೆಗಳಿವೆ. ಖಂಡಿತವಾಗಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಜೊತೆಗೆ ಇಂತಹ ದುರ್ಘಟನೆಗಳು ಭವಿಷ್ಯದಲ್ಲಿ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಸರ್ಕಾರದ ಮೊದಲ ಆದ್ಯತೆ” ಎಂದು ತಿಳಿಸಿದರು.
ಸಚಿವ ಕೃಷ್ಣಭೈರೇಗೌಡ ಅವರಿಂದ ಸ್ಥಳ ಹಾಗೂ ಆಸ್ಪತ್ರೆ ಭೇಟಿ:
ದುರಂತ ಸಂಭವಿಸಿದ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಗುರುವಾರ ಸಂಜೆ ಮಾದಾಪಟ್ಟಣದ ಕಲ್ಲು ಕ್ವಾರಿ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿನ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಅವಘಡದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ತರುವಾಯ, ಮೈಸೂರು ರಸ್ತೆ ಬಳಿಯ ರಾಜರಾಜೇಶ್ವರಿ ಆಸ್ಪತ್ರೆಗೆ ತೆರಳಿದ ಅವರು, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.






















