ಬೆಂಗಳೂರು ಮೇ.06 www.bengaluruwire.com: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಗ್ರೂಪ್ ‘ಸಿ’ ಮತ್ತು ‘ಡಿ’ ವರ್ಗದ ನೌಕರರಿಗಾಗಿ ಮೀಸಲಾಗಿದ್ದ ಬಡಾವಣೆಯಲ್ಲಿ, ಖಾಸಗಿ ವ್ಯಕ್ತಿಯೊಬ್ಬರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನಿವೇಶನ ಪಡೆದಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಪ್ರಕರಣದ ಹಿನ್ನೆಲೆ:
ಬಿಡಿಎ ನೌಕರರ ಕ್ಷೇಮಾಭಿವೃದ್ಧಿ ಸಂಘವು ದೊಡ್ಡಕಲ್ಲಸಂದ್ರ ಮತ್ತು ಲಿಂಗಧೀರನಹಳ್ಳಿಯಲ್ಲಿ ಪ್ರಾಧಿಕಾರದ ಕೆಳಹಂತದ ನೌಕರರಿಗಾಗಿ ವಿಶೇಷ ಬಡಾವಣೆ ನಿರ್ಮಿಸಿತ್ತು. ಇಲ್ಲಿನ ಎಂ.ಕೆ.ಎಸ್. 2ನೇ ಹಂತದ ಬಡಾವಣೆಯಲ್ಲಿರುವ ನಿವೇಶನ ಸಂಖ್ಯೆ 04 (9.14X12.19 ಮೀ) ಅನ್ನು ಶ್ರೀ ಎಚ್. ನಾಗರಾಜ್ ಬಿನ್ ಹೊನ್ನಪ್ಪ ಎಂಬುವವರು ತಾವು ಬಿಡಿಎ ನೌಕರರೆಂದು ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ನೋಂದಾಯಿಸಿಕೊಂಡಿದ್ದರು.

ಜಾಗೃತ ದಳದ ಕಾರ್ಯಾಚರಣೆ:
ವಾಸ್ತವವಾಗಿ ಖಾಸಗಿ ವ್ಯಕ್ತಿಯಾಗಿದ್ದ ನಾಗರಾಜ್, 2009ರಲ್ಲಿ ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ನೀಡಿ ವಂಚಿಸುವ ಉದ್ದೇಶದಿಂದ ದಾಖಲೆಗಳನ್ನು ಸೃಷ್ಟಿಸಿದ್ದರು. ಈ ಅಕ್ರಮದ ಬಗ್ಗೆ ಮಾಹಿತಿ ಪಡೆದ ಬಿಡಿಎ ವಿಶೇಷ ಕಾರ್ಯಪಡೆ ಮತ್ತು ಜಾಗೃತ ದಳದ ಆರಕ್ಷಕ ಉಪಾಧೀಕ್ಷಕ ಹನುಮಂತರಾಯ ಅವರು ಸಮಗ್ರ ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ನಾಗರಾಜ್ ಅವರು ನೌಕರರಲ್ಲ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.
ಕಾನೂನು ಕ್ರಮ:
ಮೇ 05 ರಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 0047/2026 ರಂತೆ ಐಪಿಸಿ ಸೆಕ್ಷನ್ 419 (ಆಳುಮಾರಾಟ), 420 (ವಂಚನೆ), 465, 468 (ನಕಲಿ ದಾಖಲೆ ಸೃಷ್ಟಿ), 409 ಹಾಗೂ 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಇತರೆ ಅಧಿಕಾರಿಗಳು ಹಾಗೂ ವ್ಯಕ್ತಿಗಳ ಬಗ್ಗೆಯೂ ತನಿಖೆ ಮುಂದುವರಿದಿದೆ.





















