ಬೆಂಗಳೂರು, ಏ.29 www.bengaluruwire.com: ಸಾಮಾನ್ಯ ಜನರಿಂದ ಆಸ್ತಿ ತೆರಿಗೆ ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಪಾಲಿಕೆಗಳು, ನೂರಾರು ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳ ವಿರುದ್ಧ ಮೌನ ವಹಿಸಿರುವುದಕ್ಕೆ ಈಗ ಬ್ರೇಕ್ ಬೀಳುವ ಲಕ್ಷಣಗಳು ಕಾಣುತ್ತಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿರುವ ಸರ್ಕಾರಿ ಕಟ್ಟಡಗಳು ಸುಮಾರು ₹472.66 ಕೋಟಿಗೂ ಅಧಿಕ ಸೇವಾ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದು, ಇದನ್ನು ವಸೂಲಿ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ಇಲಾಖೆಯ ವಿಶೇಷ ಆಯುಕ್ತರು ಈಗ ಐದು ನಗರ ಪಾಲಿಕೆಗಳ ಆಯುಕ್ತರಿಗೆ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.
ಎನ್.ಆರ್. ರಮೇಶ್ ದೂರಿನ ಹಿನ್ನೆಲೆ:
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು ದಿನಾಂಕ 31-03-2026 ರಂದು ಸಲ್ಲಿಸಿದ್ದ ದೂರಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿರುವ ವಿಧಾನಸೌಧ, ವಿಕಾಸಸೌಧ, ರಾಜಭವನದಂತಹ ಪ್ರಮುಖ ಸರ್ಕಾರಿ ಕಟ್ಟಡಗಳು ವರ್ಷಗಳಿಂದ ಸೇವಾ ತೆರಿಗೆ ಪಾವತಿಸದೆ ಪಾಲಿಕೆಗೆ ವಂಚಿಸುತ್ತಿವೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದರು. “ಬಡವರ ಆಸ್ತಿ ಹರಾಜು ಮಾಡುವ ಮೊದಲು, 550 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಈ ಸರ್ಕಾರಿ ಕಟ್ಟಡಗಳಿಗೆ ಬೀಗ ಜಡಿಯಿರಿ” ಎಂದು ಅವರು ದಾಖಲೆ ಸಮೇತ ಆಗ್ರಹಿಸಿದ್ದರು.

ಆಯುಕ್ತರ ಆದೇಶದಲ್ಲಿ ಏನಿದೆ?:
ವಿಶೇಷ ಆಯುಕ್ತರು (ಕಂದಾಯ) ತಮ್ಮ ಆದೇಶದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ:
ಡಿಸಿಬಿ ವಹಿ ನಿರ್ವಹಣೆ: ಪ್ರತಿ ಉಪವಿಭಾಗದ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಟ್ಟಡಗಳು, ಖಾಲಿ ನಿವೇಶನಗಳು ಮತ್ತು ಪಿಎಸ್ಯುಗಳ ವಿವರಗಳನ್ನು ಸಂಗ್ರಹಿಸಿ ಪ್ರತ್ಯೇಕ ‘ಬೇಡಿಕೆ, ವಸೂಲಾತಿ ಮತ್ತು ಬಾಕಿ’ (DCB) ವಹಿಯನ್ನು ನಿರ್ವಹಿಸಬೇಕು.
ನೋಟೀಸ್ ಜಾರಿ: ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸ್ವತ್ತುಗಳನ್ನು ತಕ್ಷಣ ಗುರುತಿಸಿ, ಬಾಕಿ ಪಾವತಿಸುವಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ನೋಟೀಸ್ ನೀಡಬೇಕು.
ಅರೆ ಸರ್ಕಾರಿ ಪತ್ರ: ಅತಿ ಹೆಚ್ಚು ಬಾಕಿ ಇರುವ ಇಲಾಖೆಗಳ ಮುಖ್ಯಸ್ಥರಿಗೆ ಆಯಾ ನಗರ ಪಾಲಿಕೆ ಆಯುಕ್ತರು ಅರೆ ಸರ್ಕಾರಿ ಪತ್ರಗಳನ್ನು ಬರೆದು ಅಥವಾ ನೇರವಾಗಿ ಭೇಟಿ ಮಾಡಿ ವಸೂಲಾತಿಗೆ ಕ್ರಮ ವಹಿಸಬೇಕು.
ಅಧಿಕಾರಿಗಳ ವಿರುದ್ಧ ಕ್ರಮ: ತೆರಿಗೆ ವಸೂಲಿ ಮಾಡುವಲ್ಲಿ ವಿಳಂಬ ಧೋರಣೆ ತೋರುವ ಅಥವಾ ನಿರ್ಲಕ್ಷ್ಯ ವಹಿಸುವ ಅಧಿಕಾರಿ ಮತ್ತು ನೌಕರರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಶಿಫಾರಸ್ಸು ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಈಗಾಗಲೇ 2025ರ ಆರ್ಥಿಕ ವರ್ಷದ ಅಂತ್ಯಕ್ಕೆ ₹472 ಕೋಟಿಗೂ ಹೆಚ್ಚು ಬಾಕಿ ಇದ್ದು, 2025-26ನೇ ಸಾಲಿನ ಮೊತ್ತವನ್ನೂ ಸೇರಿಸಿದರೆ ಇದು ಮತ್ತಷ್ಟು ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಬಿಎ ಈಗ ಕಂದಾಯ ಸೋರಿಕೆಯನ್ನು ತಡೆಗಟ್ಟಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿದಿದೆ.




















