ಬೆಂಗಳೂರು, ಏ.25 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಜನಗಣತಿ-2027 ಕಾರ್ಯಕ್ರಮಕ್ಕೆ ಸಿಬ್ಬಂದಿ ನಿಯೋಜನೆ ವಿಷಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಅದರ ವ್ಯಾಪ್ತಿಯ ಪಾಲಿಕೆ ವರ್ಸಸ್ ಸಚಿವಾಲಯ ಅಧಿಕಾರಿ ನೌಕರರ ಶೀತಲ ಸಮರಕ್ಕೆ ಕಾರಣವಾಗಿದೆ.
ಸಚಿವಾಲಯ ಸಿಬ್ಬಂದಿಗೆ ಜನಗಣತಿ ಕಾರ್ಯದ ಹೆಸರಿನಲ್ಲಿ ಜಿಬಿಎ ನಗರ ಪಾಲಿಕೆಗಳ ಅಧಿಕಾರಿಗಳಿಂದ ಕಿರುಕುಳವಾಗುತ್ತಿದ್ದು, ಅದು ಮುಂದವರೆದಲ್ಲಿ ರಾಜ್ಯ ಸರ್ಕಾರದ 43 ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಚಿವಾಲಯವನ್ನೇ ಸಂಪೂರ್ಣ ಬಂದ್ ಮಾಡುವುದಾಗಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಎಚ್ಚರಿಕೆ ನೀಡಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಏ.02 ರಂದು ಕರೆದಿದ್ದ ಸಭೆಯಲ್ಲಿ, ಸಚಿವಾಲಯದ ಕಾರ್ಯನಿರತ ಗ್ರೂಪ್-“ಬಿ” ಮತ್ತು “ಸಿ” ವೃಂದ ಬಲದ ಶೇ.50ರಷ್ಟು ಅಂದರೆ 495 ನಿಯೋಜಿತ ಅಧಿಕಾರಿ – ನೌಕರರನ್ನು ಜನಗಣತಿ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದರು.
ಆದರೆ ಸಿಎಸ್ ಸೂಚನೆಗೂ ಬೆಲೆ ಕೊಡದೆ ಜಿಬಿಎ ಹಾಗೂ ಅದರ ವ್ಯಾಪ್ತಿಯ ಐದು ನಗರ ಪಾಲಿಕೆ ಅಧಿಕಾರಿಗಳು ಸಚಿವಾಲಯದ ನಿಯೋಜನೆ ಹೊರತುಪಡಿಸಿ ಇತರ ಅಧಿಕಾರಿ ಸಿಬ್ಬಂದಿಗೂ ಜನಗಣತಿ ಕಾರ್ಯಕ್ಕೆ ಹಾಜರಾಗುವಂತೆ ನೋಟಿಸ್, ಎಫ್ ಐಆರ್ ದಾಖಲಿಸುವುದಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಚಿವಾಲಯ ಸಂಘ ಆರೋಪಿಸಿದೆ.

ಜಿಬಿಎ ಮುಖ್ಯ ಆಯುಕ್ತರಿಂದ ಏ.16ರಂದೇ ಪತ್ರ:

ಈಗಾಗಲೇ ಏ.16ರಂದು ಜಿಬಿಎ ಮುಖ್ಯ ಆಯುಕ್ತ ಎನ್.ಮಹೇಶ್ವರ ರಾವ್, ಎಲ್ಲಾ ಐದು ಪಾಲಿಕೆಗಳ ಆಯುಕ್ತರಿಗೆ ಜನಗಣತಿ-2027 ಕಾರ್ಯಕ್ಕೆ 495 ನೌಕರರನ್ನಷ್ಟೇ ಬಳಸಿಕೊಂಡು ಉಳಿದವರನ್ನು ಕೈಬಿಡುವಂತೆ (ಸಂಖ್ಯೆ:ಮು.ಆ/ಗ್ರೇಬೆಂಪ್ರಾ/ಪಿಆರ್/26/2026-27) ಪತ್ರ ಬರೆದು ತಿಳಿಸಿದ್ದಾರೆ. ಹೀಗಿದ್ದರೂ ಜಿಬಿಎ ಮುಖ್ಯ ಆಯುಕ್ತರ ಕೈಗೆಳಗಿನ ಕೆಲವು ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಸಚಿವಾಲಯದ ಗಣತಿಗೆ ನಿಯೋಜನೆಯಾಗದ ನೌಕರರಿಗೆ ವಿನಾ: ಕಾರಣ ಕರೆ ಮಾಡಿ, ವಾಟ್ಸಪ್ ಸಂದೇಶ ಕಳಿಸಿ ಜನಗಣತಿ ಕಾರ್ಯಕ್ಕೆ ಬರುವಂತೆ ಕಿರುಕುಳ ನೀಡುತ್ತಾ ಒತ್ತಡ ಹೇರುತ್ತಿದ್ದಾರೆ ಎಂಬ ಸಚಿವಾಲಯ ನೌಕರರ ಸಂಘವು ದೂರಿದೆ.

ಏ.17ರಂದು ಜಿಬಿಎ ಜನಗಣತಿ ನೋಡೆಲ್ ಅಧಿಕಾರಿ ಮೌದ್ಗಿಲ್ ಪತ್ರ:
ಈ ಮಧ್ಯೆ ಜಿಬಿಎ ಕಂದಾಯ, ಐಟಿ ವಿಭಾಗದ ವಿಶೇಷ ಆಯುಕ್ತ ಹಾಗೂ ಜನಗಣತಿ ನೋಡೆಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಜಿಬಿಎ ಮುಖ್ಯ ಆಯುಕ್ತರು ಪತ್ರ ಬರೆದ ಮರು ದಿನವೇ ಜನಗಣತಿ ವಿಚಾರವಾಗಿ ಎಲ್ಲಾ ಐದು ನಗರ ಪಾಲಿಕೆಗಳ ಆಯುಕ್ತರಿಗೆ ತಮ್ಮ ಕೈಬರಹದಲ್ಲೇ ಪತ್ರ ಬರೆದಿದ್ದಾರೆ. “ನೀವು ಪ್ರಧಾನ ಜನಗಣತಿ ಅಧಿಕಾರಿಯಾಗಿ, ಜನಗಣತಿ ಕಾಯ್ದೆ 1948ರ ಅಡಿಯಲ್ಲಿ ಜನಗಣತಿ ನಡೆಸಲು, ಸಿಬ್ಬಂದಿಯನ್ನು ನೇಮಿಸಲು ಮತ್ತು ಜನಗಣತಿಯ ಸುಗಮ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಶಾಸನಬದ್ಧ ಅಧಿಕಾರವನ್ನು ಹೊಂದಿರುತ್ತೀರಿ. ನಿಮ್ಮ ಈ ಶಾಸನಬದ್ಧ ಅಧಿಕಾರದಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಮತ್ತು ಜನಗಣತಿಯನ್ನು ನಡೆಸುವ ಸಂಪೂರ್ಣ ಜವಾಬ್ದಾರಿ ನಿಮ್ಮದಾಗಿರುತ್ತದೆ” ಎಂದು ಬರೆದು ತಿಳಿಸಿದ್ದಾರೆ.
ಇದಲ್ಲದೆ, “ಯಾವುದೇ ವ್ಯಕ್ತಿಯ ನೇಮಕಾತಿಯ ರದ್ದತಿ ಅಥವಾ ಬದಲಾವಣೆಯನ್ನು ನಿಮ್ಮ ಸಹಿಯಿಲ್ಲದೆ ಬೇರೆ ಯಾರೂ ಮಾಡುವಂತಿಲ್ಲ. ಅನಧಿಕೃತ ಗೈರುಹಾಜರಿಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಕ್ರಮ ಕೈಗೊಳ್ಳಿ.
ಮೂಲತಃ ನಗರ ಪಾಲಿಕೆಗೆ ನಿಯೋಜಿಸಲಾದ ಯಾವುದೇ ವ್ಯಕ್ತಿಯನ್ನು ತದನಂತರ ಬದಲಾಯಿಸಲು ಅಥವಾ ಮಾರ್ಪಡಿಸಲು ಸಾಧ್ಯವಿಲ್ಲ ಮತ್ತು ಮೂಲ ಆದೇಶವೇ ಜಾರಿಯಲ್ಲಿರುತ್ತದೆ” ಎಂದು ಪತ್ರದಲ್ಲಿ ಮುನೀಷ್ ಮುದ್ಗಿಲ್ ವಿವರಿಸಿದ್ದಾರೆ.
ಸಿಎಸ್, ಜಿಬಿಎ ಚೀಫ್ ಕಮಿಷನರ್ ನಿರ್ದೇಶನ ಓವರ್ ಟೇಕ್?:
ಇದನ್ನು ಗಮನಿಸಿದರೆ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಬಿಎ ಮುಖ್ಯ ಆಯುಕ್ತರ ಆದೇಶವನ್ನೇ ಓವರ್ ಟೇಕ್ ಮಾಡಿ, ಮುನಿಷ್ ಮೌದ್ಗಿಲ್ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯುವ ಮೂಲಕ, ಜನಗಣತಿ ಕಾರ್ಯದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದಂತಿದೆ.

ಜನಗಣತಿ ಕಾರ್ಯಕ್ಕೆ ಆಗಮಿಸುವಂತೆ ಸಚಿವಾಲಯದ (495 ಸಿಬ್ಬಂದಿ ಹೊರತುಪಡಿಸಿ) ಉಳಿದ ಸಿಬ್ಬಂದಿಗೆ ಹಲವು ಬಾರಿ ನೋಟಿಸ್, ಎಸ್ ಎಂಎಸ್, ಕರೆ, ವಾಟ್ಸಪ್ ಮೆಸೇಜ್ ಮಾಡಿಯೂ ಜನಗಣತಿ ಕಾರ್ಯಕ್ಕೆ ಬಾರದ ಉಳಿದ ಸಿಬ್ಬಂದಿಯನ್ನು ಕೆಲಸ ಮಾಡಿಸುವುದನ್ನು ಜಿಬಿಎ ಹಿರಿಯ ಅಧಿಕಾರಿಗಳು ಪ್ರತಿಷ್ಠೆ ವಿಷಯವಾಗಿ ಪರಿಗಣಿಸಿದಂತೆ ಕಾಣುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಕಾರ್ಯಾಂಗ ವ್ಯವಸ್ಥೆಯಲ್ಲಿ ಸಚಿವಾಲಯವು ಪ್ರಮುಖವಾಗಿ ನೀತಿ-ನಿಯಮ ನಿರೂಪಣೆ, ಅನುಷ್ಠಾನ ಮತ್ತು ಕ್ಷೇತ್ರ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವ ಮತ್ತು ನಿಯಂತ್ರಣ ಸಾಧಿಸುವ ಒಂದು ಪ್ರಮುಖ ಅಂಗವಾಗಿದೆ. ಹೀಗಾಗಿ ಅಂಗವಿಕಲರು/ಗರ್ಭಿಣಿಯರು/ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ದೀರ್ಘಾವದಿ ರಜೆಯಲ್ಲಿರುವ ಮತ್ತಿತತರರೂ ಸೇರಿದಂತೆ ಕಾರ್ಯನಿರತ ವೃಂದ ಬಲದ ಶೇಕಡ 50 ರಷ್ಟು ಸಿಬ್ಬಂದಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕು. ಉಳಿದ ಸಿಬ್ಬಂದಿಯನ್ನು ಸಾಮಾನ್ಯ ಜನಗಣತಿ-2027ರ ಕಾರ್ಯಕ್ಕೆ ನಿಯೋಜಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜಿಬಿಎ ಮುಖ್ಯ ಆಯುಕ್ತರಿಗೆ ಏ.04 ರಂದು ಬರೆದ ಪತ್ರದಲ್ಲಿ ಕೋರಿತ್ತು.
ಸಿಬ್ಬಂದಿ ವಾಸಸ್ಥಳಕ್ಕಿಂತ 15-20 ಕಿ.ಮೀ ದೂರ ಗಣತಿಗೆ ನಿಯೋಜನೆ:
ಈ ಸಿಬ್ಬಂದಿಗೆ ಅವರ ವಾಸಸ್ಥಳದ ಹತ್ತಿರವಿರುವ ಸ್ಥಳಗಳಲ್ಲಿಯೇ ಸಾಮಾನ್ಯ ಜನಗಣತಿ-2027ರ ಕಾರ್ಯಕ್ಕೆ ನಿಯೋಜಿಸುವಂತೆಯೂ ಆಡಳಿತ ಸುಧಾರಣಾ ಇಲಾಖೆಯು ಪತ್ರದಲ್ಲಿ ತಿಳಿಸಿತ್ತು. ಆದರೂ ಅವರ ವಾಸಸ್ಥಳದ ವಿಳಾಸಕ್ಕಿಂತ 15-20 ಕಿ.ಮೀ ದೂರದ ಸ್ಥಳಗಳಲ್ಲಿ ಜನಗಣತಿಗೆ ನಿಯೋಜಿಸಲಾಗಿದೆ ಎಂದು ಸಚಿವಾಲಯ ಸಂಘ ಆರೋಪಿಸಿದೆ.
43 ಇಲಾಖೆಗಳ ಸಂಪೂರ್ಣ ಸಚಿವಾಲಯ ಬಂದ್ ಎಚ್ಚರಿಕೆ!!:
“ಜನಗಣತಿ- 2027 ಕ್ಕೆ ಸಂಬಂಧಿಸಿದಂತೆ, ಸಚಿವಾಲಯದ ಅಧಿಕಾರಿ/ ಸಿಬ್ಬಂದಿಗಳ ನಿಯೋಜನೆ ಕುರಿತು, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸರ್ಕಾರದ ಬಹು ಮುಖ್ಯ ಕಾರ್ಯಗಳಿಗೆ ತೊಂದರೆ ಆಗಬಾರದೆಂದು, ಸಚಿವಾಲಯದ ಕೇವಲ 495 ಅಧಿಕಾರಿ ಮತ್ತು ನೌಕರರನ್ನು ಮಾತ್ರ ಗಣತಿ ಕಾರ್ಯಕ್ಕೆ ನಿಯೋಜಿಸಬೇಕೆಂದು, ಸಿಎಸ್ ಹಾಗೂ ಜಿಬಿಎ ಮುಖ್ಯ ಆಯುಕ್ತರು ಸ್ಪಷ್ಟವಾಗಿ ಲಿಖಿತ ನಿರ್ದೇಶನ ನೀಡಿದ್ದಾರೆ. ಹೀಗಿದ್ದಾಗ್ಯೂ ನಿಯೋಜನೆ ಆದೇಶದಲ್ಲಿ ಹೆಸರಿಲ್ಲದ ಸಚಿವಾಲಯದ ಸಿಬ್ಬಂದಿಗೆ ಪ್ರತಿನಿತ್ಯ ಚಿತ್ರಹಿಂಸೆ ನೀಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಇಡೀ ಸಚಿವಾಲಯವನ್ನೇ ಬಂದ್ ಮಾಡಬೇಕಾಗುತ್ತದೆ” ಎಂದು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗ ಎಚ್ಚರಿಕೆ ನೀಡಿದ್ದಾರೆ.





















