ಬೆಂಗಳೂರು, ಏ.22 www.bengaluruwire.com: ರಾಜ್ಯದ ಶೈಕ್ಷಣಿಕ ವಲಯದಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ‘ವಿದ್ಯಾರ್ಥಿ ಸಂಘಗಳ ಚುನಾವಣೆ’ಗೆ ಅಂತಿಮವಾಗಿ ಮರುಜೀವ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜಕೀಯ ಸಿದ್ಧಾಂತಗಳನ್ನು ಬದಿಗಿಟ್ಟು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಎಡಪಂಥೀಯ ಪಕ್ಷಗಳ ವಿದ್ಯಾರ್ಥಿ ಘಟಕಗಳು ಒಕ್ಕೊರಲಿನಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಚುನಾವಣೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿವೆ.
ಬುಧವಾರ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಸಭಾಂಗಣದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಬೆಳವಣಿಗೆ ನಡೆದಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಎಲ್ಲ ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಹವಾಲುಗಳನ್ನು ಮಂಡಿಸಿದರು.
ಬಜೆಟ್ ಘೋಷಣೆಗೆ ಎಲ್ಲೆಡೆ ಸ್ವಾಗತ:
2026-27ರ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಚುನಾವಣೆಗಳನ್ನು ಮರು ಆರಂಭಿಸುವ ಕುರಿತು ನೀಡಿದ್ದ ಭರವಸೆಯನ್ನು ಎಲ್ಲಾ ವಿದ್ಯಾರ್ಥಿ ನಾಯಕರು ಸ್ವಾಗತಿಸಿದರು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜೆ.ಎಂ. ಲಿಂಗ್ಡೋ ಸಮಿತಿಯ ವರದಿಯ ಆಧಾರದ ಮೇಲೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ.

ಸಂಘಟನೆಗಳ ಪ್ರಮುಖ ಬೇಡಿಕೆಗಳು:
ಎಡಪಂಥೀಯ ಸಂಘಟನೆಗಳು (SFI, AISF): ವಿದ್ಯಾರ್ಥಿ ಸಂಘಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಹಾಗೂ ರಚನಾತ್ಮಕ ಪ್ರಾತಿನಿಧ್ಯ ಇರಬೇಕು.
ಎಬಿವಿಪಿ (ABVP): ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಶೇ. 60ರಷ್ಟು ಹಾಜರಾತಿ ಇರಬೇಕು ಮತ್ತು ಯಾವುದೇ ಕ್ರಿಮಿನಲ್ ಪ್ರಕರಣಗಳು (FIR) ಇರಬಾರದು.
ಎನ್ಎಸ್ಯುಐ (NSUI) ಮತ್ತು ಜೆಡಿಎಸ್: ಹಾಜರಾತಿ ಅಥವಾ ಎಫ್ಐಆರ್ ನೆಪದಲ್ಲಿ ವಿದ್ಯಾರ್ಥಿಗಳ ಹಕ್ಕನ್ನು ಕಸಿದುಕೊಳ್ಳಬಾರದು, ಎಲ್ಲರಿಗೂ ಸಮಾನ ಅವಕಾಶ ನೀಡಬೇಕು.
ಸ್ಥಳೀಯ ಮೀಸಲಾತಿ: ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ಶೇ. 70ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂದು ಜೆಡಿಎಸ್ ವಿದ್ಯಾರ್ಥಿ ಘಟಕ ಒತ್ತಾಯಿಸಿದೆ.
ಕೇವಲ ಸಾಂಸ್ಕೃತಿಕ ಕಾರ್ಯಕ್ರಮಕ್ಕಷ್ಟೇ ಸೀಮಿತವಲ್ಲ:
ಚುನಾಯಿತ ಸಂಘಟನೆಗಳಿಗೆ ವಿಶ್ವವಿದ್ಯಾಲಯಗಳ ‘ಸಿಂಡಿಕೇಟ್’ ಸಭೆಗಳಲ್ಲಿ ಭಾಗವಹಿಸುವ ಮತ್ತು ವಿದ್ಯಾರ್ಥಿಗಳ ಪರವಾಗಿ ಗಣನೀಯ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ನೀಡಬೇಕು. ಚುನಾಯಿತ ಬಾಡಿ ಕೇವಲ ಕಾಲೇಜು ಫೆಸ್ಟ್ ನಡೆಸಲು ಸೀಮಿತವಾಗಬಾರದು ಎಂದು ಬೆಂಗಳೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಪಾದಿಸಿದ್ದಾರೆ.
ವಿದ್ಯಾರ್ಥಿ ನಾಯಕರ ಅಭಿಪ್ರಾಯಗಳನ್ನು ಆಲಿಸಿದ ಸಚಿವರು, ಈ ಎಲ್ಲ ವಿಷಯಗಳನ್ನು ಕ್ರೋಢೀಕರಿಸಿ ಶೀಘ್ರದಲ್ಲೇ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಸಭೆಯಲ್ಲಿ ಅಧ್ಯಾಪಕ ಸಂಘಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳು ಸಹ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ.






















