ಬೆಂಗಳೂರು, ಏ.22, www.bengaluruwire.com: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುವ ಮುನ್ನವೇ ಎಚ್ಚೆತ್ತುಕೊಂಡಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ಹಾಗೂ ನಗರದ ವಿವಿಧ ಪಾಲಿಕೆಗಳ ಆಯುಕ್ತರು ಇಂದು ನಗರದಾದ್ಯಂತ ವಿವಿಧೆಡೆ ಸಂಚರಿಸಿ ಪರಿಶೀಲನೆ ನಡೆಸಿದರು.
ಸಾಯಿ ಲೇಔಟ್ನ ದಶಕಗಳ ಪ್ರವಾಹ ಸಮಸ್ಯೆಗೆ ಮುಕ್ತಿ ಹಾಡುವುದರಿಂದ ಹಿಡಿದು, ನಗರದ ಸ್ವಚ್ಛತಾ ವ್ಯವಸ್ಥೆಯ ಸುಧಾರಣೆಯವರೆಗೆ ಹಲವು ಪ್ರಮುಖ ನಿರ್ದೇಶನಗಳನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ.
ಸಾಯಿ ಲೇಔಟ್ ಪ್ರವಾಹ ಮುಕ್ತಕ್ಕೆ ಗಡುವು:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಇಂದು (ಏ.22) ಸಾಯಿ ಲೇಔಟ್ ಪ್ರದೇಶಕ್ಕೆ ಭೇಟಿ ನೀಡಿ, ಬಾಕ್ಸ್ ಪುಶಿಂಗ್ ಕಾಮಗಾರಿಯನ್ನು ಪರಿಶೀಲಿಸಿದರು. ಪ್ರತಿ ವರ್ಷ ಮಳೆಗಾಲದಲ್ಲಿ ಜಲಾವೃತವಾಗುವ ಸಾಯಿ ಲೇಔಟ್ ಸಮಸ್ಯೆಗೆ ಗೆದ್ದಲಹಳ್ಳಿ ರೈಲ್ವೆ ವೆಂಟ್ ಬಳಿಯ ಬಾಕ್ಸ್ ಪುಶಿಂಗ್ ಕಾಮಗಾರಿ ಅತಿ ಮುಖ್ಯವಾಗಿದೆ.

“ರೈಲ್ವೆ ಇಲಾಖೆಯಿಂದ ಅನುಮತಿ ದೊರೆತಿದ್ದು, ಒಂದು ಬಾಕ್ಸ್ ಪುಶಿಂಗ್ ಕಾರ್ಯ ಏಪ್ರಿಲ್ 30ರೊಳಗೆ ಪೂರ್ಣಗೊಳ್ಳಲಿದೆ. ಎರಡನೇ ಬಾಕ್ಸ್ ಕಾಮಗಾರಿಯನ್ನು ಮೇ 30ರೊಳಗೆ ಮುಗಿಸಲು ಸೂಚಿಸಲಾಗಿದೆ,” ಎಂದು ಮಹೇಶ್ವರ್ ರಾವ್ ತಿಳಿಸಿದರು.
ರೈಲು ಸಂಚಾರಕ್ಕೆ ತೊಂದರೆಯಾಗದಂತೆ ಗರ್ಡರ್ ಅಳವಡಿಸಿ ದಿನಕ್ಕೆ 2 ಮೀಟರ್ಗಳಷ್ಟು ಪುಶಿಂಗ್ ಮಾಡಲಾಗುತ್ತಿದೆ. ಇದರೊಂದಿಗೆ ಬಿಡಿಎ ವತಿಯಿಂದ ಮತ್ತೊಂದು ವೆಂಟ್ ನಿರ್ಮಾಣವಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ನೀರು ಹೊರಹಾಕಲು ತಾತ್ಕಾಲಿಕ ಪಂಪ್ ಸೆಟ್ ಅಳವಡಿಸಲು ಆದೇಶಿಸಲಾಗಿದೆ.
ವೈಟ್ ಟಾಪಿಂಗ್ ವಿಳಂಬ: ಗುತ್ತಿಗೆದಾರರಿಗೆ ದಂಡದ ಬಿಸಿ:
ಹೆಣ್ಣೂರು-ಬಾಗಲೂರು ರಸ್ತೆಯ 5 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿಯ ವಿಳಂಬದ ಬಗ್ಗೆ ಆಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜೂನ್ 15ರೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಗಡುವು ನೀಡಿದ ಅವರು, ವಿಳಂಬ ನೀತಿ ಅನುಸರಿಸುತ್ತಿರುವ ಗುತ್ತಿಗೆದಾರರಿಗೆ ದಂಡ ವಿಧಿಸಲು ಬಿ-ಸ್ಮೈಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾದಚಾರಿ ಮಾರ್ಗ ಮತ್ತು ಬಫರ್ ಝೋನ್ ಅಭಿವೃದ್ಧಿಯನ್ನು ಸಮಾನಾಂತರವಾಗಿ ಕೈಗೊಳ್ಳಲು ನಿರ್ದೇಶಿಸಿದರು.
ಪೂರ್ವ ನಗರ ಪಾಲಿಕೆ: ರಾಜಕಾಲುವೆಗಳ ಹೂಳೆತ್ತಲು ಆದ್ಯತೆ:

ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಪ್ರವಾಹ ಪೀಡಿತ ಪ್ರದೇಶಗಳಾದ ಗುಂಜೂರು, ವರ್ತೂರು, ಯಮಲೂರು (ಎಪ್ಸಿಲಾನ್) ಹಾಗೂ ಮಣಿಪಾಲ್ ಆಸ್ಪತ್ರೆ ಸಮೀಪದ ರಾಜಕಾಲುವೆಗಳನ್ನು ಪರಿಶೀಲಿಸಿದರು. ವಿಶ್ವಬ್ಯಾಂಕ್ ಅನುದಾನದಡಿ ನಡೆಯುತ್ತಿರುವ ಈ ಕಾಮಗಾರಿಗಳನ್ನು ಮಳೆಗಾಲಕ್ಕೆ ಮುನ್ನವೇ ಮುಗಿಸಲು ಅವರು ತಾಕೀತು ಮಾಡಿದರು. “ಒತ್ತುವರಿ ತೆರವುಗೊಳಿಸಿ ಕಚ್ಚಾ ಕಾಲುವೆಗಳನ್ನು ವ್ಯವಸ್ಥಿತಗೊಳಿಸುವುದು ನಮ್ಮ ಮೊದಲ ಆದ್ಯತೆ. ಪ್ರವಾಹ ತಡೆಗಟ್ಟಲು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ,” ಎಂದು ರಮೇಶ್ ತಿಳಿಸಿದರು.
ಉತ್ತರ ನಗರ ಪಾಲಿಕೆ: ಪೌರಕಾರ್ಮಿಕರ ಗೈರಿಗೆ ಆಯುಕ್ತರ ತರಾಟೆ:
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಸರ್ವಜ್ಞನಗರದಲ್ಲಿ ಸ್ವಚ್ಛತಾ ಕಾರ್ಯ ಪರಿಶೀಲಿಸಿದರು. ಪೌರಕಾರ್ಮಿಕರ ಹಾಜರಾತಿಯಲ್ಲಿನ ವ್ಯತ್ಯಯ ಕಂಡು ಕೆಂಡಾಮಂಡಲರಾದ ಅವರು, ದೀರ್ಘಕಾಲದವರೆಗೆ ಗೈರಾದವರ ಸಂಬಳ ಕಡಿತಕ್ಕೆ ಸೂಚಿಸಿದರು.

“ನಗರದ ಸ್ವಚ್ಛತೆಯಲ್ಲಿ ಮಾನಿಟರಿಂಗ್ ಕೊರತೆ ಎದ್ದು ಕಾಣುತ್ತಿದೆ. ಪ್ರತಿ ಪೌರಕಾರ್ಮಿಕರ ಕಾರ್ಯವೈಖರಿಯನ್ನು ಕಿರಿಯ ಆರೋಗ್ಯ ಪರಿವೀಕ್ಷಕರು (JHI) ನಿರಂತರವಾಗಿ ಗಮನಿಸಬೇಕು. ತ್ಯಾಜ್ಯ ವಿಂಗಡಣೆ ಮಾಡದ ಅಂಗಡಿಗಳು ಮತ್ತು ಕಸ ಎಸೆಯುವವರ ವಿರುದ್ಧ ಕಠಿಣ ದಂಡ ವಿಧಿಸಿ,” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ರಾತ್ರಿ ಪಾಳಿಯ ಮಾರ್ಷಲ್ಗಳ ಕಾರ್ಯಕ್ಷಮತೆಯ ವರದಿಯನ್ನು ಎರಡು ದಿನಗಳಲ್ಲಿ ಸಲ್ಲಿಸಲು ಅವರು ಆದೇಶಿಸಿದರು.
ಇತರ ಪ್ರಮುಖ ನಿರ್ಧಾರಗಳು:
ತ್ಯಾಜ್ಯ ಸಂಗ್ರಹಣೆ: ಸರ್ವಜ್ಞನಗರದ ದ್ವಿತೀಯ ಹಂತದ ತ್ಯಾಜ್ಯ ಘಟಕಕ್ಕೆ ಬರುವ 200 ಟನ್ ಕಸವನ್ನು ಮೂಲದಲ್ಲಿಯೇ ವಿಂಗಡಿಸಲು ಮಾರ್ಷಲ್ಗಳ ನಿಯೋಜನೆ.
ರಸ್ತೆ ಅಭಿವೃದ್ಧಿ: ಬಾಣಸವಾಡಿ 8ನೇ ಮುಖ್ಯ ರಸ್ತೆಯ ಪಾದಚಾರಿ ಮಾರ್ಗಕ್ಕೆ ತಕ್ಷಣ ಅನುದಾನ ಬಿಡುಗಡೆ.
ತೆರವು ಕಾರ್ಯಾಚರಣೆ: ಕೆ. ನಾರಾಯಣಪುರ ರಸ್ತೆಯಲ್ಲಿ ಬಳಕೆಯಲ್ಲಿಲ್ಲದ ಶೌಚಾಲಯ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಹಾದಿ ಸುಗಮ.
ತಂತ್ರಜ್ಞಾನ: ಗೆದ್ದಲಹಳ್ಳಿ ರೈಲ್ವೆ ಹಳಿ ಕೆಳಭಾಗದಲ್ಲಿ ‘ಟ್ರೆಂಚ್ ಲೆಸ್’ ತಂತ್ರಜ್ಞಾನ ಬಳಸಿ ಮಳೆನೀರು ಚರಂಡಿ ನಿರ್ಮಾಣ.
ಬೆಂಗಳೂರನ್ನು ಮುಂಬರುವ ಮಳೆಗಾಲಕ್ಕೆ ಸಜ್ಜುಗೊಳಿಸಲು ಜಿಬಿಎ (GBA) ಮುಖ್ಯ ಆಯುಕ್ತರ ನೇತೃತ್ವದಲ್ಲಿ ಎಲ್ಲಾ ವಿಭಾಗಗಳ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡುವ ಅಗತ್ಯವಿದೆ. ಇಲ್ಲವಾದಲ್ಲಿ “ಬೆಂಗಳೂರು ಪ್ರತಿ ಮಳೆಗಾಲ ಬಂದಾಗ ತೇಲುತ್ತಿದೆ, ದೋಣಿಯಲ್ಲಿ ಜನರ ಸಂಚಾರ ಮಾಡುವ ದುಸ್ಥಿತಿ” ಎಂಬ ಅಪಖ್ಯಾತಿಗೆ ಗುರಿಯಾಗಬೇಕಾಗುತ್ತದೆ.























