ಬೆಂಗಳೂರು, ಏ.17 www.bengaluruwire.com: ರೈತರ ಹಿತರಕ್ಷಣೆಗಾಗಿ ನಿರ್ಮಿಸಲಾದ ಸರ್ಕಾರಿ ಸ್ವಾಮ್ಯದ ಹೈಟೆಕ್ ಶೈತ್ಯಾಗಾರವೊಂದು ಖಾಸಗಿ ಸಂಸ್ಥೆಯ ಅಕ್ರಮ ಅಡ್ಡೆಯಾಗಿ ಬದಲಾದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ (KAPPEC) ಒಡೆತನದ ಆಸ್ತಿಯನ್ನು ಅಕ್ರಮವಾಗಿ ಬಳಸುತ್ತಿದ್ದ ‘ಮೆಸ್ ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್’ ಸಂಸ್ಥೆಯನ್ನು ಒಕ್ಕಲೆಬ್ಬಿಸಲು ಸರ್ಕಾರ ಈಗ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಿದೆ.
ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿರುವ ಇಂಟಿಗ್ರೇಟೆಡ್ ಕೋಲ್ಡ್ ಚೈನ್ ಫೆಸಿಲಿಟಿ (ICCF)ಯನ್ನು 45 ದಿನಗಳೊಳಗೆ ಖಾಲಿ ಮಾಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧಿಕಾರ ಪಡೆದ ತೆರವು ಅಧಿಕಾರಿ ಸಿ.ಎನ್. ಶಿವಪ್ರಕಾಶ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ನಿಗದಿತ ಸಮಯದಲ್ಲಿ ಜಾಗ ಖಾಲಿ ಮಾಡದಿದ್ದರೆ, ಪೋಲೀಸ್ ಬಲ ಬಳಸಿ ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಕೋಟಿ ಕೋಟಿ ಬಾಕಿ: ಸರ್ಕಾರದ ಬೊಕ್ಕಸಕ್ಕೆ ವಂಚನೆ:

2024ರ ಏಪ್ರಿಲ್ 19ರಂದು ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಫಿಜಾ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. ವರ್ಷಕ್ಕೆ 1.55 ಕೋಟಿ ರೂ. ಲೈಸೆನ್ಸ್ ಶುಲ್ಕ ಪಾವತಿಸುವ ಶರತ್ತಿನ ಮೇಲೆ ಈ ಘಟಕವನ್ನು ನೀಡಲಾಗಿತ್ತು. ಆದರೆ, ಸಂಸ್ಥೆಯು ಈವರೆಗೆ ಕೇವಲ 18.29 ಲಕ್ಷ ರೂ. ಮಾತ್ರ ಪಾವತಿಸಿದ್ದು, ಸದ್ಯ 2.48 ಕೋಟಿ ರೂ.ಗಳಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿದೆ. ಅಚ್ಚರಿಯ ವಿಷಯವೆಂದರೆ, ಪ್ರತಿದಿನ 50,969 ರೂ.ಗಳಷ್ಟು ದಂಡದ ಮೊತ್ತ ಏರಿಕೆಯಾಗುತ್ತಿದ್ದು, ಇದು ಸರ್ಕಾರದ ಬೊಕ್ಕಸಕ್ಕೆ ನೇರ ನಷ್ಟ ಉಂಟುಮಾಡಿದೆ.
ಕೃಷಿ ಘಟಕದಲ್ಲಿ ಬಟ್ಟೆ ಅಕ್ರಮ ಸಂಗ್ರಹ:
ವಾಣಿಜ್ಯ ತೆರಿಗೆ ಇಲಾಖೆಯ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ. ರೈತರ ಬಾಳೆಹಣ್ಣು ಸಂಸ್ಕರಣೆ ಮಾಡಬೇಕಿದ್ದ ಈ ಹೈಟೆಕ್ ಘಟಕದಲ್ಲಿ ಅಕ್ರಮವಾಗಿ ರೆಡಿಮೇಡ್ ಬಟ್ಟೆಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಕೃಷಿ ಉದ್ದೇಶದ ಜಾಗವನ್ನು ವಾಣಿಜ್ಯ ಗೋದಾಮನ್ನಾಗಿ ಬಳಸಿಕೊಂಡ ಹಿನ್ನೆಲೆಯಲ್ಲಿ ಇಲಾಖೆಯು ವಸ್ತುಗಳನ್ನು ಜಪ್ತಿ ಮಾಡಿ ಘಟಕಕ್ಕೆ ಸೀಲ್ ಮಾಡಿದೆ. ಅಲ್ಲದೆ, ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವುದು ಕೂಡ ದೃಢಪಟ್ಟಿದೆ.
ರೈತರಿಗೆ ತಪ್ಪದ ತೊಂದರೆ:
ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಮಾತನಾಡಿ, “ಫಿಜಾ ಗ್ಲೋಬಲ್ ಸಂಸ್ಥೆಯು ಒಪ್ಪಂದದ ಒಂದೂ ನಿಯಮವನ್ನು ಪಾಲಿಸಿಲ್ಲ. ವಿದ್ಯುತ್ ಬಿಲ್ ಪಾವತಿಸದ ಕಾರಣ ಪದೇ ಪದೇ ವಿದ್ಯುತ್ ಕಡಿತಗೊಂಡು ರೈತರಿಗೆ ತೀವ್ರ ತೊಂದರೆಯಾಗಿದೆ. ಸ್ವಚ್ಛತೆ ಇಲ್ಲದೆ, ತಾಂತ್ರಿಕ ಸಿಬ್ಬಂದಿ ಇಲ್ಲದೆ ಘಟಕವನ್ನು ಹಾಳುಗೆಡವಿದ್ದಾರೆ. 2025ರ ಮೇ ತಿಂಗಳಲ್ಲೇ ಒಪ್ಪಂದ ರದ್ದುಪಡಿಸಿ ಹೊರಹೋಗಲು ಸೂಚಿಸಿದರೂ ಎಂಟು ತಿಂಗಳಿನಿಂದ ಮೊಂಡುತನ ಪ್ರದರ್ಶಿಸಿದ್ದಾರೆ. ಈಗ ಅಂತಿಮ ಆದೇಶ ಹೊರಡಿಸಲಾಗಿದ್ದು, ನಷ್ಟದ ಮೊತ್ತವನ್ನು ಸರ್ಕಾರಿ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡುತ್ತೇವೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಈ ಕಠಿಣ ನಡೆಯು ಸಾರ್ವಜನಿಕ ಆಸ್ತಿ ಲೂಟಿ ಮಾಡುವವರಿಗೆ ಬಿಸಿ ಮುಟ್ಟಿಸಿದ್ದು, ಕನ್ನಮಂಗಲದ ಈ ಹೈಟೆಕ್ ಘಟಕವು ಶೀಘ್ರವೇ ಸರ್ಕಾರದ ಸುಪರ್ದಿಗೆ ಮರಳಲಿದೆ. (ವ್ಯಂಗ್ಯಚಿತ್ರ ಕೃಪೆ: Gemini AI)























