ಬೆಂಗಳೂರು, ಏ.30 www.bengaluruwire.com: ರಾಜಧಾನಿ ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಬುಧವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಗೆ ವಿದ್ಯುತ್ ಮೂಲಸೌಕರ್ಯಗಳು ಅಸ್ತವ್ಯಸ್ತಗೊಂಡಿವೆ.
ಆಲಿಕಲ್ಲು ಸಹಿತ ಸುರಿದ ಮಳೆಗೆ ಸುಮಾರು 87.32 ಲಕ್ಷ ರೂ. ಮೊತ್ತದ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ವಿದ್ಯುತ್ ಪೂರೈಕೆ ಪುನರ್ ಸ್ಥಾಪಿಸಲು ಬೆಸ್ಕಾಂ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ.
ಮೂಲಸೌಕರ್ಯಗಳಿಗೆ ಭಾರಿ ಪೆಟ್ಟು:
ಬೆಸ್ಕಾಂ ಮಾಹಿತಿ ನೀಡಿರುವಂತೆ, ಮಳೆಯ ಆರ್ಭಟಕ್ಕೆ ಒಟ್ಟು 461 ವಿದ್ಯುತ್ ಕಂಬಗಳು, 77 ಟ್ರಾನ್ಸ್ಫಾರ್ಮರ್ಗಳು ಹಾಗೂ ಸುಮಾರು 1.8 ಕಿ.ಮೀ ಉದ್ದದ ವಿದ್ಯುತ್ ತಂತಿಗಳು ಹಾನಿಗೊಳಗಾಗಿವೆ. ಬೆಂಗಳೂರು ನಗರದ (GBA) ವ್ಯಾಪ್ತಿಯೊಂದರಲ್ಲೇ 186 ಕಂಬಗಳು ಹಾಗೂ 38 ಟ್ರಾನ್ಸ್ಫಾರ್ಮರ್ಗಳು ನೆಲಕ್ಕುರುಳಿದ್ದು, 50.52 ಲಕ್ಷ ರೂ. ನಷ್ಟ ಸಂಭವಿಸಿದೆ.

ಸಹಾಯವಾಣಿಗೆ ದೂರುಗಳ ಮಹಾಪೂರ:
ಬುಧವಾರ ಸಂಜೆಯಿಂದ ಮಧ್ಯರಾತ್ರಿಯವರೆಗೆ ಬೆಸ್ಕಾಂ ಸಹಾಯವಾಣಿ 1912 ಕ್ಕೆ ಒಟ್ಟು 12,311 ದೂರುಗಳು ಹರಿದುಬಂದಿದ್ದು, ಈ ಪೈಕಿ ಈಗಾಗಲೇ 11,859 ದೂರುಗಳನ್ನು ಅಧಿಕಾರಿಗಳು ಇತ್ಯರ್ಥಪಡಿಸಿದ್ದಾರೆ. ಉಳಿದ ದೂರುಗಳ ಪರಿಹಾರಕ್ಕಾಗಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.
ಸಾರ್ವಜನಿಕರ ಗಮನಕ್ಕೆ: ಸುರಕ್ಷತಾ ಕ್ರಮಗಳು
ಮುಂದಿನ ದಿನಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇರುವುದರಿಂದ ಬೆಸ್ಕಾಂ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸಲು ಮನವಿ ಮಾಡಿದೆ:
* ವಿದ್ಯುತ್ ಕಂಬಗಳು ವಾಲಿದ್ದರೆ ಅಥವಾ ತಂತಿಗಳು ತುಂಡಾಗಿದ್ದರೆ ಅದರ ಹತ್ತಿರ ಹೋಗಬೇಡಿ.
ಮಳೆ ಬರುವಾಗ ವಿದ್ಯುತ್ ಕಂಬಗಳಿರುವ ಮರಗಳ ಕೆಳಗೆ ಆಶ್ರಯ ಪಡೆಯಬೇಡಿ.
* ಟ್ರಾನ್ಸ್ಫಾರ್ಮರ್ಗಳ ಬಳಿ ಸುಳಿಯಬೇಡಿ.
ಯಾವುದೇ ತುರ್ತು ಸಂದರ್ಭದಲ್ಲಿ ಆಯಾ ವೃತ್ತದ ವಾಟ್ಸ್ಆಪ್ ಸಂಖ್ಯೆಗಳಿಗೆ ಫೋಟೋ ಸಹಿತ ದೂರು ನೀಡಿ.
ಸಚಿವರ ಕಟ್ಟುನಿಟ್ಟಿನ ಸೂಚನೆ:
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಬೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, “ಮಳೆಗಾಲದ ಮುನ್ನವೇ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರ ದೂರುಗಳನ್ನು ತಕ್ಷಣವೇ ಪರಿಹರಿಸಬೇಕು ಮತ್ತು ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು,” ಎಂದು ಆದೇಶಿಸಿದ್ದಾರೆ.
ನಿಮ್ಮ ಜಿಲ್ಲೆಯ ವಾಟ್ಸ್ಆಪ್ ಸಹಾಯವಾಣಿ ಸಂಖ್ಯೆಗಳು:
ದಕ್ಷಿಣ ವೃತ್ತ: 8277884011 | ಪಶ್ಚಿಮ ವೃತ್ತ: 8277884012
ಪೂರ್ವ ವೃತ್ತ: 8277884013 | ಉತ್ತರ ವೃತ್ತ: 8277884014
ಕೋಲಾರ: 8277884015 | ಚಿಕ್ಕಬಳ್ಳಾಪುರ: 8277884016
ಬೆಂ. ಗ್ರಾಮಾಂತರ: 8277884017 | ರಾಮನಗರ: 8277884018ತುಮಕೂರು: 8277884019 | ಚಿತ್ರದುರ್ಗ: 8277884020 | ದಾವಣಗೆರೆ: 8277884021




















