ಬೆಂಗಳೂರು, ಆ.22 www.bengaluruwire.com: ಬರ ಪರಿಸ್ಥಿತಿ ಮತ್ತು ತೀವ್ರ ಮಳೆ ಕೊರತೆಯಿಂದ ಕಂಗಾಲಾಗಿರುವ ರಾಜ್ಯದ ರೈತರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಮೋಡಬಿತ್ತನೆ ಕೈಗೊಳ್ಳಲು ತೀರ್ಮಾನಿಸಿದೆ.
2026-27ನೇ ಸಾಲಿನಲ್ಲಿ ಆಗಸ್ಟ್ನಿಂದ ಅಕ್ಟೋಬರ್ ಅವಧಿಯಲ್ಲಿ 60 ದಿನಗಳ ಕಾಲ 200 ಗಂಟೆಗಳ ವೈಮಾನಿಕ ಹಾರಾಟದ ಮೂಲಕ ತುರ್ತು ಮೋಡ ಬಿತ್ತನೆ (Cloud Seeding) ಕೈಗೊಳ್ಳಲು ರಾಜ್ಯ ಜಲಸಂಪನ್ಮೂಲ ಇಲಾಖೆ ಅಧಿಕೃತ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಕರ್ನಾಟಕ ನೀರಾವರಿ ನಿಗಮ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಸಹಯೋಗದಲ್ಲಿ ಈ ಯೋಜನೆ ಜಾರಿಯಾಗಲಿದೆ.
ಯೋಜನೆಯ ಪ್ರಮುಖ ವಿವರಗಳು:

ಅಂದಾಜು ವೆಚ್ಚ: ₹27.52 ಕೋಟಿ ಸ್ಥಿರ ವೆಚ್ಚ ಹಾಗೂ ₹1.00 ಕೋಟಿ ಬದಲಾಗುವ ವೆಚ್ಚ ಸೇರಿ ಒಟ್ಟು ₹28.52 ಕೋಟಿ (GST ಹೊರತುಪಡಿಸಿ) ಅನುದಾನ ಮಂಜೂರು ಮಾಡಲಾಗಿದೆ.
ಕಾರ್ಯಾಚರಣೆ ಅವಧಿ: ಆಗಸ್ಟ್ನಿಂದ ಅಕ್ಟೋಬರ್ 2026ರವರೆಗೆ 60 ದಿನಗಳು (ಒಟ್ಟು 200 ಗಂಟೆಗಳ ವೈಮಾನಿಕ ಹಾರಾಟ).
ಗುತ್ತಿಗೆ ಸಂಸ್ಥೆ: ಮೆ/ಸ ಖ್ಯಾತಿ ಕ್ಲೈಮೇಟ್ ಮಾಡಿಫಿಕೇಶನ್ ಕನ್ಸಲ್ಟೆಂಟ್ಸ್ ಎಲ್ಎಲ್ಪಿ (M/s Kyathi Climate Modification Consultants LLP).
ತಾಂತ್ರಿಕ ಮೇಲ್ವಿಚಾರಣೆ: KSNDMC ಸಂಸ್ಥೆಯು ಹವಾಮಾನ ರಾಡಾರ್ಗಳು ಹಾಗೂ ವೀಕ್ಷಣಾ ಜಾಲಗಳನ್ನು ಬಳಸಿ ಸೂಕ್ತ ಮೋಡಗಳ ಗುರುತಿಸುವಿಕೆ ಮತ್ತು ಕಾರ್ಯಾಚರಣೆಯ ವೈಜ್ಞಾನಿಕ ಮೇಲ್ವಿಚಾರಣೆ ನಡೆಸಲಿದೆ.
ತೀವ್ರ ಮಳೆ ಕೊರತೆ ಹಿನ್ನೆಲೆ:
KSNDMC ವರದಿಯ ಪ್ರಕಾರ, ರಾಜ್ಯದಲ್ಲಿ ಜೂನ್ ಅಂತ್ಯಕ್ಕೆ 42% ಹಾಗೂ ಜುಲೈ ಅಂತ್ಯಕ್ಕೆ 29% ಮಳೆ ಕೊರತೆ ದಾಖಲಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 27 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದೆ ಕೈಗೊಂಡಿದ್ದ “ವರ್ಷಧಾರೆ” ಹಾಗೂ ಐಐಟಿಎಂ ಸಂಸ್ಥೆಯ CAIPEEX ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಮೋಡ ಬಿತ್ತನೆಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

















