ಬೆಂಗಳೂರು, ಆ.22 www.bengaluruwire.com: ರಾಜ್ಯದಲ್ಲಿ ‘ಪನೀರ್’ ಹೆಸರಿನಲ್ಲಿ ಮಾರಾಟವಾಗುತ್ತಿರುವ ಅನಲಾಗ್ ಅಥವಾ ನಾನ್-ಡೈರಿ ಪನೀರ್ನ ತಯಾರಿಕೆ, ಸಂಗ್ರಹಣೆ, ಸಾಗಣೆ ಹಾಗೂ ಮಾರಾಟವನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಸಾರ್ವಜನಿಕರ ಆರೋಗ್ಯ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಈ ಕಠಿಣ ನಿರ್ಧಾರ ಕೈಗೊಂಡಿದೆ. ಈ ಕುರಿತು ಆಗಸ್ಟ್ 17ರಂದು ಸರ್ಕಾರಿ ಅಧಿಸೂಚನೆ ಹೊರಡಿಸಲಾಗಿದ್ದು, ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಈ ನಿಷೇಧ ರಾಜ್ಯಾದ್ಯಂತ ಜಾರಿಯಲ್ಲಿರಲಿದೆ.
ಏನಿದು ಅನಲಾಗ್ ಪನೀರ್?:
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಾವಳಿಗಳ ಪ್ರಕಾರ, ಪನೀರ್ ಎಂಬುದು ಕೇವಲ ಹಾಲಿನಿಂದ ಮಾತ್ರ ತಯಾರಾಗುವ ಪ್ರಮಾಣೀಕೃತ ಆಹಾರ ಉತ್ಪನ್ನವಾಗಿದೆ. ಇದರಲ್ಲಿ ಹಾಲಿನ ಕೊಬ್ಬು (Milk Fat) ಪ್ರಮುಖ ಅಂಶವಾಗಿರುತ್ತದೆ.

ಆದರೆ ಹಾಲಿನ ಕೊಬ್ಬಿನ ಬದಲು ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರ ನಾನ್-ಡೈರಿ ಅಂಶಗಳನ್ನು ಬೆರೆಸಿ ತಯಾರಿಸುವ ಉತ್ಪನ್ನವನ್ನು ‘ಅನಲಾಗ್ / ನಾನ್-ಡೈರಿ ಪನೀರ್’ ಎನ್ನಲಾಗುತ್ತದೆ. ಇಂತಹ ಉತ್ಪನ್ನಗಳನ್ನು ಪನೀರ್ ಹೆಸರಿನಲ್ಲಿ ಗ್ರಾಹಕರಿಗೆ ಮಾರಾಟ ಮಾಡುವುದನ್ನು ನಿಯಮಗಳು ಕಟ್ಟುನಿಟ್ಟಾಗಿ ನಿರ್ಬಂಧಿಸುತ್ತವೆ.
ಇದು ನಿಜವಾದ ಪನೀರ್ಗಿಂತ ಹೇಗೆ ಭಿನ್ನವಾಗಿದೆ?:
ಪದಾರ್ಥಗಳು: ನಿಜವಾದ ಪನೀರ್ ಮೊಸರು ಹಾಲು ಮತ್ತು ನೈಸರ್ಗಿಕ ಹಾಲಿನ ಕೊಬ್ಬನ್ನು ಮಾತ್ರ ಬಳಸುತ್ತದೆ. ಅನಲಾಗ್ ಪನೀರ್ ತರಕಾರಿ ಕೊಬ್ಬುಗಳು ಮತ್ತು ದಪ್ಪವಾಗಿಸುವಿಕೆಯನ್ನು ಅವಲಂಬಿಸಿದೆ.
ಪೋಷಣೆ: ನಿಜವಾದ ಪನೀರ್ ಡೈರಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಅನಲಾಗ್ ಪನೀರ್ ಗಮನಾರ್ಹವಾಗಿ ಕಡಿಮೆ ಪ್ರೋಟೀನ್ ಅನ್ನು ಹೊಂದಿರುತ್ತದೆ, ಕ್ಯಾಲ್ಸಿಯಂ ಕೊರತೆಯನ್ನು ಹೊಂದಿರುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಅಥವಾ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ.
ವೆಚ್ಚ ಮತ್ತು ಬಳಕೆ: ಇದು ನಿಜವಾದ ಡೈರಿ ಪನೀರ್ಗಿಂತ ಸರಿಸುಮಾರು ಅರ್ಧದಷ್ಟು ವೆಚ್ಚವಾಗುತ್ತದೆ ಮತ್ತು ಕೆಲವೊಮ್ಮೆ ವಾಣಿಜ್ಯ ಅಡುಗೆಮನೆಗಳು ಅಥವಾ ಅಗ್ಗದ ತಿನಿಸುಗಳಲ್ಲಿ ಲೇಬಲ್ ಇಲ್ಲದೆ ಬಳಸಲಾಗುತ್ತದೆ.
ಹೋಟೆಲ್, ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ:
ಯಾವುದೇ ಆಹಾರ ವ್ಯವಹಾರ ಸಂಸ್ಥೆಗಳು (ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ) ಅನಲಾಗ್ ಪನೀರ್ ಅನ್ನು ಯಾವುದೇ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವಂತಿಲ್ಲ, ಸಂಗ್ರಹಿಸುವಂತಿಲ್ಲ ಅಥವಾ ಸರಬರಾಜು ಮಾಡುವಂತಿಲ್ಲ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸದ ಹಾಗೂ ಗುಣಮಟ್ಟದ ಮಾನದಂಡಗಳಿಲ್ಲದ ಡೈರಿ ಅನಲಾಗ್ ಉತ್ಪನ್ನಗಳಿಗೆ ಮಾತ್ರ ಈ ನಿಷೇಧ ಅನ್ವಯಿಸುತ್ತದೆ.
ಈಗಾಗಲೇ ಪ್ರತ್ಯೇಕ ಮಾನದಂಡಗಳನ್ನು ಹೊಂದಿರುವ ಫ್ರೋಜನ್ ಡೆಸರ್ಟ್, ಪ್ರೊಸೆಸ್ಡ್ ಚೀಸ್ ಮತ್ತು ಮಿಕ್ಸ್ಡ್ ಫ್ಯಾಟ್ ಸ್ಪ್ರೆಡ್ ಉತ್ಪನ್ನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.
ರಾಜ್ಯಾದ್ಯಂತ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

















