ಕಾಲದ ಓಟದಲ್ಲಿ ಐದು ವರ್ಷಗಳು ಕೇವಲ ಒಂದು ಸಣ್ಣ ಅವಧಿಯಂತೆ ಕಾಣಬಹುದು. ಆದರೆ 60 ತಿಂಗಳು, 260 ವಾರಗಳು ಹಾಗೂ 1825 ದಿನಗಳನ್ನು ಹೊಂದಿರುವ ಈ ಮೌಲ್ಯಯುತ ಸಮಯ ನಿಜಕ್ಕೂ ನಮಗೆ High Five ಅಂದರೆ ತಪ್ಪಾಗಲಾರದು.
ಯಾವುದೇ ರಾಜಿ ಇಲ್ಲದಂತೆ ಸದಾನೈತಿಕ ಮೌಲ್ಯಗಳನ್ನು ಎತ್ತಿಹಿಡಿದು, ಜನಪರ ಕಾಳಜಿಯೊಂದಿಗೆ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಿದ ‘ಬೆಂಗಳೂರು ವೈರ್’ಗೆ (Bengaluru Wire) ಈ ಐದು ವರ್ಷಗಳು ಅತ್ಯಂತ ಸಾರ್ಥಕ ಮತ್ತು ಹೆಮ್ಮೆಯ ಪಯಣ. 2021ರ ಜನವರಿಯಲ್ಲಿ ಮೊಳಕೆಯೊಡೆದ ನಮ್ಮ ಈ ಕನಸು, ಇಂದು ಮರವಾಗಿ ಮುಂದೆ ಹೆಮ್ಮರವಾಗಿ ಬೆಳೆಯುವ ಆಶೋತ್ತರದಿಂದ 6ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ (ಜನವರಿ 14, 2026).
ಇಂದಿನ ಡಿಜಿಟಲ್ ಮಾಧ್ಯಮ ರಂಗದಲ್ಲಿ ‘ಬ್ರೇಕಿಂಗ್ ನ್ಯೂಸ್’ಗಳ ಭಾರೀ ಭರಾಟೆ ಮತ್ತು ಕ್ಷಣಕ್ಷಣದ ಸುದ್ದಿಗಳ ಪೈಪೋಟಿ ಜೋರಾಗಿದೆ. ಆದರೆ, ಆರಂಭದ ದಿನದಿಂದಲೂ ‘ಬೆಂಗಳೂರು ವೈರ್’ ಈ ರೀತಿ ಸುದ್ದಿಗಳ ರೇಸ್ ಗೆ ಇಳಿಯಲಿಲ್ಲ. ಇತರದೊಂದಿಗೆ ನಾವು ಸ್ಪರ್ಧೆಗಿಳಿದು ಸಿಕ್ಕಿದ್ದನ್ನೆಲ್ಲ ಸುದ್ದಿ ಮಾಡುವ ಕೆಲಸ ಮಾಡಲಿಲ್ಲ; ಬದಲಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ, ಆಳುವ ಸರ್ಕಾರಗಳನ್ನು ಎಚ್ಚರಿಸುವ ಮತ್ತು ಬೆಂಗಳೂರು ನಗರದ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಸುದ್ದಿಗಳಿಗೆ ಮಾತ್ರ ನಮ್ಮ ಡಿಜಿಟಲ್ ವೇದಿಕೆಯನ್ನು ಮೀಸಲಿಟ್ಟಿದ್ದೇವೆ.
ನಮ್ಮ ಬದ್ಧತೆ: ಗುಣಮಟ್ಟ ಮತ್ತು ವಿಶ್ವಾಸಾರ್ಹತೆ:

ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರಕ್ಕೆ ಉದ್ಯಾನ ನಗರಿ ಎನ್ನುವ ಹೆಸರು ಇನ್ನೂ ಉಳಿದಿದೆ. ಈ ಹೆಸರಿನ ಜೊತೆಗೆ ದೇಶದ ಜ್ಞಾನ ನಗರಿ(Knowledge Capital), ಸಿಲಿಕಾನ್ ಕಣಿವೆ, ಆರೋಗ್ಯ ನಗರಿ ಇತ್ಯಾದಿ ಅಭಿದಾನಗಳೂ ಸೇರ್ಪಡೆಯಾಗಿವೆ. ನಮ್ಮದು ಇಂತಹ ಬೆಂಗಳೂರು ಮಹಾನಗರದ ಸುದ್ದಿಗಳನ್ನೇ ಕೇಂದ್ರವಾಗಿರಿಸಿಕೊಂಡಿರುವ ನ್ಯೂಸ್ ಪೋರ್ಟಲ್.
ಹೀಗಿದ್ದರೂ ಕೂಡ, ನಮ್ಮ ದೃಷ್ಟಿ ಸಮಗ್ರವಾಗಿದ್ದು ಇಡೀ ಕನ್ನಡ ನಾಡಿನ ನೆಲ-ಜಲ, ಭಾಷೆ ಮತ್ತು ಸ್ವಾಭಿಮಾನದ ಪರವಾಗಿದೆ. ಸುದ್ದಿಗಳ ಸಂಖ್ಯೆಯನ್ನು ಹೆಚ್ಚಿಸುವುದು ನಮ್ಮ ಗುರಿಯಲ್ಲ, ಬದಲಾಗಿ ನಾವು ನೀಡುವ ಪ್ರತಿಯೊಂದು ವರದಿಯೂ ನೈಜತೆ (Fact), ನಿಖರತೆ (Accuracy) ಮತ್ತು ಗುಣಮಟ್ಟದಿಂದ (Quality) ಕೂಡಿರಬೇಕು ಎಂಬುದೇ ನಮ್ಮ ಸಿದ್ಧಾಂತ.
ವನ್ಯಜೀವಿ ಸಂರಕ್ಷಣೆ, ಪರಿಸರ ಕಾಳಜಿ, ವಿಜ್ಞಾನ-ತಂತ್ರಜ್ಞಾನದ ವಿಸ್ಮಯಗಳು, ಇಂಧನ, ಮಹಾನಗರ ಸಾರಿಗೆ ಸಂಪರ್ಕ ವ್ಯವಸ್ಥೆ, ಕಾನೂನು-ಸುವ್ಯವಸ್ಥೆ ಮತ್ತು ಹಣಕಾಸಿನಂತಹ ಗಂಭೀರ ವಿಷಯಗಳ ಮೇಲೆ ನಾವು ಬೆಳಕು ಚೆಲ್ಲುತ್ತಾ ಬಂದಿದ್ದೇವೆ. ಒಳಗೆ ಯಾವುದೇ ಹೂರಣವಿಲ್ಲದಿದ್ದರೂ ಕೇವಲ ಚಿತ್ರ-ವಿಚಿತ್ರ ಶೀರ್ಷಿಕೆ ಮೂಲಕವೇ ಓದುಗರನ್ನು ಸೆಳೆಯುವ ಆ ರೀತಿಯ ಕಸುಬಿನಿಂದ ನಾವು ತುಂಬಾ ದೂರ. ವಿಶೇಷ ವರದಿ, ತನಿಖಾ ವರದಿಗಳು, ಆಳವಾದ ವಿಶ್ಲೇಷಣೆಗಳು, ನಗರದ ನಾಗರಿಕರಾಗಿ ತಿಳಿಯಲೇಬೇಕಾದ ಮಹತ್ವದ ಸುದ್ದಿಗಳಿಗೆ ನಮ್ಮ ಮೊದಲ ಆದ್ಯತೆ. ಇದರ ಜೊತೆಗೆ ಕುಂಭ ಮೇಳದಂತಹ ಜಗತ್ತಿನ ಅತಿ ದೊಡ್ಡ ಉತ್ಸವಗಳನ್ನು ನೇರವಾಗಿ ಕಂಡು, ತಿಳಿದು ಅಲ್ಲಿಂದಲೇ ಪ್ರತ್ಯಕ್ಷ ವರದಿ ಮಾಡಿದ ಹೆಗ್ಗಳಿಕೆ ನಮ್ಮದು.
ಒಟ್ಟಾರೆಯಾಗಿ ಬೆಂಗಳೂರು ಮಹಾನಗರದ ನಾಗರಿಕರ ಹಿತ ಕಾಯುವ ಕಾವಲುಗಾರನ ರೂಪದಲ್ಲಿ ಸದಾ ಶ್ರಮಿಸುತ್ತಿರುವ ನಮ್ಮ ಪ್ರಯತ್ನಕ್ಕೆ ಎಲ್ಲ ಕನ್ನಡಿಗರು ತೋರುತ್ತಿರುವ ಪ್ರೀತಿ ಮತ್ತು ವಿಶ್ವಾಸವೇ ಶ್ರೀರಕ್ಷೆ.
ನಮ್ಮ ಮುಂದಿನ ಹೆಜ್ಜೆ…
“ಸ್ವತಂತ್ರ ಮತ್ತು ವಾಸ್ತವ ಸುದ್ದಿ” ಎಂಬ ನಮ್ಮ ಮೂಲ ಮಂತ್ರಕ್ಕೆ ನಾವು ಸದಾ ಬದ್ಧ. ಮುಂದಿನ ದಿನಗಳಲ್ಲಿಯೂ ಬೆಂಗಳೂರು ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ, ಜನಸಾಮಾನ್ಯರ ಧ್ವನಿಯಾಗಿ, ಸರ್ಕಾರದ ಓರೆ, ಕೋರೆಗಳಿಗೆ ಹಿಡಿದ ಕನ್ನಡಿಯಾಗಿ ನಮ್ಮ ಜವಾಬ್ದಾರಿಯುತ ಪತ್ರಿಕೋದ್ಯಮ ಮುಂದುವರಿಯಲಿದೆ.
ನಮ್ಮ ಈ ಐದು ವರ್ಷಗಳ ಯಶಸ್ವೀ ಪಯಣದಲ್ಲಿ ಜೊತೆಯಾದ ಎಲ್ಲ ಓದುಗರಿಗೆ, ಹಿತೈಷಿಗಳಿಗೆ, ಸರ್ಕಾರ ಹಾಗೂ ಅದರ ಎಲ್ಲಾ ಅಂಗ ಸಂಸ್ಥೆಗಳಿಗೆ ಮತ್ತು ಜಾಹೀರಾತುದಾರರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
- ಶ್ಯಾಮ್ ಹೆಬ್ಬಾರ್.ಎಸ್, ಸಂಪಾದಕರು,
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.























