ಬೆಂಗಳೂರು, ಜ.12 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿರುವ 8 ಪ್ರಮುಖ ಬಡಾವಣೆಗಳನ್ನು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ವ್ಯಾಪ್ತಿಯ ನಗರ ಪಾಲಿಕೆಗಳಿಗೆ ಹಸ್ತಾಂತರಿಸಿ ನಗರಾಭಿವೃದ್ಧಿ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಈ ಆದೇಶದಿಂದಾಗಿ ಹಲವು ವರ್ಷಗಳಿಂದ ಮೂಲಭೂತ ಸೌಕರ್ಯ ಮತ್ತು ಆಡಳಿತಾತ್ಮಕ ಗೊಂದಲಗಳಲ್ಲಿ ಸಿಲುಕಿದ್ದ ಬಡಾವಣೆಗಳ ನಿವಾಸಿಗಳಿಗೆ ನಿರಾಳ ಸಿಗುವ ನಿರೀಕ್ಷೆಯಿದೆ.
ಯಾವೆಲ್ಲಾ ಬಡಾವಣೆಗಳು ಹಸ್ತಾಂತರ?:
ಸರ್ಕಾರದ ನೂತನ ಅಧಿಸೂಚನೆಯ ಪ್ರಕಾರ ಈ ಕೆಳಗಿನ ಬಡಾವಣೆಗಳನ್ನು ‘ಯಥಾಸ್ಥಿತಿ’ಯಲ್ಲಿ (As-is where-is basis) ಸಂಬಂಧಪಟ್ಟ ನಗರ ಪಾಲಿಕೆಗಳಿಗೆ ವಹಿಸಿಕೊಡಲಾಗಿದೆ:

* ಬನಶಂಕರಿ 6ನೇ ಹಂತ (1 ರಿಂದ 11ನೇ ಬ್ಲಾಕ್)
* ಬನಶಂಕರಿ 6ನೇ ಹಂತದ ಮುಂದುವರೆದ ಬಡಾವಣೆ (4ನೇ ‘ಎಚ್’, ‘ಬಿ’, ‘ಟಿ’ ಬ್ಲಾಕ್)
* ಜೆ.ಪಿ. ನಗರ 8ನೇ ಮತ್ತು 9ನೇ ಫೇಸ್
* ಅಂಜನಾಪುರ ಟೌನ್ ಶಿಪ್ ಮತ್ತು ಮುಂದುವರೆದ ಬಡಾವಣೆ
* ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ (1 ರಿಂದ 9ನೇ ಬ್ಲಾಕ್)
ಅಭಿವೃದ್ಧಿಗೆ ಹಣ ಯಾರದ್ದು?:
ಬಡಾವಣೆಗಳನ್ನು ಹಸ್ತಾಂತರಿಸಿದರೂ, ಅಲ್ಲಿನ ಅಭಿವೃದ್ಧಿ ಜವಾಬ್ದಾರಿಯಿಂದ ಬಿಡಿಎ ಸಂಪೂರ್ಣವಾಗಿ ನುಣಚಿಕೊಳ್ಳುವಂತಿಲ್ಲ. ರಸ್ತೆ, ಉದ್ಯಾನವನ ಸೇರಿದಂತೆ ಮೂಲಭೂತ ಸೌಕರ್ಯಗಳು ಅಪೂರ್ಣವಾಗಿದ್ದರೆ, ಅದನ್ನು ಪೂರ್ಣಗೊಳಿಸಲು ತಗಲುವ ವೆಚ್ಚದ ಶೇ.50 ರಷ್ಟು ಮೊತ್ತವನ್ನು ಬಿಡಿಎ ಭರಿಸಬೇಕು ಎಂದು ಸರ್ಕಾರ ಖಡಕ್ ಸೂಚನೆ ನೀಡಿದೆ.
ನೀರು ಮತ್ತು ಒಳಚರಂಡಿ ಕಾಮಗಾರಿಗಳಿಗೆ ತಗಲುವ ವೆಚ್ಚದಲ್ಲಿ ಶೇ.50 ರಷ್ಟು ಬಿಡಿಎ ಹಾಗೂ ಉಳಿದ ಶೇ.50 ರಷ್ಟು ಹಣವನ್ನು ಜಲಮಂಡಳಿ (BWSSB) ಭರಿಸಬೇಕಿದೆ. ಈ ಹಣಕಾಸಿನ ನಿರ್ವಹಣೆಗಾಗಿ ಪ್ರತ್ಯೇಕ ಎಸ್ಕ್ರೋ (ESCROW) ಖಾತೆ ತೆರೆಯಲು ಸೂಚಿಸಲಾಗಿದೆ.
ತೆರಿಗೆ ಮತ್ತು ಖಾತೆ ನಿರ್ವಹಣೆ:
ಇನ್ನು ಮುಂದೆ ಈ ಬಡಾವಣೆಗಳ ಎಲ್ಲಾ ಆಸ್ತಿ ತೆರಿಗೆಯನ್ನು ಸಂಬಂಧಪಟ್ಟ ನಗರ ಪಾಲಿಕೆಗಳೇ ಸಂಗ್ರಹಿಸಲಿವೆ. ಅಲ್ಲದೆ, ನಿವೇಶನ ಮತ್ತು ಮನೆಗಳ ಖಾತೆಗಳನ್ನು ಬಿಡಿಎ ತಕ್ಷಣವೇ ಪಾಲಿಕೆಗಳಿಗೆ ಹಸ್ತಾಂತರಿಸಲಿದ್ದು, ಸಾರ್ವಜನಿಕರ ಅಲೆದಾಟ ತಪ್ಪಲಿದೆ.
ಗಮನಿಸಬೇಕಾದ ಇತರೆ ಅಂಶಗಳು:
* ಭೂ ವಿವಾದವಿರುವ ಪ್ರದೇಶಗಳನ್ನು ಹಸ್ತಾಂತರಿಸುವಂತಿಲ್ಲ.
* ನಾಗರಿಕ ಸೌಲಭ್ಯ (CA) ನಿವೇಶನಗಳು ಬಿಡಿಎ ಮಾಲೀಕತ್ವದಲ್ಲೇ ಇರಲಿವೆ.
* ಉದ್ಯಾನವನ ಮತ್ತು ಆಟದ ಮೈದಾನಗಳನ್ನು ಕರ್ನಾಟಕ ಪಾರ್ಕ್ ಕಾಯ್ದೆಯಡಿ ಸಂರಕ್ಷಿಸಬೇಕು.























