ಬೆಂಗಳೂರು,ಜ.11 www.bengaluruwire.com : ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ವಾಹನ ಮಾಲೀಕರು ಮತ್ತು ವಾಯುಮಾಲಿನ್ಯ ತಪಾಸಣಾ (ಪಿಯುಸಿ) ಕೇಂದ್ರಗಳ ಮಾಲೀಕರು ತಾಂತ್ರಿಕ ವೈಫಲ್ಯದ ಸುಳಿಯಲ್ಲಿ ಸಿಲುಕಿದ್ದಾರೆ.
‘ವಾಹನ್’ ಪೋರ್ಟಲ್ ಮತ್ತು ಪಿಯುಸಿ ಸಾಫ್ಟ್ವೇರ್ ಇಂಟಿಗ್ರೇಷನ್ (ಸಂಯೋಜನೆ) ಸರಿಯಾಗಿ ಆಗದ ಕಾರಣ, ವಾಹನ ಮಾಲೀಕರಿಗೆ ಸಂಚಾರ ಪೊಲೀಸರಿಂದ ದಂಡದ ಬರೆ ಬೀಳುತ್ತಿದ್ದರೆ, ಇತ್ತ ಪಿಯುಸಿ ಕೇಂದ್ರಗಳು ಕಾರ್ಯನಿರ್ವಹಿಸಲಾಗದೆ ಬಾಗಿಲು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಈ ಗಂಭೀರ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ, ವಾಯುಮಾಲಿನ್ಯ ತಪಾಸಣೆ ಕೇಂದ್ರ ಮಾಲೀಕರ ಸಂಘ ಹಾಗೂ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಒಗ್ಗೂಡಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ತುರ್ತು ಪತ್ರ ಬರೆದು ಆಗ್ರಹಿಸಿವೆ.
ಏನಿದು ತಾಂತ್ರಿಕ ಎಡವಟ್ಟು?:

ವಾಹನ ಮಾಲೀಕರು ಅಧಿಕೃತ ಕೇಂದ್ರಗಳಲ್ಲಿ ಹೊಗೆ ತಪಾಸಣೆ ನಡೆಸಿ ಪ್ರಮಾಣಪತ್ರ (Emission Test Certificate) ಪಡೆದಿದ್ದರೂ, ಆ ಮಾಹಿತಿ ವಾಹನ್ ಪೋರ್ಟಲ್, ಸಾರಿಗೆ ಇಲಾಖೆಯ ವೆಬ್ಸೈಟ್ ಅಥವಾ ‘ಎಂ-ಪರಿವಾಹನ್’ (mParivahan) ಆ್ಯಪ್ಗಳಲ್ಲಿ ಅಪ್ಡೇಟ್ ಆಗುತ್ತಿಲ್ಲ. ಇದರಿಂದಾಗಿ ಅಂತರರಾಜ್ಯ ಸಂಚಾರ ಮಾಡುವ ಪ್ರವಾಸಿ ವಾಹನಗಳು ಮತ್ತು ವಾಣಿಜ್ಯ ವಾಹನಗಳನ್ನು ಪೊಲೀಸರು ಅಡ್ಡಗಟ್ಟಿ ಪರಿಶೀಲಿಸಿದಾಗ, ಆನ್ಲೈನ್ನಲ್ಲಿ ಮಾಹಿತಿ ಲಭ್ಯವಿಲ್ಲ ಎಂಬ ಕಾರಣಕ್ಕೆ ಭಾರೀ ಮೊತ್ತದ ದಂಡ ವಿಧಿಸುತ್ತಿದ್ದಾರೆ. ಕೈಯಲ್ಲಿ ಅಸಲಿ ಪ್ರಮಾಣಪತ್ರವಿದ್ದರೂ ತಾಂತ್ರಿಕ ದೋಷದಿಂದಾಗಿ ಚಾಲಕರು ಕಿರುಕುಳ ಅನುಭವಿಸುವಂತಾಗಿದೆ ಎಂದು ಸಂಘಟನೆಗಳು ದೂರಿದೆ.
ಪಿಯುಸಿ ಕೇಂದ್ರಗಳಿಗೆ ಸಂಕಷ್ಟ:
ಮತ್ತೊಂದೆಡೆ, ಪಿಯುಸಿ ಪ್ರಮಾಣಪತ್ರಗಳಿಗೆ ಅಗತ್ಯವಿರುವ ‘ಹೋಲೋಗ್ರಾಂ’ಗಳ ತೀವ್ರ ಕೊರತೆ ಎದುರಾಗಿದೆ. ಇದರಿಂದಾಗಿ ಹಲವು ಅಧಿಕೃತ ಪಿಯುಸಿ ಕೇಂದ್ರಗಳು ಗ್ರಾಹಕರಿಗೆ ಸೇವೆ ನೀಡಲಾಗದೆ ಅತಂತ್ರ ಸ್ಥಿತಿಯಲ್ಲಿವೆ. ಈಗಾಗಲೇ ಹಲವು ಕೇಂದ್ರಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ನಕಲಿ ಹಾವಳಿಯ ಎಚ್ಚರಿಕೆ:
ಸದ್ಯ ಜಾರಿಯಲ್ಲಿರುವ ವ್ಯವಸ್ಥೆ ದುರ್ಬಲಗೊಂಡಿರುವುದರಿಂದ ನಕಲಿ ಪಿಯುಸಿ ಪ್ರಮಾಣಪತ್ರ ನೀಡುವ ದಂಧೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಹಳೆಯ ಸಾಫ್ಟ್ವೇರ್ ಬದಲಿಸಿ, ಯಾರು ಕೂಡ ಟ್ಯಾಂಪರ್ ಮಾಡಲು ಸಾಧ್ಯವಾಗದಂತಹ (Tamper-proof) ಭದ್ರತಾ ತಂತ್ರಜ್ಞಾನವನ್ನು ಜಾರಿಗೆ ತರಬೇಕು ಎಂಬುದು ಸಂಘಟನೆಗಳ ಪ್ರಮುಖ ಬೇಡಿಕೆಯಾಗಿದೆ.
ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳು:
* ತಕ್ಷಣವೇ ವಾಹನ್ ಮತ್ತು ಎಂ-ಪರಿವಾಹನ್ ಪೋರ್ಟಲ್ನಲ್ಲಿ ಪಿಯುಸಿ ಮಾಹಿತಿ ಸರಿಯಾಗಿ ಅಪ್ಡೇಟ್ ಆಗುವಂತೆ ಕ್ರಮ ಕೈಗೊಳ್ಳಬೇಕು.
* ತಾಂತ್ರಿಕ ದೋಷ ಸರಿಪಡಿಸುವವರೆಗೆ ವಾಹನ ಮಾಲೀಕರಿಗೆ ದಂಡ ವಿಧಿಸದಂತೆ ಪೊಲೀಸರಿಗೆ ಸುತ್ತೋಲೆ ಹೊರಡಿಸಬೇಕು.
* ಹೊಸ ವ್ಯವಸ್ಥೆ ಬರುವವರೆಗೆ ಪಿಯುಸಿ ಕೇಂದ್ರಗಳಿಗೆ ಹಾಲೋಗ್ರಾಂ ಕೊರತೆಯಾಗದಂತೆ ಪೂರೈಸಬೇಕು.
ಇದು ಕೇವಲ ಉದ್ಯಮದ ಸಮಸ್ಯೆಯಲ್ಲ, ಸಾರ್ವಜನಿಕರ ಹಿತಾಸಕ್ತಿಯ ವಿಷಯವಾಗಿದ್ದು, ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಸಂಘಟನೆಗಳು ಎಚ್ಚರಿಸಿವೆ.























