ಬೆಂಗಳೂರು, ಜ.05 www.bengaluruwire.com : ಯಲಹಂಕದ ಕೋಗಿಲು ಬಡಾವಣೆಯಲ್ಲಿ ನಡೆದ ಅನಧಿಕೃತ ಶೆಡ್ಗಳ ತೆರವು ಕಾರ್ಯಾಚರಣೆಯ ಬೆನ್ನಲ್ಲೇ, ತೆರವುಗೊಂಡ ಜಾಗದಲ್ಲಿ ಅಕ್ರಮ ವಲಸಿಗರಿಗೆ ಅಥವಾ ಬಾಂಗ್ಲಾ ನಿರಾಶ್ರಿತರಿಗೆ ಸರ್ಕಾರ ಯಾವುದೇ ಕಾರಣಕ್ಕೂ ಮರು ಆಶ್ರಯ ಕಲ್ಪಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನಾಳೆ ನಡೆಯಬೇಕಿದ್ದ ವಿನೂತನ ಪ್ರತಿಭಟನೆಯನ್ನು ಕಾರಣಾಂತರಗಳಿಂದ ಅಂತಿಮ ಹಂತದಲ್ಲಿ ಮುಂದೂಡಿದೆ.
ನಾಳೆ (ಜ.06) ಬೆಳಿಗ್ಗೆ 11.30ಕ್ಕೆ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಈ ಪ್ರತಿಭಟನೆ ನಡೆಯಬೇಕಿತ್ತು. ಈ ಚಳುವಳಿಯಲ್ಲಿ ಕರವೇ ಕಾರ್ಯಕರ್ತರು ಪಟಾಪಟಿ ಚಡ್ಡಿ ಧರಿಸಿ, ಚಾಪೆ ಹಾಸಿ, ದಿಂಬಿನೊಂದಿಗೆ ಮಲಗುವ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಆದರೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳದ ಕರವೇ, ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ತೆರವು ಮಾಡಲಾದ ಸ್ಥಳದಲ್ಲಿ ನಿರಾಶ್ರಿತರಾದವರಲ್ಲಿ ವಲಸಿಗರು ಮತ್ತು ಸ್ಥಳೀಯರ ಬಗ್ಗೆ ಗೊಂದಲ ಇರುವುದರಿಂದ
ಸತ್ಯ ಶೋಧನ ಸಮಿತಿಯಿಂದ ವರದಿ ಸಂಗ್ರಹಿಸಿ ಮುಂದಿನ ಹೋರಾಟದ ದಿನಾಂಕವನ್ನು ಪ್ರಕಟ ಮಾಡುವುದಾಗಿ ಕರವೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮ ವಲಸಿಗರಿಗೆ ಮಣೆ ಹಾಕದಂತೆ ಎಚ್ಚರಿಕೆ:

ಇತ್ತೀಚೆಗೆ ಕೋಗಿಲು ಕ್ರಾಸ್ ಬಳಿಯ ಸರ್ಕಾರಿ ಜಾಗದಲ್ಲಿದ್ದ ನೂರಾರು ಅನಧಿಕೃತ ಶೆಡ್ಗಳನ್ನು ಬಿಬಿಎಂಪಿ ಮತ್ತು ಪೊಲೀಸರು ತೆರವುಗೊಳಿಸಿದ್ದರು. ಈ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಷ್ಟೇ ಮಾತನಾಡಿದ್ದ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, “ರಾಜ್ಯದ ಸಂಪನ್ಮೂಲಗಳು ಕನ್ನಡಿಗರಿಗೆ ಮೀಸಲಾಗಬೇಕು. ಅದನ್ನು ಬಿಟ್ಟು ಸರ್ಕಾರ ವಲಸಿಗ ನಿರಾಶ್ರಿತರು ಅಥವಾ ಬಾಂಗ್ಲಾ ಅಕ್ರಮ ವಲಸಿಗರಿಗೆ ಸರ್ಕಾರಿ ಫ್ಲಾಟ್, ಮನೆ ಅಥವಾ ನಿವೇಶನಗಳನ್ನು ನೀಡಿ ಪೋಷಿಸಬಾರದು,” ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಅದರಂತೆ ಮಂಗಳವಾರ ಪ್ರತಿಭಟನೆ ನಡೆಸುವುದಾಗಿಯೂ ಹೇಳಿಕೆ ನೀಡಿದ್ದರು.
ಇಂದು ಬಿಜೆಪಿಯಿಂದ ಕೋಗಿಲು ಉಳಿಸಿ ಪ್ರತಿಭಟನೆ :

ಇನ್ನೊಂದೆಡೆ ಇಂದು “ಕೋಗಿಲು ಉಳಿಸಿ ಅಕ್ರಮ ವಲಸಿಗರನ್ನು ತೊಲಗಿಸಿ” ಘೊಷವಾಕ್ಯದೊಂದಿಗೆ ಬಿಜೆಪಿಯು ಪ್ರತಿಭಟನೆ ನಡೆಸಿತು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ವಿಶ್ವನಾಥ್, ರಾಮಮೂರ್ತಿ, ಮುನಿರತ್ನ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಬಿಜೆಪಿ ಉತ್ತರ ಘಟಕದ ಅಧ್ಯಕ್ಷ ಎಸ್.ಹರೀಶ್ ಹಾಗೂ ಇತರರು ಪಾಲ್ಗೊಂಡಿದ್ದರು.























