ಬೆಂಗಳೂರು, ಜ.04 www.bengaluruwire.com : ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡುತ್ತಿದ್ದ ಬೃಹತ್ ಅಂತರರಾಜ್ಯ ನಕಲಿ ಬಿಲ್ (Fake Invoice) ಜಾಲವೊಂದನ್ನು ಭೇದಿಸುವಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯದ ಜಾರಿದಳ (Enforcement Wing) ಯಶಸ್ವಿಯಾಗಿದೆ.
ಒಂದಲ್ಲ ಎರಡಲ್ಲ…ಬರೋಬ್ಬರಿ ₹1,464 ಕೋಟಿ ಮೌಲ್ಯದ ನಕಲಿ ವಹಿವಾಟು ನಡೆಸಿ, ಸರ್ಕಾರಕ್ಕೆ ₹355 ಕೋಟಿ ವಂಚಿಸಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯು ವಾಣಿಜ್ಯ ತೆರಿಗೆ ಇಲಾಖೆಯ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿದ್ದು, ತಮಿಳುನಾಡು ವಾಣಿಜ್ಯ ತೆರಿಗೆ ಅಧಿಕಾರಿಗಳ ಸಹಕಾರದೊಂದಿಗೆ ಈ ಅಂತರರಾಜ್ಯ ಜಾಲವನ್ನು ಮಟ್ಟಹಾಕಲಾಗಿದೆ.
ಸರಕು ಇಲ್ಲ, ಬರೀ ಬಿಲ್ ಹಾವಳಿ:

ಈ ಜಾಲವು ಸಿಮೆಂಟ್, ಕಬ್ಬಿಣ ಮತ್ತು ಸ್ಟೀಲ್ ಹಾಗೂ ಇತರೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಹೆಸರಿನಲ್ಲಿ ನಕಲಿ ವಹಿವಾಟು ನಡೆಸುತ್ತಿತ್ತು. ಯಾವುದೇ ಸರಕುಗಳ ಸಾಗಾಟವಿಲ್ಲದೆ ಕೇವಲ ಕಾಗದದ ಮೇಲೆ ₹1,464 ಕೋಟಿ ಮೊತ್ತದ ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸಿ, ಅಂದಾಜು ₹355 ಕೋಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಅನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ತಂತ್ರಜ್ಞಾನದ ಮೂಲಕ ಬೇಟೆ:
ಜಿಎಸ್ಟಿ ವ್ಯವಸ್ಥೆಯ ಸುಧಾರಿತ ಅನಾಲಿಟಿಕ್ಸ್ ಮತ್ತು ಇಲಾಖೆಯು ಆಂತರಿಕವಾಗಿ ಅಭಿವೃದ್ಧಿಪಡಿಸಿದ ‘ನಾನ್-ಜೆನ್ಯೂನ್ ಟ್ಯಾಕ್ಸ್ ಪೇಯರ್’ (NGTP) ಮಾಡ್ಯೂಲ್ ಬಳಸಿ ಈ ವಂಚನೆಯನ್ನು ಪತ್ತೆಹಚ್ಚಲಾಗಿದೆ. ಐಪಿ ಅಡ್ರೆಸ್ ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ, ನಕಲಿ ಬಿಲ್ ಸೃಷ್ಟಿಸುವ ಮತ್ತು ಐಟಿಸಿ ವರ್ಗಾವಣೆ ಮಾಡುವ ಅನುಮಾನಾಸ್ಪದ ಜಾಲದ ಸುಳಿವು ಸಿಕ್ಕಿತ್ತು.
ಮೋಸದ ಮಾದರಿ (Modus Operandi) ಹೇಗಿತ್ತು?:
ಆನ್ಲೈನ್ ಪ್ಲಾಟ್ಫಾರ್ಮ್ಗಳಿಂದ ಸ್ಟ್ಯಾಂಪ್ ಪೇಪರ್ಗಳನ್ನು ತರಿಸಿ, ನಕಲಿ ಬಾಡಿಗೆ ಒಪ್ಪಂದಗಳು, ಭೂಮಾಲೀಕರ ಮತ್ತು ಬಾಡಿಗೆದಾರರ ನಕಲಿ ಸಹಿಗಳು ಹಾಗೂ ನಕಲಿ ನೋಟರಿ ದೃಢೀಕರಣಗಳನ್ನು ಬಳಸಿ ಜಿಎಸ್ಟಿ ನೋಂದಣಿಗಳನ್ನು ಮಾಡಲಾಗಿತ್ತು. ಈ ನಕಲಿ ದಾಖಲೆಗಳ ಮೂಲಕ ‘ಶೆಲ್ ಕಂಪನಿ’ಗಳನ್ನು (Shell Entities) ಸೃಷ್ಟಿಸಿ, ಅವುಗಳ ಮೂಲಕ ನಕಲಿ ಬಿಲ್ ಹರಿದಾಡುವಂತೆ ಮಾಡಿ, ನಂತರ ಆಡಿಟ್ನಿಂದ ತಪ್ಪಿಸಿಕೊಳ್ಳಲು ಜಿಎಸ್ಟಿ ನೋಂದಣಿಯನ್ನು ತಾವೇ ರದ್ದುಗೊಳಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ನಾಲ್ವರು ಆರೋಪಿಗಳ ಬಂಧನ:
ಬೆಂಗಳೂರು, ಚೆನ್ನೈ, ವೆಲ್ಲೂರು ಮತ್ತು ಪೆರ್ನಂಪಟ್ಟುಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
* ತಮಿಳುನಾಡಿನ ಪೆರ್ನಂಪಟ್ಟು ಮೂಲದ ಸಹೋದರರಾದ ಇರ್ಬಾಜ್ ಅಹ್ಮದ್ ಮತ್ತು ನಫೀಜ್ ಅಹ್ಮದ್ (ಟ್ರಯಾನ್ ಟ್ರೇಡರ್ಸ್, ರಾಯಲ್ ಟ್ರೇಡರ್ಸ್ ಮುಂತಾದ ನಕಲಿ ಸಂಸ್ಥೆಗಳ ರೂವಾರಿಗಳು).
* ಬೆಂಗಳೂರಿನ ಎದ್ದಲ ಪ್ರತಾಪ್ ಮತ್ತು ರೇವತಿ (ಪವರ್ ಸ್ಟೀಲ್, ಪಿ.ಆರ್. ಕನ್ಸ್ಟ್ರಕ್ಷನ್ ಮುಂತಾದ ಸಂಸ್ಥೆಗಳ ರೂವಾರಿಗಳು).
ಬಂಧಿತರಿಂದ 24 ಮೊಬೈಲ್ ಫೋನ್ಗಳು, 51 ಸಿಮ್ ಕಾರ್ಡ್ಗಳು, ಪೆನ್ ಡ್ರೈವ್ಗಳು ಮತ್ತು ನಕಲಿ ರಬ್ಬರ್ ಸ್ಟ್ಯಾಂಪ್ಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಎಸ್ಟಿ ವಂಚಕರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದ್ದು, ತಂತ್ರಜ್ಞಾನ ಆಧಾರಿತ ಕಾರ್ಯಾಚರಣೆಗಳನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ವಾಣಿಜ್ಯ ತೆರಿಗೆ ದಕ್ಷಿಣ ವಲಯದ ಜಾರಿದಳ ಪ್ರಕಟಣೆಯಲ್ಲಿ ತಿಳಿಸಿದೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.























