ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.16 www.bengaluruwire.com : ರಾಜ್ಯದಲ್ಲಿ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವ್ಯವಹಾರಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ‘ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ-2025’ಕ್ಕೆ ಸೋಮವಾರ ವಿಧಾನಸಭೆಯಲ್ಲಿ ಚರ್ಚೆಯ ಬಳಿಕ ಅಂಗೀಕಾರ ದೊರೆತಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಈ ಹಿಂದೆ ಮಂಡಿಸಿದ್ದರು. ಮಂಗಳವಾರ ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡರು ವಿಧೇಯಕದ ಮೇಲೆ ಚರ್ಚೆ ಕೈಗೆತ್ತಿಕೊಂಡರು. ಕೊನೆಯಲ್ಲಿ ಈ ವಿಧೇಯಕವು ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಿತು. ಸಣ್ಣಪುಟ್ಟ ಅಪರಾಧಗಳಿಗೆ ಇದ್ದ ಜೈಲು ಶಿಕ್ಷೆಯನ್ನು ರದ್ದುಗೊಳಿಸಿ, ಭಾರಿ ಮೊತ್ತದ ದಂಡವನ್ನು ವಿಧಿಸಲು ಅವಕಾಶ ಕಲ್ಪಿಸಿದೆ.

ವಿಧೇಯಕವನ್ನು ಸದನದ ಸದಸ್ಯರ ಚರ್ಚೆಗೆ ಮುಂದಿಟ್ಟು ವಿವರಣೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಇದೊಂದು ಸರಳ ವಿಧೇಯಕ. ಇದರಲ್ಲಿರುವುದು ದೇಶದ ಹಳೆಯ ಕಾನೂನು. ಬಹುತೇಕ ರಾಜ್ಯಗಳಲ್ಲಿ ಹೋಲಿಕೆ ಇರುವ ಕಾನೂನು. ಈ ಹಿಂದೆ ಕೇಂದ್ರ ಸರ್ಕಾರ ಮಾದರಿ ವಿಧೇಯಕವನ್ನು ರೂಪಿಸಿದ ನಂತರ ಅದನ್ನು ಎಲ್ಲಾ ರಾಜ್ಯಗಳೂ ಒಂದೇ ಮಾದರಿಯಲ್ಲಿ ಅಳವಡಿಸಿಕೊಂಡಿದ್ದವು. ಆದರೆ, ಪ್ರಸ್ತುತ ಈ ವಿಧೇಯಕದಲ್ಲಿ ಕೆಲವು ಸರಳ ತಿದ್ದುಪಡಿಗಳನ್ನು ತರಲಾಗಿದೆ” ಎಂದರು.
“ಮೂಲ ವೀಧೇಯಕದಲ್ಲಿ ಉಲ್ಲಂಘನೆಯಾದರೆ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇತ್ತು. ಆದರೆ, ಇಂತಹ ಸಣ್ಣಪುಟ್ಟ ತಪ್ಪಿಗೆ ಜೈಲು ಶಿಕ್ಷೆ ಸರಿಯಲ್ಲ ಎಂಬ ಚರ್ಚೆ ಇದೀಗ ದೇಶದಾದ್ಯಂತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ತಿದ್ದುಪಡಿಯ ಕರಡನ್ನು ಸಿದ್ದಪಡಿಸಿ ನಮಗೆ ಕಳಿಸಿಕೊಟ್ಟಿದೆ. ನಾವು ಈ ತಿದ್ದುಪಡಿ ಮೂಲಕ ಹೊಸ ಕಾನೂನುಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷೆಯ ರೂಪದಲ್ಲಿ ದಂಡ ಶುಲ್ಕ ಅಧಿಕವಾಗಬಹುದು ಆದರೆ, ಜೈಲಿಗೆ ಹೋಗುವ ಅಂಶವನ್ನು ತೆಗೆದುಹಾಕಲಾಗಿದೆ” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನೂ ತಪ್ಪಿಸಬೇಕು ಎಂಬ ಸಲಹೆಗೆ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣಭೈರೇಗೌಡ ಅವರು, “ಇವತ್ತಿಗೂ ಸಣ್ಣಪುಟ್ಟ ಬಾಡಿಗೆದಾರರಿಗೆ ಶೋಷಣೆ ಆಗುತ್ತಿದೆ ಎಂಬುದು ನಿಜ. ಅಂತವರನ್ನೂ ರಕ್ಷಿಸಲು ಈ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ನಾವು ಈ ಕಾನೂನನ್ನು ಅನುಸರಣೆ ಮಾಡುವುದನ್ನೇ ಮರೆತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಈ ಕಾನೂನನ್ನು ಅನುಷ್ಠಾನ ಮಾಡಿದರೆ, ಜನರಿಗೂ ಅರಿವು ಮೂಡಿಸಿದರೆ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನು ಗಣನೀಯವಾಗಿ ತಡೆಯಬಹುದು” ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರದ ‘ಜನ್ ವಿಶ್ವಾಸ್’ (ಉಪಬಂಧಗಳ ತಿದ್ದುಪಡಿ) ಕಾಯ್ದೆಯ ಆಶಯದಂತೆ, ಬಾಡಿಗೆ ಕಾಯ್ದೆಯಡಿ ಬರುವ ಅಪರಾಧಗಳನ್ನು ನಿರಪರಾಧೀಕರಿಸುವುದು (Decriminalisation) ಮತ್ತು ದಂಡದ ಮೊತ್ತವನ್ನು ತರ್ಕಬದ್ಧಗೊಳಿಸುವುದು ಈ ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ.

ಜೈಲು ಇಲ್ಲ, ಆದರೆ ಜೇಬಿಗೆ ಭಾರೀ ಕತ್ತರಿ:
ಇದುವರೆಗೂ ಬಾಡಿಗೆ ಕಾಯ್ದೆಯ ಉಲ್ಲಂಘನೆಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ಎರಡನ್ನೂ ವಿಧಿಸಲು ಅವಕಾಶವಿತ್ತು. ಆದರೆ ನೂತನ ತಿದ್ದುಪಡಿಯ ಪ್ರಕಾರ, ಮೂಲ ಅಧಿನಿಯಮದ 53ನೇ ಪ್ರಕರಣವನ್ನು ಕೈಬಿಡಲಾಗಿದ್ದು, ಅಪರಾಧಗಳಿಗೆ ಜೈಲು ಶಿಕ್ಷೆಯ ಬದಲಾಗಿ ಕೇವಲ ದಂಡವನ್ನು (Penalty) ವಿಧಿಸಲಾಗುತ್ತದೆ. ಆದರೆ, ಈ ದಂಡದ ಮೊತ್ತವನ್ನು ಹಳೆಯ ಕಾಯ್ದೆಗಿಂತ ಹಲವು ಪಟ್ಟು ಹೆಚ್ಚಿಸಲಾಗಿದೆ.
ಪ್ರಮುಖ ಬದಲಾವಣೆಗಳು ಮತ್ತು ದಂಡದ ವಿವರ:
ಬಾಡಿಗೆ ಒಪ್ಪಂದ (Rent Agreement): ಮನೆ ಮಾಲೀಕರು ಅಥವಾ ಬಾಡಿಗೆದಾರರು ಬಾಡಿಗೆ ಒಪ್ಪಂದದ ಪ್ರತಿಯನ್ನು ನೋಂದಣಿಗೆ ಸಲ್ಲಿಸಲು ವಿಫಲರಾದರೆ, ಹಿಂದೆ ಇದ್ದ ಶಿಕ್ಷೆಯ ಬದಲಾಗಿ ₹2,000 ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ಒಪ್ಪಂದ ಸಲ್ಲಿಸುವವರೆಗೂ ವಿಳಂಬವಾಗುವ ಪ್ರತಿದಿನಕ್ಕೆ ಬರೋಬ್ಬರಿ ₹5,000 ಹೆಚ್ಚುವರಿ ದಂಡವನ್ನು ತೆರಬೇಕಾಗುತ್ತದೆ.
ಕಾನೂನು ಬಾಹಿರ ವೆಚ್ಚ: ನಿಗದಿಗಿಂತ ಹೆಚ್ಚಿನ ಅಥವಾ ಕಾನೂನುಬಾಹಿರ ವೆಚ್ಚಗಳನ್ನು (Unlawful charges) ವಸೂಲಿ ಮಾಡಿದರೆ, ಅಂತಹ ಮೊತ್ತಕ್ಕಿಂತ ಹೆಚ್ಚಿನ ₹20,000 ದವರೆಗಿನ ದಂಡವನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಒಳ ಬಾಡಿಗೆ (Sub-letting) ನಿಯಮ ಉಲ್ಲಂಘನೆ: ಬಾಡಿಗೆದಾರರು ಮಾಲೀಕರ ಅನುಮತಿಯಿಲ್ಲದೆ ಮನೆಯನ್ನು ಉಪ-ಬಾಡಿಗೆಗೆ ನೀಡಿದರೆ (Sub-let), ಅಂತಹವರಿಗೆ ₹50,000 ದವರೆಗೆ ದಂಡ ವಿಧಿಸಬಹುದಾಗಿದೆ. ಹಳೆಯ ಕಾಯ್ದೆಯಲ್ಲಿ ಈ ಮೊತ್ತ ₹5,000 ಇತ್ತು.
ಮೂಲಭೂತ ಸೌಕರ್ಯ ಸ್ಥಗಿತ: ಮನೆ ಮಾಲೀಕರು ಬಾಡಿಗೆದಾರರಿಗೆ ನೀರು, ವಿದ್ಯುತ್ನಂತಹ ಅತ್ಯಾವಶ್ಯಕ ಸೇವೆಗಳನ್ನು ಸ್ಥಗಿತಗೊಳಿಸಿದರೆ, ಸೇವೆ ಮರುಸ್ಥಾಪಿಸುವವರೆಗೆ ಪ್ರತಿದಿನಕ್ಕೆ ₹1,000 ದಂಡ ವಿಧಿಸಲಾಗುತ್ತದೆ. ಹಿಂದೆ ಈ ದಂಡದ ಮೊತ್ತ ದಿನಕ್ಕೆ ₹100 ಇತ್ತು.
ನಿಯಂತ್ರಣಾಧಿಕಾರಿಗೆ ಹೆಚ್ಚಿನ ಅಧಿಕಾರ:
ಈ ಕಾಯ್ದೆಯಡಿ ದಂಡಗಳನ್ನು ನಿರ್ಧರಿಸಲು ಮತ್ತು ವಿಧಿಸಲು ನಿಯಂತ್ರಣಾಧಿಕಾರಿಗೆ (Controller) ‘ನ್ಯಾಯ ನಿರ್ಣಯ ಅಧಿಕಾರಿ’ಯ (Adjudicating Officer) ಅಧಿಕಾರವನ್ನು ನೀಡಲಾಗಿದೆ. ಈ ಮೂಲಕ ನ್ಯಾಯಾಲಯಗಳ ಮೇಲಿನ ಹೊರೆಯನ್ನು ತಗ್ಗಿಸಿ, ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ.
ಪ್ರತಿ 3 ವರ್ಷಕ್ಕೊಮ್ಮೆ ದಂಡ ಏರಿಕೆ:
ವಿಧೇಯಕದ ಮತ್ತೊಂದು ಪ್ರಮುಖ ಅಂಶವೆಂದರೆ, ಕಾಯ್ದೆ ಜಾರಿಗೆ ಬಂದ ನಂತರ ಪ್ರತಿ ಮೂರು ವರ್ಷಗಳಿಗೊಮ್ಮೆ ಕನಿಷ್ಠ ದಂಡದ ಮೊತ್ತವನ್ನು ಶೇ.10 ರಷ್ಟು ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ.
ಒಟ್ಟಾರೆಯಾಗಿ, ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ತತ್ವದಡಿ ಈ ತಿದ್ದುಪಡಿ ತರಲಾಗಿದ್ದು, ಬಾಡಿಗೆದಾರರು ಮತ್ತು ಮಾಲೀಕರು ಕಾನೂನು ಪಾಲನೆಯಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕೆಂಬ ಎಚ್ಚರಿಕೆಯನ್ನು ಈ ವಿಧೇಯಕ ರವಾನಿಸಿದೆ.























