ಕೋಟೇಶ್ವರ (ಉಡುಪಿ), ಅ.16 www.bengaluruwire.com : ಶಿಲ್ಪ ಕಲೆಯಲ್ಲಿ ಮೂಡಿಬಂದ ಕೃತಿಗಳು ನೋಡಲು ಬಲು ಸುಂದರ. ಮನಸ್ಸಿಗೆ ಸಂತೋಷ. ಇಂತಹ ಸೃಜನಶೀಲ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರಿವರು, ಕೋಟೇಶ್ವರದ ರಥಶಿಲ್ಪಿ ಲಕ್ಷಿನಾರಾಯಣ ಆಚಾರ್ಯ (83).
ದೇವಸ್ಥಾನದ ರಥ ನಿರ್ಮಾಣದಲ್ಲಿ ದೇಶದಲ್ಲಿಯೇ ಅಪರೂಪದ ಕೌಶಲ್ಯತೆಯನ್ನು ಹೊಂದಿರುವ ರಥಶಿಲ್ಪಿ ಲಕ್ಷಿನಾರಾಯಣ ಆಚಾರ್ಯ ಉಡುಪಿ ಜಿಲ್ಲೆಯಾದ್ಯಂತ ಮನೆ ಮಾತಾಗಿದ್ದಾರೆ. ಶಿಲ್ಪಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ನಾಡಿನ ನೂರಾರು ದೇವಸ್ಥಾನಗಳಿಗೆ ಇವರು ನಿರ್ಮಿಸಿದ ರಥಗಳಲ್ಲಿ ರಥೋತ್ಸವಗಳು ಸಾಂಗವಾಗಿ ನಡೆಯುತ್ತಿವೆ. ಇವರ ಕಲಾಕೌಶಲ್ಯಕ್ಕೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ರಾಷ್ಟ್ರೀಯ ಶಿಲ್ಪಗುರು ಮತ್ತು ಜಕಣಾಚಾರಿ ಪ್ರಶಸ್ತಿಗಳಂತಹ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಅರಸಿಬಂದಿವೆ.
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು, ರಾಮಾಚಾರ್ಯ ಮತ್ತು ಜಾನಕಿಯಮ್ಮನವರ ಜ್ಯೇಷ್ಠ ಪುತ್ರನಾಗಿ 1942ರ ಅಕ್ಟೋಬರ್ 16ರಂದು ರಥಶಿಲ್ಪಿ ಲಕ್ಷಿನಾರಾಯಣ ಆಚಾರ್ಯ ಜನಿಸಿದರು. 5ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಆಚಾರ್ಯರು, ಮರದ ಕೆತ್ತನೆ ಕೆಲಸ ಮಾಡುತ್ತಿರುವ ತಂದೆಯವರೊಂದಿಗೆ ತನ್ನ 11ನೇ ವಯಸ್ಸಿನಲ್ಲಿಯೇ ಕೆಲಸ ಕಲಿಕೆಗೆ ಪ್ರಾರಂಭಿಸಿದರು. ಹೀಗೆಯೇ ಕಲಿತು ತಮ್ಮ 18ನೇ ವಯಸ್ಸಿನಲ್ಲಿ ಸ್ವತಂತ್ರವಾಗಿ ದೇವರ ಮಂಟಪ, ಪಲ್ಲಕಿ ಇತ್ಯಾದಿಗಳ ಕೆಲಸವನ್ನು ತನ್ನ ಸಹೋದರ ಶಂಕರ ಆಚಾರ್ಯನನ್ನು ಜೊತೆಗೂಡಿ ಕೆಲಸ ಆರಂಭಿಸಿದರು.

ಪ್ರಥಮವಾಗಿ ದೊಡ್ಡಮಟ್ಟದಲ್ಲಿ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಹಿಂದಿನ ಹೆಬ್ಬಾಗಿಲಿನ ಕೆಲಸ ಪ್ರಾರಂಭವಾಯಿತು. ಕುಂದಾಪುರ ತಾಲೂಕಿನ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ಬೃಹತ್ ಹೆಬ್ಬಾಗಿಲಿನ ಕೆಲಸವನ್ನು ಸತತವಾಗಿ 3 ವರ್ಷಗಳ ಕಾಲ ಅವಧಿಯಲ್ಲಿ ಪೂರ್ಣಗೊಳಿಸಲಾಯಿತು.

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಪುಷ್ಪರಥವನ್ನು ಗುರುಗಳಾದ ರಾಷ್ಪ್ರಪ್ರಶಸ್ತಿ ಪುರಸ್ಕೃತ ಗೋಪಾಡಿ ಶಿಲ್ಪಿ ವೆಂಕಟರಮಣ ಆಚಾರ್ಯರಿಂದ ದೀಕ್ಷೆ ಪಡೆದು ರಥದ ಕೆಲಸವನ್ನು 1969ರಲ್ಲಿ ಪ್ರಾರಂಭಿಸಿ ಕರ್ನಾಟಕ ಸೇರಿ ನೆರೆ ರಾಜ್ಯಗಳಾದ ಕೇರಳ, ಮಹರಾಷ್ಟ್ರ, ತಮಿಳುನಾಡು, ಆಂಧ್ರ ಇನ್ನೂ ಹಲವಾರು ಪುಣ್ಯಕ್ಷೇತ್ರಗಳ ರಥಗಳು ಇಲ್ಲಿನ ಶಿಲ್ಪ ಕೇಂದ್ರದಲ್ಲಿ ಮೂಡಿಬಂದಿವೆ.

ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ನೂತನ ಕಟ್ಟಡವನ್ನು 2021 ಇಸವಿಯಲ್ಲಿ ಪ್ರಾರಂಭಿಸಲಾಯಿತು. ಸುತ್ತಮುತ್ತಲ ಜಿಲ್ಲೆಗಳಲ್ಲೇ ಇದೊಂದು ದೊಡ್ಡ ಶಿಲ್ಪಕಲಾ ಕೇಂದ್ರವಾಗಿದೆ.


ಈತನಕ ಒಟ್ಟು 69 ಬ್ರಹ್ಮರಥ, 108 ಪುಷ್ಪರಥ, 15 ಬೆಳ್ಳಿಯ ರಥ, 1 ಇಂದ್ರರಥ, 1 ಚಂದ್ರರಥ, 11 ಬಂಡಿರಥ, 2 ಚಂದ್ರಮಂಡಲ ಸೇರಿ ಸುಮಾರು 207 ರಥಗಳ ನಿರ್ಮಾಣ ಕಾರ್ಯವನ್ನು ಈತನಕ ಕೈಗೊಳ್ಳಲಾಗಿದೆ.
ಕುಕ್ಕೆಸುಬ್ರಮಣ್ಯ ದೇವಸ್ಥಾನ, ಬೆಂಗಳೂರಿನ ಬನಶಂಕರಿ ದೇವಾಲಯ, ನಂದಿಬೆಟ್ಟದ ಬಳಿಯ ಭೋಗನಂದೀಶ್ವರ, ಧರ್ಮಸ್ಥಳ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ, ಮುರುಡೇಶ್ವರ, ಬನವಾಸಿಯ ಉಮಾ ಮಧುಕೇಶ್ವರ ಸೇರಿದಂತೆ ಪ್ರಸಿದ್ಧ ತೀರ್ಥ ಕ್ಷೇತ್ರಗಳು, ಮಠಗಳಲ್ಲಿ ಈ ಶಿಲ್ಪಕೇಂದ್ರದಲ್ಲಿ ನಿರ್ಮಿಸಿದ ರಥಗಳನ್ನು ಬಳಸಲಾಗುತ್ತಿದೆ.
ವಿವಿಧ ರೀತಿಯ ರಥಗಳು ಯಾವ್ಯಾವು? :
ರಥಗಳಲ್ಲಿ ಸಾಕಷ್ಟು ವಿಧಗಳಿವೆ. ಮಹಸ್ಯಂಧನಾ ರಥ, ಸ್ಯಂಧನಾ ರಥ, ಪುಷ್ಪ ರಥ, ಚಂದ್ರಮಂಡಲ ರಥ, ಪುಷ್ಪರಥ, ಬೆಳ್ಳಿರಥ, ಚಿನ್ನದ ರಥ, ಬಂಡಿರಥ ಸೇರಿದಂತೆ ಪ್ರಾಂತ್ಯವಾರು ದೇವಸ್ಥಾನಗಳ ಅನುಗುಣವಾಗಿ ರಥ ನಿರ್ಮಾಣ ಮಾಡಿಕೊಡುತ್ತಿದ್ದಾರೆ.
ಪ್ರಸ್ತುತ ಕಲಬುರ್ಗಿಯ ಶ್ರೀ ಸದ್ಗುರು ದತ್ತ ದಿಗಂಬರ ಮಾಣಿಕೇಶ್ವರ ಶಂಕರಲಿಂಗ ಆಶ್ರಮ ಇಲ್ಲಿನ ರಥ ತಯಾರಿಯಲ್ಲಿದ್ದು ಇದರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬೆಳ್ಳಿಯರಥ ಈಗಾಗಲೇ ನಿರ್ಮಿಸಿ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ. ಇನ್ನು ಅಯೋಧ್ಯೆಯ ಶ್ರೀ ರಾಮಮಂದಿರದ ರಥ ನಿರ್ಮಾಣದ ಜವಾಬ್ದಾರಿಯೂ ಈ ಶಿಲ್ಪಕೇಂದ್ರದ ಮೇಲಿದೆ. ತಂದೆ ಲಕ್ಷಿನಾರಾಯಣ ಆಚಾರ್ಯಯವರ ಗರಡಿಯಲ್ಲಿ ಪುತ್ರ ರಾಜಗೋಪಾಲ ಆಚಾರ್ಯ ಈ ಶಿಲ್ಪ ಕೇಂದ್ರದ ಉಸ್ತುವಾರಿಯನ್ನು ಹೊತ್ತು ಕಾಷ್ಠಶಿಲ್ಪದಲ್ಲಿ ಸಂಪ್ರದಾಯದ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಶಿಲ್ಪ ಕೇಂದ್ರದಲ್ಲಿ ಅಳವಡಿಸಿ ರಥಗಳ ನಿರ್ಮಾಣ ಮಾಡಲಾಗುತ್ತಿರುವುದು ಇಲ್ಲಿನ ವಿಶೇಷ.

“ಕೊಪ್ಪಳದ ಶ್ರೀ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನಿಂದ ಅಯೋಧ್ಯೆಯ ಶ್ರೀ ರಾಮಮಂದಿರದ ರಥ ನಿರ್ಮಾಣದ ಹೊಣೆ ನಮಗೆ ದೊರೆತಿರುವುದು ನಮ್ಮ ಪುಣ್ಯ. ಅಯೋಧ್ಯೆ ದೇವಸ್ಥಾನದ ರಥಬೀದಿ ನಿರ್ಮಾಣ ಪೂರ್ಣವಾದ ಬಳಿಕ ಈ ಕೇಂದ್ರದಲ್ಲಿ ರಥನಿರ್ಮಾಣ ಕಾರ್ಯವನ್ನು ಒಂದೂವರೆ ವರ್ಷದ ಒಳಗಾಗಿ ಪೂರ್ಣಗೊಳಿಸಲಾಗುವುದು. ಈ ರಥ ನಿರ್ಮಾಣಕ್ಕೆ ಅದರದ್ದೇ ಆದ ಕಾನೂನು ಪ್ರಕ್ರಿಯೆಗಳಿದ್ದು, ಭದ್ರತೆಯೊಂದಿಗೆ ನಿರ್ಮಾಣ ಕಾರ್ಯ ಮಾಡಬೇಕಿದೆ” ಎಂದು ರಥಶಿಲ್ಪಿ ಲಕ್ಷಿನಾರಾಯಣ ಆಚಾರ್ಯ ಅವರೊಂದಿಗೆ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅವರ ಪುತ್ರ ರಾಜಗೋಪಾಲ ಆಚಾರ್ಯ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಈಗಾಗಲೇ ರಥ ನಿರ್ಮಾಣಕ್ಕೆ ಅಗತ್ಯವಾದ ಮರಗಳನ್ನು ತರಿಸಿ ಇಡಲಾಗಿದೆ. ಈತನಕ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಿಂದ 206 ವಿವಿಧ ರೀತಿಯ ರಥಗಳನ್ನು ನಿರ್ಮಿಸಿ ಹಲವು ದೇವಸ್ಥಾನಗಳಿಗೆ ಈಗಾಗಲೇ ಹಸ್ತಾಂತರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಒಟ್ಟಾರೆ ಕಾಷ್ಠ ಶಿಲ್ಪ ಕ್ಷೇತ್ರದಲ್ಲಿ ರಥಗಳ ನಿರ್ಮಾಣದಂತಹ ಅಪರೂಪದ ಕಲೆಯನ್ಙು ತಮ್ಮ ಅಪಾರ ಅನುಭವ, ಸೂಕ್ಷ್ಮ ಕೆತ್ತನೆಯ ಕೌಶಲ್ಯತೆ, ಸೃಜನಶೀಲತೆ, ಅಪಾರ ಸಮಯವನ್ನು ಮೀಸಲಿಟ್ಟು ಕಲಾಸೇವೆ ಮಾಡಿರುವ ಲಕ್ಷಿನಾರಾಯಣ ಆಚಾರ್ಯರ ಈ ಕಲಾಪರಂಪರೆಯನ್ನು ಅವರ ಪುತ್ರ ರಾಜಗೋಪಾಲ ಆಚಾರ್ಯರು ಹಾಗೂ ಸಾವಿರಾರು ಶಿಷ್ಯವರ್ಗದ ಮೂಲಕ ಜೀವಂತವಾಗಿರಿಸಲು ಸಾಧ್ಯವಾಗಿದೆ.






















