ಬೆಂಗಳೂರು, ಅ.16 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಡಾಂಬರೀಕರಣ ಹಾಗೂ ವಾರ್ಡ್ ರಸ್ತೆ, ಚರಂಡಿಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟು ₹2200 ಕೋಟಿಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಎಲ್ಲಾ ಐದು ಬೆಂಗಳೂರು ನಗರ ಪಾಲಿಕೆಗಳ ಆಯುಕ್ತರಿಗೆ ಸೂಚಿಸಿದ್ದಾರೆ.
ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಡಾಂಬರೀಕರಣಕ್ಕಾಗಿ ಅಂದಾಜು ₹1100.00 ಕೋಟಿ ಮೊತ್ತದ ಕ್ರಿಯಾ ಯೋಜನೆಯನ್ನು ‘ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆ’ಯಡಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಬೇಕಿದೆ.
ಇನ್ನು ವಾರ್ಡ್ ರಸ್ತೆಗಳು, ಚರಂಡಿಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಅಂದಾಜು ₹1100.00 ಕೋಟಿ ಮೊತ್ತದ ಕ್ರಿಯಾ ಯೋಜನೆಯನ್ನು ‘ಮುಖ್ಯಮಂತ್ರಿಗಳ ವಿವೇಚನಾ ನಿಧಿ’ಯಡಿ ಕೈಗೊಳ್ಳಲಾಗುತ್ತಿದ್ದು, ಈ ಬಗ್ಗೆ ಸರ್ಕಾರಕ್ಕೆ ಸಲ್ಲಿಸಬೇಕು.
ಅನುಷ್ಠಾನಕ್ಕೆ ಸೂಚನೆಗಳು:

ಈ ಎರಡೂ ಪ್ರತ್ಯೇಕ ಕ್ರಿಯಾ ಯೋಜನೆಗಳನ್ನು ಐದು ನಗರ ಪಾಲಿಕೆಗಳಿಂದ (ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ಪಡೆದು, ಪರಿಶೀಲಿಸಿ, ಕ್ರೋಢೀಕರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದೆ.
ಒಂದೇ ವಿನ್ಯಾಸ ಕಡ್ಡಾಯ:
ರಸ್ತೆಗಳ ನಿರ್ಮಾಣ ಮತ್ತು ಅಂದಾಜು ಪಟ್ಟಿ ತಯಾರಿಕೆಯಲ್ಲಿ ಹಾಗೂ ನಿಗದಿಪಡಿಸಿರುವ ಅಂದಾಜು ಮೊತ್ತದಲ್ಲಿ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಏಕರೂಪತೆ ಮತ್ತು ಏಕವಿನ್ಯಾಸ (Uniform Design) ಇರುವಂತೆ ನೋಡಿಕೊಳ್ಳಬೇಕು.
ಮಾರ್ಗಸೂಚಿ ಪಾಲನೆ:
ಕಾಮಗಾರಿಗಳ ಕ್ರಿಯಾ ಯೋಜನೆ ಅಂದಾಜು ಪಟ್ಟಿ ಸಲ್ಲಿಸುವಾಗ ‘ನಮ್ಮ ರಸ್ತೆ ಕೈಪಿಡಿ’ (Namma Raste Kai Pidi) ಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು, ಮುಖ್ಯ ಅಭಿಯಂತರರಿಂದ ದೃಢೀಕರಣ ಪಡೆಯಬೇಕು. ಅಂದಾಜು ಪಟ್ಟಿಗಳನ್ನು ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯ ಪ್ರಚಲಿತ ಎಸ್.ಆರ್ ದರಗಳನ್ವಯ ಸಿದ್ಧಪಡಿಸಬೇಕು.
* ಅವಶ್ಯಕತೆ ಖಚಿತಪಡಿಸುವಿಕೆ: ಕಾಮಗಾರಿಗಳು ಸಾರ್ವಜನಿಕ ಸುಗಮ ಸಂಚಾರ ದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿವೆ ಎಂಬುದನ್ನು ಮುಖ್ಯ ಅಭಿಯಂತರರಿಂದ ದೃಢೀಕರಿಸಬೇಕು.
ಪುನರಾವರ್ತನೆ ಇಲ್ಲದಿರುವಿಕೆ:
ಸಲ್ಲಿಸಲಾಗುವ ಕಾಮಗಾರಿಗಳು ಈ ಹಿಂದೆ ಯಾವುದೇ ಕ್ರಿಯಾಯೋಜನೆಯಲ್ಲಿ ಒಳಗೊಂಡಿರುವುದಿಲ್ಲ ಮತ್ತು ಪುನರಾವರ್ತನೆ ಆಗಿರುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅಲ್ಲದೆ, ಯಾವುದೇ ಕಾಮಗಾರಿಗಳು ದೋಷಮುಕ್ತ ಅವಧಿಯಲ್ಲಿ (Defect Liability Period) ಇಲ್ಲದೇ ಇರುವ ಬಗ್ಗೆ ದೃಢೀಕರಣ ಪಡೆಯಬೇಕು. ಈ ಕ್ರಮಗಳಿಂದ ನಗರದ ಗುಂಡಿಬಿದ್ದ ರಸ್ತೆಗಳಿಗೆ ಕಾಯಕಲ್ಪ ಸಿಗಲಿದೆ. ಆದರೆ ಆದಷ್ಟು ಶೀಘ್ರದಲ್ಲೇ ಈ ಕಾರ್ಯವನ್ನು ನಡೆಸಲು ರಾಜ್ಯ ಸರ್ಕಾರ, ಜಿಬಿಎ ಕ್ರಮ ಕೈಗೊಳ್ಳಬೇಕಿದೆ.
ಜಿಬಿಎ ಸಿಎಂ ಸಭೆಯ ಹಿನ್ನೆಲೆ:
ಈ ನಿರ್ಧಾರವು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅ.10 ರಂದು ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಯಲ್ಲಿ ಕೈಗೊಂಡ ನಿರ್ಣಯದ ಹಿನ್ನೆಲೆಯಲ್ಲಿ ಬಂದಿದೆ. ಸಭೆಯಲ್ಲಿ ಸಚಿವರು/ಶಾಸಕರು ಮುಖ್ಯ ರಸ್ತೆಗಳು, ವಾರ್ಡ್ ರಸ್ತೆಗಳು ಮತ್ತು ಚರಂಡಿಗಳ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ್ದರು.























