ಬೆಂಗಳೂರು, ಸೆ.19 www.bengaluruwire.com : ಬೃಹತ್ ಬೆಂಗಳೂರು ಪ್ರಾಧಿಕಾರವೇನೋ ರಚನೆಯಾಯ್ತು, ಐದು ನಗರ ಪಾಲಿಕೆಗಳ ರಸ್ತೆಗಳ ತುಂಬಾ ಗುಂಡಿಗಳದ್ದೇ ದರ್ಬಾರ್. ಅತ್ತ ನಿಗದಿತ ವೇಗದಲ್ಲೂ ವಾಹನ ಚಲಿಸಲಾಗದೆ, ಮಧ್ಯೆ ಮಧ್ಯೆ ಬರುವ ಮಳೆಯಲ್ಲೇ ಟ್ರಾಫಿಕ್ ಕಿರಿ ಕಿರಿ ತಾಳಿಕೊಂಡು ಇರುವ ಗುಂಡಿಗಳ ಮಧ್ಯೆ ಡಾಂಬರ್ ರಸ್ತೆಯ ಮೇಲೆ ಟೂವೀಲರ್ ಓಡಿಸೋದು ಸರ್ಕಸ್ ಗಿಂತ ದೊಡ್ಡದು.
ನಗರದ ಪ್ರಮುಖ ಆರ್ಟಿಯಲ್, ಸಬ್ ಆರ್ಟೀಯಲ್ ರಸ್ತೆ ಒತ್ತಿಟ್ಟಗಿರಲಿ ವಾರ್ಡ್ ರಸ್ತೆಯನ್ನ ಕೇಳೋರಿಲ್ಲ. ಇಲ್ಲಿ ರಸ್ತೆಯಲ್ಲಿ ಗುಂಡಿಯಿದ್ಯಾ? ಅಥವಾ ಗುಂಡಿಯಲ್ಲಿ ಡಾಂಬರ್ ಕಿತ್ತುಬಂದ ರೋಡ್ ಇದ್ಯಾ ಅಂತಂದ್ರೆ ಗುಂಡಿ ರಸ್ತೆಯಿದು ಅನ್ನಬಹುದು. ಅಂದಹಾಗೆ ಹಿಂದಿನ ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ, ಅಂದರೆ ಈಗ ಹೊಸದಾಗಿ ರಚನೆಯಾದ ಪಶ್ಚಿಮ ನಗರ ಪಾಲಿಕೆಯಲ್ಲಿದೆ ಗುಂಡಿಗಳ ರಾಜ ರಸ್ತೆ.
100 ಮೀಟರ್ ರಸ್ತೆಯಲ್ಲಿದೆ ನೂರಾರು ಗುಂಡಿಗಳು :
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಸರ್ಕಾರಿ ಮುದ್ರಣಾಲಯ ಬಡಾವಣೆಯಲ್ಲಿ ಎರಡನೇ ಮುಖ್ಯರಸ್ತೆಗೆ ತಾಗಿಕೊಂಡಂತಿರುವ 30 ಅಡಿ ಅಗಲ, ಸುಮಾರು 100 ಮೀಟರ್ ಉದ್ದದ ಈ ರಸ್ತೆಗೆ ಟಾರ್ ಅಥವಾ ಗುಂಡಿ ಮುಚ್ಚದೇ 4-5 ವರ್ಷಗಳಾಗಿದೆ. ವಯಸ್ಸಾದವರು, ಮಕ್ಕಳು- ಮಹಿಳೆಯರೆನ್ನದೆ ಹಲವಾರು ಮಂದಿ ಈ ರಸ್ತೆಯಲ್ಲಿ ಚಲಿಸಿ ಗಾಡಿಯಿಂದ ಬಿದ್ದು ಎದ್ದಿದ್ದಾರೆ. ಕೆಲವರಿಗೆ ಮೂಳೆ ಮುರಿತಗಳಾಗಿದೆ. ಕೆಲವರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆ ಸೇರಿಸಿದ್ದಾರೆ.

ಈ ರಸ್ತೆಯಲ್ಲಿ ವಾಹನದ ಗರಿಷ್ಠ ವೇಗ 10KM :
ಈ ರಸ್ತೆಯಲ್ಲಿ ಕಾರು- ದ್ವಿಚಕ್ರವಾಹನ ಯಾವುದೇ ವಾಹನವಿಲ್ಲದೇ 10-12 ಕಿ.ಮೀ ವೇಗದಲ್ಲೂ ಚಲಿಸಲಾಗದಷ್ಟು ಹದಗೆಟ್ಟು ಹೋಗಿದೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ಬಿಬಿಎಂಪಿ ಸಹಾಯವಾಣಿಗೆ, ಪಾಲಿಕೆಯ ಮೊಬೈಲ್ ಆಪ್ ಗೆ ದೂರು ನೀಡಿದರೂ ರಸ್ತೆಗುಂಡಿ ಸರಿಪಡಿಸಲು ಹೋಗಿಲ್ಲ. ಇಲ್ಲಿನ ಅತ್ಯಂತ ದೊಡ್ಡ ಗುಂಡಿಯಲ್ಲಿ ಮಳೆ ನೀರು ತುಂಬಿದನ್ನು ಕಂಡರೆ ಯಾವುದೋ ಉಪಖಂಡ ಕಂಡಂತಾಗುತ್ತೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಇದೇ ರಸ್ತೆಯಲ್ಲಿ ಮನೆಯಿರುವ ಸ್ಥಳೀಯ ನಿವಾಸಿ, “ಗೌರ್ಮೆಂಟ್ ಪ್ರೆಸ್ ಲೇಔಟ್ ಬಡಾವಣೆಯಲ್ಲಿ ಹಲವು ರಸ್ತೆಗಳಿವೆ. ಆದರೆ ಈ ರಸ್ತೆಯಲ್ಲಿರುವಷ್ಟು ಗುಂಡಿಗಳು ಎಲ್ಲೂ ಇಲ್ಲ. ರಸ್ತೆ ಗುಂಡಿಗಳ ಬಗ್ಗೆ ಸ್ಪರ್ಧೆ ಏರ್ಪಡಿಸಿದರೆ ಬಹುಶಃ ಇದೇ ರಸ್ತೆಗೆ ಪ್ರಶಸ್ತಿ ಬರುತ್ತೆ. ರಸ್ತೆ ಸರಿಪಡಿಸಿ ಅಂತ ಪಾಲಿಕೆಯವರಿಗೆ ಹಲವು ಬಾರಿ ತಿಳಿಸಿದ್ದೇವೆ. ಜನಪ್ರತಿನಿಧಿಗಳೇ ಇಲ್ಲದೆ, ಬೆಂಗಳೂರಿನ ರಸ್ತೆಗಳು ಕುಲಗೆಟ್ಟು ಹೋಗಿದೆ. ಜನರಿಗೆ ಅವಶ್ಯಕತೆಯಿರುವ ಯೋಜನೆಗಳು, ರಸ್ತೆಗಳನ್ನು ತ್ವತಿತಗತಿಯಲ್ಲಿ ಅಭಿವೃದ್ಧಿಪಡಿಸಬೇಕು. ನಮ್ಮ ಮನೆಯಿರುವ ಈ ರಸ್ತೆಗೆ ಡಾಂಬರ್ ಹಾಕಿ ಗುಂಡಿ ಮುಚ್ಚುವ ಬದಲು, ಪೂರ್ತಿಯಾಗಿ ಟಾರ್ ಹಾಕಿದರೆ ಒಳಿತು. ಇಲ್ಲಾಂದ್ರೆ ಮತ್ತೆ ಗುಂಡಿ ಬೀಳುವುದು ನಿಶ್ಚಿತ” ಎನ್ನುತ್ತಾರೆ ಅವರು.
ಒಂದೆಡೆ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, “ನಗರದ ರಸ್ತೆಗುಂಡಿ ಮುಚ್ಚಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಮಳೆ ಬಂದಾಗ ಗುಂಡಿಗಳು ಬೀಳುವುದು ಸಹಜ. ನಾವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಿಲ್ಲ. ದೆಹಲಿ, ಮಹಾರಾಷ್ಟ್ರದಲ್ಲೂ ರಸ್ತೆಯಲ್ಲಿ ಗುಂಡಿಯಿದೆ ಬನ್ನಿ ತೋರಿಸುತ್ತೀನಿ” ಅಂತಾರೆ. ಅವರು ಅಕ್ಕಪಕ್ಕದ ರಾಜ್ಯಗಳತ್ತ ಬೊಟ್ಟು ಮಾಡಿ ತೋರಿಸುವ ಮುನ್ನ ನಗರದಲ್ಲಿ ಸರ್ಕಾರಿ ಮುದ್ರಣಾಲಯ ಬಡಾವಣೆಯಲ್ಲಿನ ರಸ್ತೆಗುಂಡಿಗಳ ರೀತಿ ಸಾವಿರಾರು ಗುಂಡಿಗಳಿವೆ.
ಪ್ರತಿ ನಗರ ಪಾಲಿಕೆಗಳಿಗೆ ತಲಾ ₹25 ಕೋಟಿ :
ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ 5 ನಗರ ಪಾಲಿಕೆಗಳಿಗೆ ತಲಾ 25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ನಗರದ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಇದೇ ಶುಕ್ರವಾರದಿಂದಲೇ ಕಾಮಗಾರಿಯನ್ನು ಆರಂಭಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಆದೇಶಿಸಿದ್ದಾರೆ.
ಬೆಂಗಳೂರಿಗೆ ಈಗ 5 ಕಮಿಷನರ್, 10 ಜಂಟಿ ಆಯುಕ್ತರಿದ್ದಾರೆ :
ಮೊದಲಾದರೆ ಒಂದು ಬಿಬಿಎಂಪಿ ಈಗ ಐದು ನಗರ ಪಾಲಿಕೆ, ಅದಕ್ಕೆ ತಲಾ ಐವರು ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು, ಒಂದೊಂದು ವಲಯಗಳಿಗೆ ಒಬ್ಬೊಬ್ಬರಂತೆ 10 ಜಂಟಿ ಆಯುಕ್ತರು, ನೂರಾರು ಎಂಜಿನಿಯರ್ ಗಳು, ಗುಂಡಿ ಮುಚ್ಚಲು ಪಾಲಿಕೆಯದ್ದೇ ಸ್ವಂತ ಡಾಂಬರು ಘಟಕಗಳಿರುವಾಗ ಗುಂಡಿ ಬೀಳದಂತೆ ರಸ್ತೆಯನ್ನು ನಿರ್ವಹಣೆ ಮಾಡಲು ಸೂಕ್ತ ಯೋಜನೆ ರೂಪಿಸಲು ಆಗಲ್ವಾ?
ಸರ್ಕಾರಿ ಮುದ್ರಣಾಲಯ ಬಡಾವಣೆ ಈ ರಸ್ತೆಗೆ ಹೊಸ ಡಾಂಬರ್ ಹಾಕಲು ನಾಗರೀಕರ ಆಗ್ತಹ :
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ನೂತನ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರು ಸರ್ಕಾರಿ ಮುದ್ರಣಾಲಯದ 2ನೇ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಈ ವಾರ್ಡ್ ರಸ್ತೆಯನ್ನು ಮತ್ತು ಉಲ್ಲಾಳ ಮುಖ್ಯರಸ್ತೆ ಹಾಗೂ ಸುತ್ತಮುತ್ತಲ ವಾರ್ಡಿನ ಅಪಾಯಕಾರಿ ರಸ್ತೆ ಗುಂಡಿಗಳನ್ನು ಮುಚ್ಚಲು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.























