ಬೆಂಗಳೂರು, ಆ.04 www.bengaluruwire.com : ಬಹುನಿರೀಕ್ಷಿತ ‘ನಮ್ಮ ಮೆಟ್ರೋ’ದ ಹಳದಿ ಮಾರ್ಗವನ್ನು ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಈ ಮಾರ್ಗವು ದಕ್ಷಿಣ ಬೆಂಗಳೂರನ್ನು ನಗರದ ಕೇಂದ್ರ ಭಾಗಕ್ಕೆ ಸಂಪರ್ಕಿಸುವ ಪ್ರಮುಖ ಯೋಜನೆಯಾಗಿದೆ. ಇದೇ ಸಂದರ್ಭದಲ್ಲಿ ₹15,611 ಕೋಟಿ ವೆಚ್ಚದ ಮೆಟ್ರೋ ಹಂತ-3ರ ಕಾಮಗಾರಿಗೂ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಮ್ಮ ‘ಎಕ್ಸ್’ ಖಾತೆಗಳ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಹಳದಿ ಮಾರ್ಗ ಉದ್ಘಾಟನೆ ಮತ್ತು ಮೆಟ್ರೋ ಫೇಸ್-3 ಕಾಮಗಾರಿಯ ಶಂಕುಸ್ಥಾಪನೆಯ ಕುರಿತು ಚರ್ಚಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈಗಾಗಲೇ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ಹಳದಿ ಮಾರ್ಗದ ವಿಶೇಷತೆಗಳು :

* ಮಾರ್ಗ: ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ
* ವೆಚ್ಚ: ₹5,056.99 ಕೋಟಿ
* ಉದ್ದ: 19.5 ಕಿ.ಮೀ.
* ನಿಲ್ದಾಣಗಳು: ಆರ್.ವಿ. ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್, ಹಚ್.ಎಸ್.ಆರ್. ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೊಡಿಬಸವನಹಳ್ಳಿ, ಮಾರತಹಳ್ಳಿ ಬ್ರಿಡ್ಜ್, ಲೋಕಮಾನ್ಯ ತಿಲಕ್ ನಗರ, ದೇವಸಂದ್ರ, ಹುಸ್ಕೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ.

* ಸಂಚಾರ ವ್ಯವಸ್ಥೆ: ಆರಂಭದಲ್ಲಿ ಚಾಲಕ ರಹಿತ 3 ರೈಲುಗಳು 20-25 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ಮಾರ್ಚ್ 2026ರ ವೇಳೆಗೆ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭವಾಗಲಿದ್ದು, ಆಗ ಪ್ರತಿ 5 ನಿಮಿಷಕ್ಕೊಂದು ರೈಲು ಲಭ್ಯವಾಗಲಿದೆ.
ಪ್ರಯಾಣಿಕರಿಗೆ ಅನುಕೂಲ ಮತ್ತು ಟಿಕೆಟ್ ದರ :
ಹಳದಿ ಮಾರ್ಗವು ದಕ್ಷಿಣ ಬೆಂಗಳೂರಿನ ಜನರಿಗೆ ವಿಶೇಷವಾಗಿ ತಾಂತ್ರಿಕ ವೃತ್ತಿಪರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಆರಂಭದಲ್ಲಿ ದಿನಕ್ಕೆ 25,000 ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ. ಪೂರ್ಣ ಪ್ರಮಾಣದ ಕಾರ್ಯಾಚರಣೆ ಶುರುವಾದಾಗ ಈ ಸಂಖ್ಯೆ 3.5 ಲಕ್ಷಕ್ಕೆ ಏರಬಹುದು ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಟಿಕೆಟ್ ದರಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ, ಆದರೆ ಆರಂಭಿಕ ದರ ₹15 ರಿಂದ ಗರಿಷ್ಠ ₹85 ರ ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಪ್ರಧಾನಿ ಆಗಮನ ಖಚಿತ? :
ಪ್ರಧಾನಿ ಮೋದಿ ಅವರ ಬೆಂಗಳೂರು ಭೇಟಿಯ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ಬಂದಿದ್ದರೂ, ರಾಜ್ಯ ಸರ್ಕಾರ ಅಥವಾ ಬಿಎಂಆರ್ ಸಿಎಲ್ನಿಂದ ಅಧಿಕೃತ ದೃಢೀಕರಣ ಇನ್ನೂ ದೊರಕಿಲ್ಲ. ಆದಾಗ್ಯೂ, ಈ ಎರಡು ಮಹತ್ವದ ಯೋಜನೆಗಳಿಂದ ಬೆಂಗಳೂರು ದಕ್ಷಿಣದ ಸುಮಾರು 25 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಯೋಜನೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದಲ್ಲದೆ, ನಗರದ ಪ್ರಮುಖ ಟೆಕ್ ಹಬ್ಗಳನ್ನು ಸಂಪರ್ಕಿಸಿ ಪರಿಸರ ಸ್ನೇಹಿ ಮತ್ತು ವೇಗದ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತವೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.






















