ಬೆಂಗಳೂರು, ಜು.26 www.bengaluruwire.com : ಶ್ರಾವಣ ಮಾಸದ ಆಗಮನದೊಂದಿಗೆ ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿದ್ದು, ಬಟ್ಟೆ ಖರೀದಿಗಾಗಿ ಜನ ಬೆಂಗಳೂರಿನ ಪ್ರಮುಖ ವ್ಯಾಪಾರ ಕೇಂದ್ರವಾದ ಚಿಕ್ಕಪೇಟೆಗೆ ಮುಗಿಬೀಳುತ್ತಿದ್ದಾರೆ. ಜನಸಾಗರವೇ ಹರಿದುಬರುತ್ತಿರುವ ಚಿಕ್ಕಪೇಟೆಯಲ್ಲಿ ವ್ಯಾಪಾರ ಭರಾಟೆಯಿಂದ ಸಾಗುತ್ತಿದೆ. ಆದರೆ, ಸಂಜೆ ಮೇಲೆ ಇಲ್ಲಿನ ರಸ್ತೆಗಳು ಕತ್ತಲಲ್ಲಿ ಮುಳುಗುತ್ತದೆ.
ಕಾರಣ ಇಷ್ಟೇ ಚಿಕ್ಕಪೇಟೆ ಮತ್ತು ರಾಜಾ ಮಾರ್ಕೆಟ್ ರಸ್ತೆಗಳು ಕತ್ತಲಲ್ಲಿ ಮುಳುಗುತ್ತಿದ್ದು, ಬೀದಿ ದೀಪಗಳ ಕೊರತೆ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ತೀವ್ರವಾಗಿ ಕಾಡುತ್ತಿದೆ. ಇದು ಹಬ್ಬದ ಸೀಸನ್ನಲ್ಲಿ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ನೀಡಿದೆ.
ಕತ್ತಲೆಯ ಆತಂಕ: ಮಹಿಳೆಯರಿಗೆ ಸುರಕ್ಷತೆ ಇಲ್ಲ :
ಚಿಕ್ಕಪೇಟೆ, ರಾಜಾ ಮಾರ್ಕೆಟ್, ಡಿ.ಕೆ. ಲೇನ್ ಸೇರಿದಂತೆ ಹಲವು ಮುಖ್ಯ ರಸ್ತೆಗಳಲ್ಲಿ ವಿದ್ಯುತ್ ದೀಪದ ಕಂಬಗಳಿದ್ದರೂ, ದೀಪಗಳು ಉರಿಯುತ್ತಿಲ್ಲ. ಕೆಲವೆಡೆ ವಿದ್ಯುತ್ ಕಂಬಗಳೇ ಇಲ್ಲದಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಸಂಜೆಯಾಗುತ್ತಿದ್ದಂತೆಯೇ ಅಂಗಡಿಗಳ ಬೆಳಕನ್ನು ಹೊರತುಪಡಿಸಿ ಇಡೀ ಪ್ರದೇಶ ಕತ್ತಲಲ್ಲಿ ಮುಳುಗುತ್ತದೆ. ಇದರಿಂದ ರಾತ್ರಿ 10-11 ಗಂಟೆಯವರೆಗೂ ಅಂಗಡಿಗಳನ್ನು ತೆರೆಯಲು ವ್ಯಾಪಾರಿಗಳಿಗೆ ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಮಹಿಳೆಯರು ಕತ್ತಲಲ್ಲಿ ಓಡಾಡಲು ಭಯಪಡುತ್ತಿದ್ದು, ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ. ಸರಗಳ್ಳತನದಂತಹ ಘಟನೆಗಳ ಭೀತಿಯೂ ವ್ಯಾಪಿಸಿದೆ.

ಕೋಟಿಗಟ್ಟಲೆ ತೆರಿಗೆ ಪಾವತಿಸಿದರೂ ಮೂಲಭೂತ ಸೌಕರ್ಯವಿಲ್ಲ :
ಈ ಬಗ್ಗೆ ವ್ಯಾಪಾರಿಗಳು ತೀವ್ರ ಅಳಲು ತೋಡಿಕೊಂಡಿದ್ದಾರೆ. “ನಾವು ತುಂಬಾ ದಿನಗಳಿಂದ ಕಾದು ಕುಳಿತಿದ್ದೇವೆ. 1533 ಸಹಾಯವಾಣಿಗೆ ಮತ್ತು ಕಂಟ್ರೋಲ್ ರೂಂಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ, ಆದರೆ ಇಂದಿಗೂ ಕೆಲಸವಾಗಿಲ್ಲ” ಎಂದು ಚಿಕ್ಕಪೇಟೆಯ ಅಂಗಡಿ ವ್ಯಾಪಾರಿ ಭರತ್ ಬೇಸರ ವ್ಯಕ್ತಪಡಿಸಿದ್ದಾರೆ.
ಚಿಕ್ಕಪೇಟೆ ಮುಖ್ಯ ರಸ್ತೆಯಲ್ಲಿ ಕೋಟಿಗಟ್ಟಲೆ ತೆರಿಗೆ ಪಾವತಿಸುವ ವ್ಯಾಪಾರಿಗಳು ಇದ್ದರೂ, ಬೀದಿ ದೀಪಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಮತ್ತೊಬ್ಬ ವ್ಯಾಪಾರಿ ಆರೋಪಿಸಿದ್ದಾರೆ. ಹಬ್ಬದ ಸೀಸನ್ನಲ್ಲಿ ವಿದ್ಯುತ್ ದೀಪವಿಲ್ಲದೆ ವ್ಯಾಪಾರ ನಡೆಸಲು ಆಗುತ್ತಿಲ್ಲ, ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ವ್ಯಾಪಾರಿಗಳು ನೋವು ತೋಡಿಕೊಂಡಿದ್ದಾರೆ.
ದೀಪದ ಕಂಬ ಹಾಕದ ಬೆಸ್ಕಾಂ ವಿರುದ್ಧ ಆಕ್ರೋಶ :
ಬೆಸ್ಕಾಂಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ. ವಿದ್ಯುತ್ ಕಂಬಗಳು ಹಾಳಾಗಿವೆ, ಕೆಲವೆಡೆ ಟ್ಯೂಬ್ ಲೈಟ್ ಅಳವಡಿಸಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಿಂದ ರಾಜಾ ಮಾರ್ಕೆಟ್ ಸರ್ಕಲ್ ವರೆಗೂ ಬೀದಿ ದೀಪಗಳು ಇಲ್ಲದಿರುವುದು ರಾತ್ರಿ ಹೊತ್ತು ಭಯಾನಕ ವಾತಾವರಣ ನಿರ್ಮಿಸಿದೆ.
ಒಟ್ಟಾರೆ, ಬೆಂಗಳೂರಿನ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಪ್ರದೇಶಗಳಲ್ಲಿ ಒಂದಾದ ಚಿಕ್ಕಪೇಟೆಯಲ್ಲಿಯೇ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಬ್ಬಗಳ ಸಮಯದಲ್ಲಿಯೂ ಕತ್ತಲಲ್ಲಿ ಮುಳುಗಿರುವ ಚಿಕ್ಕಪೇಟೆ, ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.























