ಬೆಂಗಳೂರು, ಜು.25 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಮಹತ್ವಾಕಾಂಕ್ಷೆಯ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (PRR) ಯೋಜನೆಯ ಎರಡನೇ ಹಂತದ (PRR-2) ಭೂಸ್ವಾಧೀನಕ್ಕೆ ಹೊಸ, ವಿನೂತನ ಮಾದರಿಯನ್ನು ಅನುಸರಿಸಲು ನಿರ್ಧರಿಸಿದೆ.
ಬಿಡಿಎಗೆ ಆರ್ಥಿಕ ಹೊರೆಯಾಗದಂತೆ, ಮಾಗಡಿ- ಮೈಸೂರು ರಸ್ತೆ ಮಧ್ಯದಲ್ಲಿ 10.35 ಕಿ.ಮೀ ಉದ್ದದ ಮೇಜರ್ ಆರ್ಟಿಯಲ್ ರಸ್ತೆ (MAR) ನಿರ್ಮಿಸಲು ಭೂಸ್ವಾಧೀನ ಮಾಡಿಕೊಂಡ ಮಾದರಿಯಲ್ಲಿ 40 :60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡುವ ಮೂಲಕ 800 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಸಜ್ಜಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವೇ ದಿನಗಳಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಯಿದೆ.
PRR-2: 800 ಎಕರೆಗೆ 40 : 60 ಸೂತ್ರ :
ಹೊಸೂರು ರಸ್ತೆಯಿಂದ ನೆಲಮಂಗಲ ರಸ್ತೆವರೆಗೆ 35 ಕಿ.ಮೀ. ಉದ್ದವಿರುವ PRR-2 ಹಂತಕ್ಕೆ ಒಟ್ಟು 800 ಎಕರೆ ಜಮೀನಿನ ಅವಶ್ಯಕತೆಯಿದೆ. ಪ್ರಸ್ತುತ ಈ ಭಾಗದಲ್ಲಿ ನೈಸ್ ರಸ್ತೆ ಪರ್ಯಾಯವಾಗಿ ಲಭ್ಯವಿರುವುದರಿಂದ, PRR-1ಕ್ಕೆ ಹೋಲಿಸಿದರೆ ಇಲ್ಲಿ ರಸ್ತೆ ಅಭಿವೃದ್ಧಿಯ ಒತ್ತಡ ತುಸು ಕಡಿಮೆಯಿದೆ. ಅಲ್ಲದೆ, ರೈತರಿಗೆ ಮಾರ್ಗಸೂಚಿ ದರದ ಅನ್ವಯ ಭೂ ಪರಿಹಾರ ನೀಡಿದರೆ ಬಿಡಿಎಗೆ ಆರ್ಥಿಕ ಹೊರೆಯನ್ನು ಹೊರಲು ಸಾಧ್ಯವಿಲ್ಲ.


ಈ ಹಿನ್ನೆಲೆಯಲ್ಲಿ, ಮಾಗಡಿ-ಮೈಸೂರು ರಸ್ತೆ ಮಧ್ಯೆ 10.35 ಕಿ.ಮೀ. ಉದ್ದದ ಮೇಜರ್ ಆರ್ಟಿರಿಯಲ್ ರೋಡ್ (MAR) ನಿರ್ಮಾಣಕ್ಕೆ 330 ಎಕರೆ ಭೂಸ್ವಾಧೀನಪಡಿಸಿಕೊಳ್ಳಲು ಅನುಸರಿಸಿದ ಯಶಸ್ವಿ ಮಾದರಿಯನ್ನೇ PRR-2 ಗೂ ಅಳವಡಿಸಲು ನಿರ್ಧರಿಸಲಾಗಿದೆ. ಆ ಸಂದರ್ಭದಲ್ಲಿ, ರೈತರಿಗೆ 40 : 60 ಅನುಪಾತದಲ್ಲಿ (ರೈತರಿಗೆ ಅಭಿವೃದ್ಧಿಪಡಿಸಿದ ಭೂಮಿ : ಬಿಡಿಎ ) ಕೆಂಪೇಗೌಡ ಲೇಔಟ್ನಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲಾಗಿತ್ತು.
ಇದರಿಂದ ಯಾವುದೇ ಭೂ ವಿವಾದವಿಲ್ಲದೆ, ಬಿಡಿಎ ಯಶಸ್ವಿಯಾಗಿ ಭೂಸ್ವಾಧೀನ ಪೂರ್ಣಗೊಳಿಸಿತ್ತು. ಇದೇ ಮಾದರಿಯಲ್ಲಿ, PRR-2 ರಸ್ತೆಗೆ ಹೊಂದಿಕೊಂಡಂತೆ ಆರು ಹೊಸ ಬಡಾವಣೆಗಳನ್ನು ನಿರ್ಮಿಸಿ, ಭೂಮಿ ನೀಡಿದ ರೈತರಿಗೆ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲು ಬಿಡಿಎ ಯೋಜನೆ ರೂಪಿಸಿದೆ. ಇದರಿಂದ ಬಿಡಿಎಗೆ ಆರ್ಥಿಕ ಹೊರೆಯೂ ಕಡಿಮೆಯಾಗಲಿದೆ.
PRR-1: 27,000 ಕೋಟಿ ಸಾಲ, ಟೋಲ್ ಮತ್ತು ಲೇಔಟ್ ಪ್ಲಾನ್ :
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-1 (PRR-1) ಯೋಜನೆಗಾಗಿ ಬಿಡಿಎ ಹುಡ್ಕೋದಿಂದ 27,000 ಕೋಟಿ ರೂ. ಸಾಲ ಪಡೆದಿದೆ. ಇದರಲ್ಲಿ 21,000 ಕೋಟಿ ರೂ.ಗಳನ್ನು 2560 ಎಕರೆ ಭೂಸ್ವಾಧೀನಕ್ಕೆ ಬಳಸಿದರೆ, ಉಳಿದ 6000 ಕೋಟಿ ರೂ.ಗಳನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು. 73 ಕಿ.ಮೀ. ಉದ್ದದ ಈ ರಸ್ತೆಯನ್ನು 3-4 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಬಿಡಿಎ ಹೊಂದಿದೆ. ನೆಲಮಂಗಲದಿಂದ ಹೊಸೂರು ನಡುವೆ ಹೆಸರಘಟ್ಟ, ದೊಡ್ಡಬಳ್ಳಾಪುರ, ಬಳ್ಳಾರಿ ರಸ್ತೆ, ಹೊಸಕೋಟೆ ಮತ್ತು ಸರ್ಜಾಪುರ ರಸ್ತೆಗಳನ್ನು PRR-1 ಸಂಧಿಸುತ್ತದೆ.
ಹುಡ್ಕೋದಿಂದ ಪಡೆದ 27,000 ಕೋಟಿ ರೂ. ಸಾಲಕ್ಕೆ ಮೊದಲ ಮೂರು ವರ್ಷ ಯಾವುದೇ ಬಡ್ಡಿಯನ್ನು (ಶೇ.8.35 ದರದಲ್ಲಿ) ಬಿಡಿಎ ಪಾವತಿಸುವುದಿಲ್ಲ. ಆದರೆ ನಂತರ, ವಾರ್ಷಿಕ ಸುಮಾರು 3,000 ಕೋಟಿ ರೂ.ಗಳಷ್ಟು ಅಸಲು-ಬಡ್ಡಿಯನ್ನು ಬಿಡಿಎ ಹುಡ್ಕೋಗೆ ಪಾವತಿಸಬೇಕಿದೆ. ಅಷ್ಟರೊಳಗೆ PRR-1 ರಸ್ತೆ ಅಭಿವೃದ್ಧಿಪಡಿಸಿ, ವಾರ್ಷಿಕ ತಲಾ 1,000 ಕೋಟಿ ರೂ.ಗಳನ್ನು ಟೋಲ್ ಮೂಲಕ ಸಂಗ್ರಹಿಸಿ, ಅದನ್ನು ಸಾಲ ಮರುಪಾವತಿಗೆ ಬಳಸಿಕೊಳ್ಳಲು ಬಿಡಿಎ ಯೋಜಿಸಿದೆ.
ಇದರ ಜೊತೆಗೆ, PRR-1 ರಸ್ತೆಗೆ ಹೊಂದಿಕೊಂಡಿರುವ ಗ್ರಾಮಗಳನ್ನು ಗುರುತಿಸಿ, ಒಟ್ಟು ಐದು ಹೊಸ ಲೇಔಟ್ಗಳನ್ನು ನಿರ್ಮಿಸಲು ಬಿಡಿಎ ನಿರ್ಧರಿಸಿದೆ. ಈ ಬಡಾವಣೆಗಳಿಗೆ PRRನಿಂದ ಸಂಪರ್ಕ ರಸ್ತೆ, ವಿದ್ಯುತ್, ನೀರು, ಒಳಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ, ಅದರಲ್ಲಿನ ನಿವೇಶನಗಳನ್ನು ಅರ್ಜಿದಾರರಿಗೆ, ಸಿಎ ನಿವೇಶನಗಳನ್ನು ಭೋಗ್ಯಕ್ಕೆ ಹಾಗೂ ಮೂಲೆ ನಿವೇಶನಗಳನ್ನು ಹರಾಜಿನ ಮೂಲಕ ಹೆಚ್ಚಿನ ದರಗಳಲ್ಲಿ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಹುಡ್ಕೋ ಸಾಲ ತೀರಿಸಲು ಬಳಸಿಕೊಳ್ಳುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಹೊಸ ಐದು ಲೇಔಟ್ಗಳ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ಪ್ರಾಥಮಿಕವಾಗಿ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ.

NOC ಸ್ಥಗಿತ: ಸಾರ್ವಜನಿಕರ ಪರದಾಟ :
PRR-1 ಯೋಜನೆ ಹಾದುಹೋಗುವ ಸ್ಥಳದ ಸುತ್ತಮುತ್ತಲ ಗ್ರಾಮಗಳಲ್ಲಿ ಬಡಾವಣೆ ನಿರ್ಮಿಸಲು ನಿರ್ಧರಿಸಿರುವ ಬಿಡಿಎ, ಭೂಸ್ವಾಧೀನಕ್ಕೆ ನಿರ್ದಿಷ್ಟ ಸರ್ವೆ ನಂಬರ್ಗಳನ್ನು ಗುರುತಿಸುವ ಬದಲು ಇಡೀ ಗ್ರಾಮಗಳನ್ನೇ ಪಟ್ಟಿ ಮಾಡಿದೆ. ಹೀಗೆ ಪಟ್ಟಿ ಮಾಡಿದ ಗ್ರಾಮಗಳಲ್ಲಿನ ಯಾವುದೇ ಭೂಮಿಗೆ ಬಿಡಿಎ ಭೂ ಪರಿವರ್ತನೆಗೆ ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡುವುದನ್ನು ನಿಲ್ಲಿಸಿದೆ. ಭೂ ಬಳಕೆ ಉಪಯೋಗ ಬದಲಾವಣೆ (CLU), ಹೊಸ ಖಾಸಗಿ ಲೇಔಟ್ ನಿರ್ಮಾಣಕ್ಕೆ ಬೇಕಾದ ಅಭಿವೃದ್ಧಿ ಯೋಜನಾ ನಕ್ಷೆ, ಕಟ್ಟಡ ನಕ್ಷೆಗಳ ಮಂಜೂರಾತಿ, ಸೂಕ್ಷ್ಮ ವಲಯದಿಂದ ತೆರವು ಮಾಡುವುದನ್ನೂ ಸ್ಥಗಿತಗೊಳಿಸಿದೆ.
ಬಿಡಿಎನ ಈ ಕ್ರಮದಿಂದಾಗಿ, PRR-1 ವ್ಯಾಪ್ತಿಯ ಬೆಂಗಳೂರು ಉತ್ತರ, ಪೂರ್ವ ಮತ್ತು ಹೊಸಕೋಟೆ ತಾಲೂಕಿನ ಸುಮಾರು 60 ಗ್ರಾಮಗಳ ನಾಗರಿಕರು ತಮ್ಮ ದೈನಂದಿನ ಕೆಲಸಗಳಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಬಿಡಿಎ ಹಿಂದಿನ ಆಯುಕ್ತರ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಸ್ತುತ ಬಿಡಿಎ ಆಯುಕ್ತ ಮಣಿವಣ್ಣನ್ ಅವರು ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ.
ಬಿಡಿಎ ಆಯುಕ್ತರ ಖಡಕ್ ಸೂಚನೆ :

ಆಯುಕ್ತ ಕ್ಯಾಪ್ಟನ್ ಮಣಿವಣ್ಣನ್ ಅವರು, PRR-1 ಅಡಿಯಲ್ಲಿ ಪಟ್ಟಿ ಮಾಡಿರುವ 60 ಗ್ರಾಮಗಳಲ್ಲಿ ಬಡಾವಣೆ ನಿರ್ಮಾಣಕ್ಕೆ ಅಗತ್ಯವಾದ ಭೂಸ್ವಾಧೀನಪಡಿಸಿಕೊಳ್ಳುವ ಸರ್ವೆ ನಂಬರ್ಗಳನ್ನು ಆದಷ್ಟು ಶೀಘ್ರದಲ್ಲಿ ಪಟ್ಟಿ ಮಾಡಿ, ಬಿಡಿಎ ಮಂಡಳಿ ಸಭೆಯಲ್ಲಿ ಒಪ್ಪಿಗೆ ಪಡೆಯಲು ಮೌಖಿಕ ಸೂಚನೆ ನೀಡಿದ್ದಾರೆ.
ಅಲ್ಲದೆ, ಪಟ್ಟಿ ಮಾಡಿದ ಗ್ರಾಮದಲ್ಲಿ ಭೂಸ್ವಾಧೀನಕ್ಕಾಗಿ ಗುರುತಿಸಿರುವುದನ್ನು ಹೊರತುಪಡಿಸಿದ ಉಳಿದ ಪ್ರದೇಶಗಳಲ್ಲಿ ಭೂಪರಿವರ್ತನೆಗೆ ಬಿಡಿಎ ಎನ್ಒಸಿ, ನಕ್ಷೆ ಮಂಜೂರಾತಿ, ಭೂ ಉಪಯೋಗ ಬದಲಾವಣೆ ಸೇರಿದಂತೆ ಮತ್ತಿತರ ಸೇವೆಗಳನ್ನು ನೀಡುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ಬಿಡಿಎನ ಈ ಬೃಹತ್ ಯೋಜನೆ ಸ್ವಾಗತಾರ್ಹವಾಗಿದ್ದರೂ, ಭೂಸ್ವಾಧೀನ ಪ್ರಕ್ರಿಯೆ ಅಂತಿಮಗೊಳ್ಳುವ ಮೊದಲೇ ಗ್ರಾಮಗಳಲ್ಲಿನ ಭೂಮಿಗಳಿಗೆ ಭೂ ಪರಿವರ್ತನೆ ಸೇರಿದಂತೆ ಇನ್ನಿತರ ಸೇವೆಗಳನ್ನು ಸ್ಥಗಿತಗೊಳಿಸಿರುವುದು ಭೂಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಡಿಎ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಿದೆ.























