ಶಿವಮೊಗ್ಗ, ಜು.14 www.bengaluruwire.com : ಶರಾವತಿ ನದಿಯ ಹಿನ್ನೀರಿನಿಂದ ದಶಕಗಳಿಂದಲೂ ಸಂಪರ್ಕ ಕಳೆದುಕೊಂಡಿದ್ದ ಸಾಗರ ತಾಲೂಕಿನ ಹಲವು ಗ್ರಾಮಗಳಿಗೆ ಇದೀಗ ಹೊಸ ಸೇತುವೆ ಮೂಲಕ ಮುಕ್ತಿ ದೊರಕಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ನದಿಯ ಹಿನ್ನೀರಿನ ಮೇಲೆ ನಿರ್ಮಿಸಲಾದ ಭವ್ಯ ಸಿಗಂದೂರು ಸೇತುವೆ (ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ) ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಈ ಐತಿಹಾಸಿಕ ಸೇತುವೆಯು ಸಾಗರ ಮತ್ತು ಸಿಗಂದೂರು ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಪ್ರಾದೇಶಿಕ ಪ್ರವಾಸೋದ್ಯಮ ಮತ್ತು ವಾಣಿಜ್ಯಕ್ಕೆ ಹೊಸ ಚೈತನ್ಯ ನೀಡಲಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಎರಡು ಸಾವಿರದ ನಲವತ್ತೆರೆಡು ಕೋಟಿ ರೂಪಾಯಿ ವೆಚ್ಚದ ಒಂಬತ್ತು ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು.
ಕರ್ನಾಟಕದ ಅತಿದೊಡ್ಡ ಒಳನಾಡು ಸೇತುವೆ :

ಈ ತೂಗು ಸೇತುವೆಯು 2.1 ಕಿ.ಮೀ. ಉದ್ದವನ್ನು ಹೊಂದಿದ್ದು 472.08 – ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಭಾರತದ ಎರಡನೇ ಅತಿ ಉದ್ದದ ತೂಗು ಸೇತುವೆಯಾಗಿದೆ. ಜೊತೆಗೆ, ಇದು ಕರ್ನಾಟಕದ ಅತಿದೊಡ್ಡ ಒಳನಾಡು ಸೇತುವೆಯಾಗಿದ್ದು, ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮೈಲಿಗಲ್ಲು ಸ್ಥಾಪಿಸಿದೆ. ಈ ಸೇತುವೆಯು ಆಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಉತ್ತಮ ನಿದರ್ಶನವಾಗಿದೆ. ಸೇತುವೆಯ ನಿರ್ಮಾಣಕ್ಕೆ ಮಾತ್ರ ₹378.3 ಕೋಟಿ ಬಳಸಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರಿಂದ ಆಕ್ಷೇಪ :
ಆದಾಗ್ಯೂ, ಸೇತುವೆ ಉದ್ಘಾಟನೆ ಕಾರ್ಯಕ್ರಮದ ಕುರಿತು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿತ್ತು. ಕಾರ್ಯಕ್ರಮ ಮುಂದೂಡುವಂತೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯುವ ಮುಖೇನ ಮನವಿ ಮಾಡಿಕೊಂಡಿದ್ದರು.
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ, ಕಾರ್ಯಕ್ರಮವನ್ನು ಮುಂದೂಡುವಂತೆ ಹಾಗೂ ಸೂಕ್ತ ಪ್ರೋಟೋಕಾಲ್ ಅನುಸರಿಸಿ ರಾಜ್ಯದ ಪ್ರತಿನಿಧಿಗಳಿಗೂ ಸಮಾನ ಆಹ್ವಾನ ನೀಡುವಂತೆ ಮುಖ್ಯಮಂತ್ರಿಗಳು ಕೋರಿದ್ದರು ಎನ್ನಲಾಗಿದೆ. ಈ ಕುರಿತು ಪತ್ರ ವ್ಯವಹಾರವೂ ನಡೆದಿತ್ತು. ಆದರೆ, ಕೇಂದ್ರ ಸರ್ಕಾರ ಪೂರ್ವ ನಿಗದಿತ ದಿನಾಂಕದಂದೇ ಕಾರ್ಯಕ್ರಮ ನಡೆಸಲು ನಿರ್ಧರಿಸಿತು.
ಸಿಗಂದೂರು ಸೇತುವೆಯ ವಿಶೇಷತೆಗಳು ಹೀಗಿವೆ :

* ಉದ್ದ ಮತ್ತು ವಿನ್ಯಾಸ: 2.1 ಕಿ.ಮೀ. ಉದ್ದ ಮತ್ತು 16 ಮೀಟರ್ ಅಗಲವಿರುವ ಈ ಸೇತುವೆಯು 740 ಮೀಟರ್ ಕೇಬಲ್ ಆಧಾರಿತ ಭಾಗವನ್ನು ಹೊಂದಿದೆ. ಇದು ‘ಎಕ್ಸ್ಟ್ರಾಡೋಸ್ಡ್ ಬ್ಯಾಲೆನ್ಸ್ಡ್ ಕ್ಯಾಂಟಿಲಿವರ್’ ವಿನ್ಯಾಸವನ್ನು ಬಳಸಿಕೊಂಡಿದ್ದು, ಸಾಂಪ್ರದಾಯಿಕ ಸೇತುವೆಗಳಿಗಿಂತ ಹೆಚ್ಚಿನ ಸ್ಥಿರತೆ ಮತ್ತು ದೀರ್ಘಾಯುಷ್ಯವನ್ನು ಖಾತರಿಪಡಿಸುತ್ತದೆ. 11 ಮೀಟರ್ ರಸ್ತೆಮಾರ್ಗ ಮತ್ತು 1.5 ಮೀಟರ್ ಫುಟ್ಪಾತ್ಗಳು ಪ್ರಯಾಣಿಕರಿಗೆ ಅನುಕೂಲವಾಗಲಿವೆ.
* ತಾಂತ್ರಿಕ ವಿಶೇಷತೆ: 17 ಪಿಯರ್ಗಳು ಮತ್ತು ಎರಡು ಅಬಟ್ಮೆಂಟ್ಗಳನ್ನು ಬಳಸಿ ನಿರ್ಮಿಸಲಾಗಿದೆ. ಸಾಮಾನ್ಯ ಸೇತುವೆಗೆ 100 ಪಿಯರ್ಗಳು ಬೇಕಾಗುವ ಜಾಗದಲ್ಲಿ, ಇದು ಕೇವಲ 17 ಪಿಯರ್ಗಳಿಂದ ಸಿದ್ಧಗೊಂಡಿರುವುದು ತಾಂತ್ರಿಕ ಪ್ರಗತಿಗೆ ಸಾಕ್ಷಿ. ಕೇಬಲ್ಗಳು ಡೆಕ್ನ ಲಂಬ ಭಾರವನ್ನು ನೇರವಾಗಿ ಗೋಪುರಗಳಿಗೆ ವರ್ಗಾಯಿಸಿ ಸೇತುವೆಯ ಭದ್ರತೆಯನ್ನು ಹೆಚ್ಚಿಸುತ್ತವೆ.
* ಗಟ್ಟಿತನದ ಗುಣಮಟ್ಟ: ಶರಾವತಿ ನದಿಯ ಭೋರ್ಗರೆವ ಪ್ರವಾಹವನ್ನು ಸಮರ್ಥವಾಗಿ ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. 100 ವರ್ಷಗಳ ಸುದೀರ್ಘ ಆಯುಷ್ಯವನ್ನು ಖಚಿತಪಡಿಸಿಕೊಳ್ಳಲು ನಡೆಸಿದ ಲೋಡ್ ಟೆಸ್ಟಿಂಗ್ನಲ್ಲಿ, ಸೇತುವೆಯು 22 ಮಿಮೀ ವಿಚಲನದೊಂದಿಗೆ 100 ಟನ್ ಭಾರವನ್ನು ಯಶಸ್ವಿಯಾಗಿ ತಡೆದುಕೊಂಡಿದೆ.
ಸೇತುವೆಯ ಪ್ರಯೋಜನಗಳು:
* ಪ್ರಯಾಣದ ಸಮಯ ಕಡಿತ: ಸಾಗರದಿಂದ ಸಿಗಂದೂರಿಗೆ ಸುಮಾರು 80 ಕಿ.ಮೀ. ಇದ್ದ ರಸ್ತೆ ಪ್ರಯಾಣವು ಈಗ ಸುಮಾರು 16 ಕಿ.ಮೀ.ಗೆ ಇಳಿಯಲಿದ್ದು, ಇದರಿಂದ 2 ಗಂಟೆಗಳಷ್ಟು ಪ್ರಯಾಣದ ಸಮಯ ಉಳಿತಾಯವಾಗಲಿದೆ.
* ಧಾರ್ಮಿಕ ಮತ್ತು ಪ್ರವಾಸೋದ್ಯಮ ಉತ್ತೇಜನ: ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ಸುಗಮಗೊಳಿಸುತ್ತದೆ. ಕೊಲ್ಲೂರು ಮತ್ತು ಸಿಗಂದೂರು ದೇವಸ್ಥಾನಗಳನ್ನು ಸಂಪರ್ಕಿಸುವ ಮೂಲಕ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುತ್ತದೆ.
* ಪ್ರಾದೇಶಿಕ ಸಂಪರ್ಕ: ಲಿಂಗನಮಕ್ಕಿ ಜಲಾಶಯದ ನಿರ್ಮಾಣದಿಂದಾಗಿ 1960ರ ದಶಕದಲ್ಲಿ ಶರಾವತಿ ಹಿನ್ನೀರಿನಿಂದ ಬೇರ್ಪಟ್ಟ 40ಕ್ಕೂ ಹೆಚ್ಚು ಗ್ರಾಮಗಳಿಗೆ ಸಾಗರ ಮತ್ತು ಇತರ ಮುಖ್ಯ ಊರುಗಳೊಂದಿಗೆ ಸಂಪರ್ಕ ಕಲ್ಪಿಸುವ 60 ವರ್ಷಗಳ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದೆ.
* ಬದಲಿ ಸಾರಿಗೆ: ದೀರ್ಘಕಾಲದಿಂದ ಬಳಸಲಾಗುತ್ತಿದ್ದ ದೋಣಿ ಸಾರಿಗೆ ವ್ಯವಸ್ಥೆಗೆ ಇದು ಪೂರ್ಣ ವಿರಾಮ ಹಾಕಲಿದೆ. ತುರ್ತು ಸಂದರ್ಭಗಳಿಗಾಗಿ ಉಳಿದ ದೋಣಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ.
ಐತಿಹಾಸಿಕ ಹಿನ್ನೆಲೆ:
ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಸಾಗರ ತಾಲೂಕಿನ ಹಲವು ಗ್ರಾಮಗಳು ಶರಾವತಿ ಹಿನ್ನೀರಿನಿಂದ ಸಂಪರ್ಕ ಕಳೆದುಕೊಂಡು ದೋಣಿ ಸಾರಿಗೆಯನ್ನೇ ಅವಲಂಬಿಸಿದ್ದವು. ಸೇತುವೆ ನಿರ್ಮಾಣದ ಬೇಡಿಕೆ ಹಲವು ದಶಕಗಳ ಹಿಂದಿನದಾಗಿತ್ತು. 2018ರಲ್ಲಿ ಅಂದಿನ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ನಿರಂತರ ಪ್ರಯತ್ನಗಳು ಈ ಬೃಹತ್ ಯೋಜನೆ ಸಾಕಾರಗೊಳ್ಳಲು ಪ್ರಮುಖ ಕಾರಣವೆಂದು ಹೇಳಲಾಗುತ್ತದೆ.
ಅಂಬಾರಗೋಡ್ಲು-ಕಳಸವಳ್ಳಿ-ಸಿಗಂದೂರು, NH-369E ಮೂಲಕ ಈ ಸೇತುವೆ ಸಂಪರ್ಕ ಕಲ್ಪಿಸಲಿದೆ. ಈ ಸೇತುವೆ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ, ಇಡೀ ರಾಜ್ಯದ ಅಭಿವೃದ್ಧಿಗೆ ಹೊಸ ಸೇತುವೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.






















